ಯುಗಾದಿಗೂ ಮೊದಲೇ ರಾಜ್ಯದಲ್ಲಿ ನಾಯಕತ್ವ ಬದಲಾವಣೆ; ಮತ್ತೆ ಗುಡುಗಿದ ಯತ್ನಾಳ್!
ಚಿತ್ರದುರ್ಗ, ಫೆಬ್ರವರಿ 6: ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮದೇ ಪಕ್ಷದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿರುದ್ಧ ಮಾತನಾಡುವುದನ್ನು ಮುಂದುವರೆಸಿದ್ದಾರೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಜವಗೊಂಡನಹಳ್ಳಿ ಗ್ರಾಮದಲ್ಲಿ ಮಾತನಾಡಿದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, ಸಿಎಂ ಯಡಿಯೂರಪ್ಪ ಮನೆಗೆ ಹೋಗಿ ಮಂತ್ರಿ ಮಾಡಿ ಎಂದು ಕೈ-ಕಾಲು ಹಿಡಿದಿಲ್ಲ, ತಾಕತ್ ಇದ್ದರೆ ಮುಂದೆ ಆಗುತ್ತೇನೆ ಎಂದು ವಾಗ್ಬಾಣ ಮುಂದುವರೆಸಿದರು.
2ಎ ಮೀಸಲಾತಿ ಹೋರಾಟ; ಪಾದಯಾತ್ರೆ ಅಂತ್ಯವಾಗಲಿದೆಯೇ?
ಸಿಎಂ ಯಡಿಯೂರಪ್ಪ ತಮ್ಮ ಚೇಲಾಗಳ ಮೂಲಕ ವೈಯಕ್ತಿಕ ಹೇಳಿಕೆ ಎಂದಿದ್ದಾರೆ. ಕರ್ನಾಟಕದ ಸಿಎಂ ಆಗಿ ಜವಾಬ್ದಾರಿಯಿಂದ ಮಾತನಾಡಬೇಕು. ಅವರ ಆರೋಗ್ಯ ಕ್ಷೀಣಿಸಿದ್ದು, ದೇಶದಾದ್ಯಂತ ಅವರ ನಡವಳಿಕೆ ನೋಡುತ್ತಿದ್ದಾರೆ. ಸಿಎಂ ಬೆಳಿಗ್ಗೆ ಒಂದು, ಸಂಜೆ ಒಂದು ಹೇಳುತ್ತಿದ್ದಾರೆ, ವಿಶ್ರಾಂತಿ ಪಡೆಯುವುದು ಒಳ್ಳೆಯದು ಎಂದರು.
ಯಡಿಯೂರಪ್ಪ ಅವರಿಗೆ ಬೂಮ್ರಾಂಗ್ ಆಯ್ತಾ ಲಿಂಗಾಯತ ಮೀಸಲಾತಿ?
ಯಡಿಯೂರಪ್ಪ ಕುಟುಂಬ ಸರ್ಕಾರವನ್ನು ನಡೆಸುತ್ತಿದೆ
ಸಿಎಂ ವಿರುದ್ಧ ಎಲ್ಲಾ ಸಮುದಾಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಬೆಂಗಳೂರಿನಲ್ಲಿ ಸಭೆ ನಡೆಸುವ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಪಂಚಮಸಾಲಿ ಲಿಂಗಾಯತ ಜಾತಿಯ ಸಮಗ್ರ ವರದಿಗೆ ಶುಕ್ರವಾರ ಶಿಫಾರಸ್ಸು ಮಾಡಿದ್ದು, ಒಂದು ವಾರದಲ್ಲಿ ತರಿಸಲಿ ಎಂದು ಆಗ್ರಹಿಸಿದರು. ನಮ್ಮ ಸಮುದಾಯದ ಶಕ್ತಿ ಪ್ರದರ್ಶನ ಮಾಡಲು ಸಭೆಯಲ್ಲಿ ತೀರ್ಮಾನ ಮಾಡಿದ್ದೇವೆ. ಯಡಿಯೂರಪ್ಪ ಅವರಿಗೆ ದಣಿವಾಗಿದೆ. ಅವರ ಕುಟುಂಬ ಸರ್ಕಾರವನ್ನು ನಡೆಸುತ್ತಿದ್ದು, ವಿಜಯೇಂದ್ರ, ಇಡೀ ಕುಟುಂಬ ಕಾವೇರಿಯಲ್ಲಿ ನೇರವಾಗಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬೇಗ ರಾಜಕೀಯ ನಿವೃತ್ತಿ ಪಡೆದುಕೊಳ್ಳಲಿ
ಯಡಿಯೂರಪ್ಪ ಅವರನ್ನು ಹೈಕಮಾಂಡ್ ಗಮನಿಸುತ್ತಿದ್ದು, ಗೌರವಯುತ ಬೀಳ್ಕೊಡುಗೆ ನೀಡಿ ಎನ್ನುತ್ತಿದೆ. ತಮ್ಮ ಕುಟುಂಬವನ್ನು ಮತ್ತಷ್ಟು ಉದ್ಧಾರ ಮಾಡಲು ಸಿಎಂ ಆಗಿ ಉಳಿದಿದ್ದಾರೆ. ದಯವಿಟ್ಟು ಆದಷ್ಟು ಬೇಗ ರಾಜಕೀಯ ನಿವೃತ್ತಿ ಪಡೆದು ಮೊಮ್ಮಕ್ಕಳನ್ನು ಆಡಿಸಲಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹರಿಹಾಯ್ದರು.
ಪಂಚಮಸಾಲಿ ಲಿಂಗಾಯತರ ಬೆಂಗಳೂರು ಸಮಾವೇಶ ಒಳಗೆ ಅಂತಿಮ ನಿರ್ಣಯ ಮಾಡಿ ಗೆಜೆಟ್ ನೋಟಿಫಿಕೇಶನ್ ಮಾಡಬೇಕು. ರಾಜ್ಯದಲ್ಲಿ ಇದರ ಪರಿಣಾಮ ಮತ್ತಷ್ಟು ಗಂಭೀರವಾಗುತ್ತದೆ. ಇಲ್ಲವೆಂದರೆ ಇಡೀ ಪಕ್ಷ ನಿರ್ಣಯ ಮಾಡುತ್ತದೆ. ಹೈಕಮಾಂಡ್ ಗೆ ಯಡಿಯೂರಪ್ಪ ಅವರ ಆಡಳಿತದ ಬಗ್ಗೆ ಬಹಳ ಗಮನಕ್ಕೆ ಬಂದಿದೆ ಎಂದರು.
ಬಿಜೆಪಿ ಶಾಸಕರಿಗೆ ಅನುದಾನ ಸಿಗುತ್ತಿಲ್ಲ
ಸಿಎಂ ಯಡಿಯೂರಪ್ಪ ಅವರು ವಿರೋಧ ಪಕ್ಷಗಳ ಜೊತೆಗೆ ಅಡ್ಜೆಸ್ಟ್ ಮಾಡಿಕೊಂಡಿದ್ದಾರೆ. ವಿರೋಧ ಪಕ್ಷಗಳು ಸಂಪೂರ್ಣ ವಿಫಲವಾಗಿವೆ. ವಿಜಯೇಂದ್ರ ಮತ್ತು ವಿಪಕ್ಷಗಳು ಅಡ್ಜೆಸ್ಟ್ ಮಾಡಿಕೊಂಡಿದ್ದು, ಬಿಜೆಪಿ ಶಾಸಕರಿಗೆ ಅನುಕೂಲವಾಗಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಜಾರ್ಜ್, ಜಮೀರ್, ಸಿದ್ದರಾಮಯ್ಯ ಜೊತೆ ಹೊಂದಾಣಿಕೆ ಇದ್ದು, ಬಿಜೆಪಿ ಶಾಸಕರಿಗೆ ಅನುದಾನ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಚಿವ ಮುರುಗೇಶ್ ನಿರಾಣಿ ಹೇಳಿಕೆಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿರುಗೇಟು ನೀಡಿದ್ದು, ಮಂತ್ರಿ ಮಾಡಿದ್ದಕ್ಕೆ ಅವಧಿ ಪೂರ್ಣ ಯಡಿಯೂರಪ್ಪ ಸಿಎಂ ಅನ್ನುತ್ತಾರೆ, ಇವರಿಗೆ ಯಾರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇವರೇ ಕಳೆದ ಆರು ತಿಂಗಳ ಹಿಂದೆ ಯಡಿಯೂರಪ್ಪ ಅವರನ್ನು ಇಳಿಸುವ ಷಡ್ಯಂತ್ರ ಮಾಡಿದ್ದರು ಎಂದು ಮುರುಗೇಶ್ ನಿರಾಣಿ ವಿರುದ್ಧ ಯತ್ನಾಳ್ ಆರೋಪಿಸಿದರು.
ಎಂ ಆಗಿ ಅಪಾರ್ಥ ಹೇಳಿಕೆ ನೀಡಿದ್ದೀರಿ
ಮುರುಗೇಶ್ ನಿರಾಣಿ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ವಾಟ್ಸಪ್ ಹಾಕಿದ್ದರು. ಇಂತಹವರಿಂದ ಹಿಂದೂಗಳು ನೈತಿಕತೆ ಕಲಿಯಬೇಕಿಲ್ಲ. ಯುಗಾದಿಗೂ ಮೊದಲೇ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗಲಿದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದರು. ಇದೇ ವೇಳೆ ಹಿರಿಯೂರಿನ ಜವಗೊಂಡನಹಳ್ಳಿ ಗ್ರಾಮದಲ್ಲಿ ಮಾತನಾಡಿದ ಜಯಮೃತ್ಯುಂಜಯ ಶ್ರೀಗಳು, ಅಧಿವೇಶನದಲ್ಲಿ ಗಂಭೀರವಾಗಿ ಚರ್ಚೆ ಮಾಡಬೇಕಿತ್ತು. ಸಿಎಂ ಆಗಿ ಅಪಾರ್ಥ ಹೇಳಿಕೆ ನೀಡಿದ್ದೀರಿ. ಸಂವಿಧಾನ ಬದ್ಧ ಅಧಿಕಾರ ಇದ್ದಾಗಲೂ ಯತ್ನಾಳ್ ಹೇಳಿಕೆಗೆ ಅಪಾರ್ಥ ಹೇಳಿಕೆ ನೀಡಿದ್ದಿರಿ. ಇದರಿಂದ ಸಹಜವಾಗಿ ಬೇಸರ ಆಯ್ತು. ಇದರಿಂದ ಅನಿವಾರ್ಯ ಆಕ್ರೋಶ ಭರಿತವಾಗಿ ಮಾತನಾಡಿದ್ದೇನೆ ಎಂದರು.
ಕೇಂದ್ರಕ್ಕೆ ಹೋಗುವ ಅವಶ್ಯಕತೆ ಇಲ್ಲ
ಬಳಿಕ ಮಾತನಾಡಿದ ವಚನಾನಂದ ಶ್ರೀ, ಶುಕ್ರವಾರದ ಘಟನೆಗೆ ಸಿಎಂ ಯಡಿಯೂರಪ್ಪ ಹೊಣೆ, ನಾವ್ಯಾರು ಕೂಡ ಹೊಣೆಯಲ್ಲ.ರಾಜರು ತಪ್ಪು ಮಾಡಿದರೆ ಉಳಿದವರು ಏನು ಮಾಡುತ್ತಾರೆ? ಅನೇಕ ಬಾರಿ ಯಡಿಯೂರಪ್ಪ ಹೇಳಿದ್ದಾರೆ, ಪಂಚಮಸಾಲಿ ಸಮಾಜದ ಬೆಂಬಲದಿಂದ ಸಿಎಂ ಆಗಿದ್ದೇನೆ ಎಂದಿದ್ದಾರೆ ಎಂದು ನೆನಪಿಸಿದರು. ಕೇಂದ್ರಕ್ಕೆ ಹೋಗುವ ಅವಶ್ಯಕತೆ ಇಲ್ಲ. ರಾಜ್ಯದ ಮುಖ್ಯಮಂತ್ರಿಗಳಿಗೆ ಪರಮಾಧಿಕಾರ ಇದೆ. 24 ಗಂಟೆಯಲ್ಲಿ ವರದಿ ತರಿಸಬಹುದು. ಮತ ಹಾಕಲು ಪಂಚಮಸಾಲಿ ಸಮಾಜ ಬೇಕು, ಈ ಸಮಾಜಕ್ಕೆ ಸಾಮಾಜಿಕ ನ್ಯಾಯ ಬೇಡ್ವಾ? ಎಂದು ಪ್ರಶ್ನಿಸಿದ ವಚನಾನಂದ ಶ್ರೀ, ಯಡಿಯೂರಪ್ಪ ಪ್ರಶ್ನಾತೀತ ನಾಯಕರು ಎಂದು ನಾವು ಒಪ್ಪಿದ್ದೇವೆ. ನಮ್ಮ ತಾಳ್ಮೆಯನ್ನು ಪರೀಕ್ಷೆ ಮಾಡಲು ಹೋಗಬೇಡಿ ಎಂದು ಎಚ್ಚರಿಸಿದರು.
Recommended Video
ಸ್ವಾಮೀಜಿಗಳು ಒಂದಾಗಲ್ಲ ಎಂದುಕೊಂಡಿದ್ದರು
ಯಡಿಯೂರಪ್ಪ ಮೇಲೆ ನಮಗೆ ಸಂಪೂರ್ಣ ವಿಶ್ವಾಸವಿದ್ದು, 2ಎ ಕೊಟ್ಟೆ ಕೊಡುತ್ತೀರಿ ಎಂಬ ವಿಶ್ವಾಸವಿದೆ. ಫೆ.10 ರಂದು ನಮ್ಮ ಸಮಾಜದ ಹಿರಿಯರ ಜೊತೆ ಸಭೆ ಸೇರುತ್ತೇವೆ. ಮುಖ್ಯಮಂತ್ರಿಗಳು ಇಬ್ಬರು ಸ್ವಾಮೀಜಿಗಳು ಒಂದಾಗಲ್ಲ ಎಂದುಕೊಂಡಿದ್ದರು. ಒಂದು ಕುಂಟು ನೆಪ ಬೇಕಿತ್ತು, ಇಂದು ನಾವಿಬ್ಬರು ಒಂದಾಗಿದ್ದೇವೆ ಎಂದು ಹೇಳಿದರು.