ಚಿತ್ರದುರ್ಗ ವಿಶೇಷ; ಕೈಕೊಟ್ಟ ಮಳೆ, ಸ್ಪಿಂಕ್ಲರ್ ಮೊರೆ ಹೋದ ರೈತ
ಚಿತ್ರದುರ್ಗ, ಸೆಪ್ಟೆಂಬರ್ 24; ಚಿತ್ರದುರ್ಗ ಜಿಲ್ಲೆಯಲ್ಲಿ ನೈಋತ್ಯ ಮುಂಗಾರು ಮಳೆ ಆರಂಭದಲ್ಲಿ ಚುರುಕಾಗಿತ್ತು. ಬಿತ್ತನೆ ಸಮಯದಲ್ಲಿ ಕೃಷಿಗೆ ಅನುಕೂಲವಾಗುವಂತೆ ಮಳೆ ಬಂದಿತ್ತು. ಇದೀಗ ಅದೇ ಮಳೆ ಕೈಕೊಟ್ಟಿದೆ. ಜಿಲ್ಲೆಯಾದ್ಯಂತ ರೈತ ಬೆಳೆದ ಬೆಳೆಗಳು ಸಂಪೂರ್ಣವಾಗಿ ಕಮರಿ ಹೋಗುವ ಹಂತಕ್ಕೆ ತಲುಪಿದೆ.
ಮಳೆ ಬಂದರೂ ಕೆಲವು ಬೆಳೆಗಳು ಚಿಗುರದೇ ಇರುವ ಮಟ್ಟಕ್ಕೆ ಬಂದು ನಿಂತಿವೆ. ಉಳಿದ ಬೆಳೆಗಳಿಗಾದರೂ ಮಳೆ ಬೇಕಾಗಿದೆ. ಪ್ರತಿನಿತ್ಯ ನೂರಾರು ರೈತರು ಮಳೆಗಾಗಿ ಮೋಡಗಳನ್ನು ಎದುರು ನೋಡುತ್ತಾ ಕಾಯುತ್ತಿದ್ದಾರೆ. ಇತ್ತ ರೈತನೊಬ್ಬ ಶೇಂಗಾ ಬೆಳೆಗೆ ನೀರು ಹಾಯಿಸಲು ಸ್ಪಿಂಕ್ಲರ್ ಮೊರೆ ಹೋಗಿದ್ದಾನೆ.
ವಾರಾಂತ್ಯದವರೆಗೂ ಈ 10 ರಾಜ್ಯಗಳಲ್ಲಿ ಮಳೆ ಮುನ್ಸೂಚನೆ
ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕಾಪ್ರೆಹಳ್ಳಿ ಗ್ರಾಮದ ರೈತ ನಾಗರಾಜ್ 6 ಎಕರೆಯಲ್ಲಿ ಶೇಂಗಾ ಬೆಳೆದಿದ್ದಾರೆ. ಇದೀಗ ಶೇಂಗಾ ಬೆಳೆಗೆ ಮಳೆ ಬೇಕಾಗಿದೆ. ಮಳೆ ಬಾರದ ಹಿನ್ನೆಲೆಯಲ್ಲಿ, ಬೆಳೆ ಉಳಿಸಿಕೊಳ್ಳಲು ರೈತ ಸ್ಪಿಂಕ್ಲರ್ ಮೂಲಕ ನೀರು ಹಾಯಿಸುತ್ತಿದ್ದಾನೆ. ಪ್ರತಿದಿನ ರೈತ ಶೇಂಗಾ ಬೆಳೆಗೆ ಬೋರ್ ವೆಲ್ ನೀರನ್ನು ಸ್ಪಿಂಕ್ಲರ್ ಮೂಲಕ ಹಾಯಿಸಲಾಗುತ್ತಿದೆ.
ಪ್ರಾಣಿ- ಪಕ್ಷಿಗಳಿಂದ ಬೆಳೆ ರಕ್ಷಿಸಿಕೊಳ್ಳಲು ಸಂಡೂರು ರೈತನ ವಿನೂತನ ವಿಧಾನ
ಶೇಂಗಾ ಚಿತ್ರದುರ್ಗ ಜಿಲ್ಲೆಯ ವಾಣಿಜ್ಯ ಬೆಳೆಯಾಗಿದೆ. ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು ಭಾಗದಲ್ಲಿ ಅತಿ ಹೆಚ್ಚಾಗಿ ಬೆಳೆದಿದ್ದು, ಮಳೆ ಇಲ್ಲದೆ ಶೇಂಗಾ ಬೆಳೆ ನೆಲ ಕಚ್ಚುವ ಹಂತಕ್ಕೆ ತಲುಪಿದೆ. ಹಸಿಯಾದ ಸಂದರ್ಭದಲ್ಲಿ ಶೇಂಗಾ ಬಿತ್ತನೆ ಮಾಡಲಾಗಿತ್ತು. ಬೀಜ ಮೊಳಕೆ ಹೊಡೆದು ಎಡೆಹೊಡೆಯುವ ಹಂತ ತಲುಪಿತ್ತು.
ಮುಂಗಾರು ಹಂಗಾಮಿನ ರೈತರ ಬೆಳೆ ಸಮಿಕ್ಷೆ ಆ್ಯಪ್ ಬಿಡುಗಡೆ
ನಂತರ ಅಲ್ಪ ಪ್ರಮಾಣದಲ್ಲಿ ಮಳೆ ಸುರಿದಿತ್ತು. ಇದೀಗ ಹೂಡು ಹಿಡಿದು ಕಾಯಿ ಕಟ್ಟುವ ಹಂತಕ್ಕೆ ಬಂದಿದೆ. ಆದರೆ ಕಾಯಿ ಗಟ್ಟಿಯಾಗುವ ಸಮಯದಲ್ಲಿ ಮಳೆ ಕೈಕೊಟ್ಟು ನಿಂತಿದ್ದು, ಭೂಮಿಯಲ್ಲಿ ತೇವಾಂಶ ಕಡಿಮೆ ಇರುವುದರ ಜೊತೆಗೆ ಉತ್ತರೆ ಮಳೆ ಸಮಯದಲ್ಲಿ ಉರಿಬಿಸಿಲು ಹೆಚ್ಚು ಇರುವುದರಿಂದ ಬೆಳೆ ಬಾಡಿ ನಿಂತಿದೆ. ಅದರಲ್ಲೂ ಒಂದು ಶೇಂಗಾ ಗಿಡದಲ್ಲಿ 5 ರಿಂದ 10, 15 ಕಾಯಿಗಳು ಹಿಡಿದಿದೆ ಎನ್ನಬಹುದು.
ಶೇಂಗಾ ಬಿತ್ತನೆಯಾಗಿದೆ
ಜಿಲ್ಲೆಯಲ್ಲಿ 1.40 ಲಕ್ಷ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಮಾಡಲಾಗಿದೆ. ಚಳ್ಳಕೆರೆ 85 ಸಾವಿರ ಎಕರೆ ಹೆಕ್ಟೇರ್, ಹಿರಿಯೂರು 25 ಸಾವಿರ, ಚಿತ್ರದುರ್ಗ 5 ಸಾವಿರ, ಹೊಸದುರ್ಗ 2 ಸಾವಿರ, ಹೊಳಲ್ಕೆರೆ 230 ಎಕರೆ ಹಾಗೂ ಉಳಿದ ಹೆಕ್ಟೇರ್ ಪ್ರದೇಶದಲ್ಲಿ ಮೊಳಕಾಲ್ಮೂರು ತಾಲ್ಲೂಕಿನಲ್ಲಿ ಬಿತ್ತನೆ ಮಾಡಿದ್ದಾರೆ. ಒಂದು ವೇಳೆ ಮಳೆ ಬಾರದೆ ಇದ್ದರೆ ಬೆಳೆಗಳು ರೈತರ ಕೈಸೇರುವುದು ಅನುಮಾನವಾಗಿರುತ್ತದೆ.
ಒಣಗುತ್ತಿರುವ ಇತರೆ ಬೆಳೆಗಳು
ಶೇಂಗಾ ಹೊರತುಪಡಿಸಿ ಮೆಕ್ಕೆಜೋಳ, ರಾಗಿ, ಸೂರ್ಯಕಾಂತಿ, ತೊಗರಿ, ಜೋಳ, ಹುರುಳಿ ಇನ್ನು ಮುಂತಾದ ಬೆಳೆಗಳಿಗೆ ಮಳೆಯ ಅವಶ್ಯಕತೆ ಇದೆ. ಈಗಾಗಲೇ ಈ ಬೆಳೆಗಳು ಕಾಯಿ ಹಾಗೂ ತೆನೆ ಒಡೆದು, ಕಾಳಿನ ಹಂತಕ್ಕೆ ಬಂದಿವೆ. ಸರಿಯಾದ ಸಮಯಕ್ಕೆ ಮಳೆ ಬರೆದೆ ಇರುವುದರಿಂದ ನಿರೀಕ್ಷಿತ ಪ್ರಮಾಣದಲ್ಲಿ ಇಳುವರಿ ಬಂದಿಲ್ಲ. ಒಂದೆರಡು ದಿನಗಳಲ್ಲಿ ಮಳೆ ಬಂದರೆ ಎಲ್ಲಾ ಬೆಳೆಗಳು ಅಲ್ಪಸ್ವಲ್ಪ ಉಳಿದು ರೈತರ ಕೈ ಸೇರಬಹುದು. ಒಂದು ವೇಳೆ ಮಳೆ ಬರಲಿಲ್ಲ ಎಂದರೇ ಬೆಳೆಗಳು ಸಂಪೂರ್ಣವಾಗಿ ಹಾಳಾಗಿ ಹೋಗುತ್ತದೆ. ರೈತರು ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿಕೊಳ್ಳುವ ಪರಿಸ್ಥಿತಿ ಬಂದೊದಗಬಹುದು.
ಬೆಳೆ ಇಲ್ಲದೇ ರೈತರಲ್ಲಿ ಆತಂಕ
ಕೋವಿಡ್ ಲಾಕ್ ಡೌನ್ ನಡುವೆಯೂ ಯಾವುದೇ ಆದಾಯ ಕಾಣದ ಅನ್ನದಾತರು ಸಾಲ ಮಾಡಿ, ಬೀಜ, ಗೊಬ್ಬರ, ಔಷದಿ, ಕಳೆ, ಬೇಸಾಯ ಹೀಗೆ ಸಾವಿರ, ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆ ಬೆಳೆದಿದ್ದಾರೆ. ಲಾಭವಂತೂ ಬೇಡ, ಮನೆಗೆ ಕಾಳು, ದನಕರುಗಳಿಗೆ ಮೇವು ಸಿಗುತ್ತದೋ ಇಲ್ಲವೋ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಈ ವರ್ಷದಲ್ಲಿ ಮಳೆ ಕಡಿಮೆಯಾಗಿದೆ. ಇನ್ನೇನು ಮಳೆಗಾಲ ಮುಗಿಯುತ್ತಾ ಬಂದಿದೆ. ಚಿತ್ತಾ, ಸ್ವಾತಿ, ವಿಶಾತಿ ಮಳೆಗಳು ಮಾತ್ರ ಬಾಕಿ ಇವೆ. ರೈತರು ಈ ಮಳೆಗಳ ಮೇಲೆ ಬಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಒಂದರಿಂದ ಎರಡು ತಿಂಗಳ ಕಾಲ ಮಾತ್ರ ಮಳೆಗಾಲ ಇದೆ. ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಕೆರೆ ಕಟ್ಟೆಗಳು ತುಂಬಿಲ್ಲ, ಹಳ್ಳ ಕೊಳ್ಳಗಳು ಹರಿದಿಲ್ಲ. ಜಿಲ್ಲೆಯಲ್ಲಿ ಹಲವು ಕೆರೆಗಳು ನೀರು ಇಲ್ಲದೆ ಬತ್ತಿ ಹೋಗಿವೆ. ಕುಡಿಯುವ ನೀರಿಗಾಗಿ ಜಾನುವಾರುಗಳು ಪರದಾಟ ನಡೆಸುತ್ತಿವೆ. ಹೀಗಿರುವಾಗ ಮಳೆರಾಯ ಅಬ್ಬರಿಸದಿದ್ದರೆ ಜನವರಿ ನಂತರ ಜನ, ಜಾನುವಾರುಗಳಿಗೆ ಕುಡಿಯುವ ನಿರೀನ ಸಮಸ್ಯೆ ಎದುರಾಗಬಹುದು.
Recommended Video
ನಾಲ್ಕೈದು ದಿನದಲ್ಲಿ ಮಳೆ ಬಂದರೆ ಉತ್ತಮ
"ಚಿತ್ರದುರ್ಗ ಜಿಲ್ಲೆಯಲ್ಲಿ ಮಳೆ ಇಲ್ಲದೆ ಶೇಂಗಾ, ರಾಗಿ, ಮೆಕ್ಕೆಜೋಳ ಸೇರಿದಂತೆ ಇತರ ಬೆಳೆಗಳು ಬಾಡಿ ಹೋಗಿವೆ. ಲಾಕ್ಡೌನ್ ಹೊಡೆತಕ್ಕೆ ಸಿಲುಕಿದ ರೈತನ ಬದುಕು ಹೀನಾಯ ಸ್ಥಿತಿಗೆ ತಲುಪಿದೆ. ಇದರ ಜೊತೆಗೆ ಮಳೆ ಬಾರದೆ ಇರುವುದನ್ನು ನೋಡಿದರೆ ಜೀವನ ನಡೆಸುವುದು ತುಂಬಾ ಕಷ್ಟವಾಗುತ್ತದೆ. ನಾಲ್ಕೈದು ದಿನಗಳಲ್ಲಿ ಮಳೆ ಬಂದರೆ ಉತ್ತಮ. ಇಲ್ಲವಾದರೆ ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರಿನ ಅಭಾವ ಉಂಟಾಗಲಿದೆ" ಎಂದು ತಾಲೂಕು ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಕೆ. ಟಿ. ತಿಪ್ಪೇಸ್ವಾಮಿ ಹೇಳಿದ್ದಾರೆ.