ಟ್ವಿಟ್ಟರ್ ನಲ್ಲಿ ಪ್ರಯಾಣಿಕನ ದೂರು, ಸ್ಪಂದಿಸಿದ ಕೆ.ಎಸ್.ಆರ್.ಟಿ.ಸಿ ಸಂಸ್ಥೆ
ಚಿತ್ರದುರ್ಗ, ಸೆಪ್ಟೆಂಬರ್ 9: ಪ್ರಯಾಣಿಕರೊಬ್ಬರು ಬಸ್ ನಿಲ್ಲಿಸುವ ಬಗ್ಗೆ ಟ್ವಿಟ್ಟರ್ ನಲ್ಲಿ ಕೊಟ್ಟ ದೂರಿಗೆ ಕೆ.ಎಸ್.ಆರ್.ಟಿ.ಸಿ ಸಂಸ್ಥೆ ಟ್ವಿಟ್ಟರ್ ನಲ್ಲೇ ಪ್ರತಿಕ್ರಿಯಿಸುವ ಮೂಲಕ ಸಮಸ್ಯೆಯನ್ನು ಬಗೆಹರಿಸಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.
ಪ್ರಯಾಣಿಕರಾದ ಸುದರ್ಶನ್ ಡಿ.ಟಿ ಎಂಬುವವರು, ಚಿತ್ರದುರ್ಗ ತಾಲೂಕಿನ ಸಿರಿಗೆರೆ ಕ್ರಾಸ್ ಬಳಿ ಬಸ್ ಇಲ್ಲದೇ ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದನ್ನು, ಲಾರಿ ಮತ್ತು ಕಾರುಗಳನ್ನು ಅಡ್ಡ ಹಾಕಿ ಅವುಗಳ ಮೂಲಕ ಪ್ರಯಾಣ ಬೆಳೆಸುತ್ತಿರುವ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಾಕಿದ್ದರು.
ಚಿತ್ರದುರ್ಗದಲ್ಲಿ ತಡರಾತ್ರಿ ಅಬ್ಬರಿಸಿದ ವರುಣ; ಕೋಡಿ ಬಿದ್ದ ಕೆರೆಗಳು
""ಚಿತ್ರದುರ್ಗ ಹಾಗೂ ದಾವಣಗೆರೆ ವಿಭಾಗದ ಎಲ್ಲಾ ವೇಗದೂತ ಬಸ್ಸುಗಳು ಇಲ್ಲಿ ನಿಲ್ಲಿಸಿ ಹೋಗಬೇಕು. ಆದರೆ ಈ ಯಾವ ಬಸ್ ಗಳು ನಿಲ್ಲಿಸುತ್ತಿಲ್ಲ ಎಂದು ಟ್ವಿಟ್ಟರ್ ನಲ್ಲಿ ದೂರು ನೀಡಿ, ಈ ಹಿಂದೆ ಸ್ನೇಹಮಯಿ ಬಸ್ಸುಗಳು ಓಡಾಡುತ್ತಿದ್ದವು, ಈಗ ಸ್ನೇಹಮಯಿಗಳ ಸಂಖ್ಯೆಗಳು ಕೇವಲ 2ಕ್ಕೆ ಇಳಿದಿದ್ದು, ಪ್ರಯಾಣಿಕರಿಗೆ ಭಾರೀ ತೊಂದರೆ ಉಂಟಾಗಿದೆ'' ಎಂದಿದ್ದರು.
ಕೆ.ಎಸ್.ಆರ್.ಟಿ.ಸಿ ಸಂಸ್ಥೆಗೆ ಟ್ವಿಟ್ಟರ್ ನಲ್ಲಿ ಟ್ಯಾಗ್ ಮಾಡಿದ್ದರು
""ರಾಜಧಾನಿ ಬೆಂಗಳೂರು ಕಡೆಯಿಂದ ಬರುವ ಎಲ್ಲಾ ಬಸ್ಸುಗಳು ದಾವಣಗೆರೆ, ಹರಿಹರ, ಹಾವೇರಿ ಕಡೆ ಸಂಚಾರ ಮಾಡುತ್ತಿವೆ. ಅವುಗಳು ವೇಗದೂತ ಬಸ್ ಆಗಿವೆ. ಈ ಹಿಂದೆ ಇದ್ದ ಎಲ್ಲಾ ಸ್ನೇಹಮಯಿ ಬಸ್ಸುಗಳು ಈಗ ಚಿತ್ರದುರ್ಗ-ದಾವಣಗೆರೆ ನಾನ್ ಸ್ಟಾಪ್ ಆಗಿ ಮಾಡಿದ್ದಾರೆ'' ಎಂದು ಬರೆದು ಸುದರ್ಶನ್ ಕೆ.ಎಸ್.ಆರ್.ಟಿ.ಸಿ ಸಂಸ್ಥೆಗೆ ಟ್ವಿಟ್ಟರ್ ನಲ್ಲಿ ಟ್ಯಾಗ್ ಮಾಡಿದ್ದರು.
ಇತ್ತ ಪ್ರಯಾಣಿಕರು ಚಿತ್ರದುರ್ಗ ಬಸ್ ನಿಲ್ದಾಣದಿಂದ ಸಿರಿಗೆರೆ ಕ್ರಾಸ್ ಬಳಿ ಸ್ಟಾಪ್ ಇದೆ ಎಂದು ಕೇಳಿದರೆ, ವೇಗದೂತ ಬಸ್ ನಿರ್ವಾಹಕರು, ನಿಯಂತ್ರಕರ ಎದುರಿನಲ್ಲೇ ನಿಲ್ಲಿಸುವುದಿಲ್ಲ ಎಂದು ಹೇಳುವರು. ಮತ್ತೊಂದು ಕಡೆ ನಿಯಂತ್ರಕರು ಸಹ ಅದನ್ನೇ ಬೆಂಬಲಿಸುತ್ತಾ ಬಂದಿದ್ದಾರೆ ಎನ್ನಲಾಗಿದೆ.
ಪ್ರಯಾಣಿಕರ ಜೀವಕ್ಕೆ ಸಮಸ್ಯೆಯಾದರೆ ಯಾರು ಹೊಣೆ?
ನಿಯಂತ್ರಕರಿಗೆ ಹೆಚ್ಚು ಬಸ್ ಬಿಡಲು ಕೇಳಿಕೊಂಡಾಗ ಅವರು ಮ್ಯಾನೇಜರ್ ಗಳತ್ತ ಬೆರಳು ತೂರಿಸುವರು. ಚಿತ್ರದುರ್ಗ ಹಾಗೂ ದಾವಣಗೆರೆ ಇಬ್ಬರು ಡಿಪೋ ಮ್ಯಾನೇಜರ್ ಗಳಿಗೆ ದೂರವಾಣಿ ಮೂಲಕ ನಾಲ್ಕೈದು ಬಾರಿ ದೂರು ಕೊಡಲಾಗಿದೆ. ಒಬ್ಬರ ಮೇಲೆ ಒಬ್ಬರು ದೂರುತ್ತಾರೆ. ಇತ್ತ ಪ್ರಯಾಣಿಕರು ಬಸ್ ಗಳು ಇಲ್ಲದೆ ದೊಡ್ಡ ಲಾರಿಗಳು, ಟ್ರಕ್, ಕಾರು, ಆಟೋಗಳಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುತ್ತಿರುತ್ತಾರೆ. ಇದರಿಂದ ಪ್ರಯಾಣಿಕರ ಜೀವಕ್ಕೆ ಸಮಸ್ಯೆಯಾದರೆ ಯಾರು ಹೊಣೆ? ಎಂದು ಖಾರವಾಗಿ ಬರೆದು ಟ್ವಿಟ್ಟರ್ ನಲ್ಲಿ ಪ್ರಶ್ನೆ ಮಾಡಿದ್ದರು. ಟ್ವಿಟ್ಟರ್ ದೂರಿಗೆ ಸಂಬಂಧಿಸಿದಂತೆ ಉತ್ತರ ನೀಡಿದ ದಾವಣಗೆರೆ ಕೆ.ಎಸ್.ಆರ್.ಟಿ.ಸಿ ಸಂಸ್ಥೆ, ""ಕೊರೊನಾ ಕಾರಣದಿಂದ ಆ ಮಾರ್ಗದ ಎಲ್ಲಾ ಬಸ್ಸುಗಳನ್ನು ನಾನ್ ಸ್ಟಾಪ್ ಆಗಿ ಮಾಡಲಾಗಿದೆ.''
ದೂರಿಗೆ ಕೆ.ಎಸ್.ಆರ್.ಟಿ.ಸಿ ಸಂಸ್ಥೆ ಸ್ಪಂದಿಸಿದೆ
""ಪ್ರಯಾಣಿಕರಿಗೆ ಅನುಕೂಲವಾಗುವಂತೆ ದಾವಣಗೆರೆ ಮತ್ತು ಚಿತ್ರದುರ್ಗ ಬಸ್ ನಿಲ್ದಾಣಕ್ಕೆ ಬೆಳಗ್ಗೆ 7ರಿಂದ ಸಂಜೆ 7.30 ರವರೆಗೆ ಸ್ನೇಹಮಹಿ ಬಸ್ಸುಗಳನ್ನು ಬಿಡಲಾಗಿದೆ. ಪ್ರಯಾಣಿಕರು ಇದನ್ನು ಉಪಯೋಗಿಸಿಕೊಂಡು ಸಹಕರಿಸಬೇಕು'' ಎಂದು ಹೇಳಿದೆ. ಒಟ್ಟಾರೆಯಾಗಿ ಟ್ವಿಟ್ಟರ್ ನಲ್ಲಿ ನೀಡಿದ ದೂರಿಗೆ ಕೆ.ಎಸ್.ಆರ್.ಟಿ.ಸಿ ಸಂಸ್ಥೆ ಸ್ಪಂದಿಸಿದ್ದು, ಪ್ರಯಾಣಿಕರು ಸಂಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Recommended Video
ನಮ್ಮ ಕೆ.ಎಸ್.ಆರ್.ಟಿ.ಸಿ ಒಳ್ಳೆಯ ಕೆಲಸ ಮಾಡುತ್ತಿದೆ
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎಸ್.ಆರ್.ಟಿ.ಸಿ ಬಸ್ ನಿಗಮದ ಅಧ್ಯಕ್ಷ ಹಾಗೂ ಶಾಸಕ ಎಂ.ಚಂದ್ರಪ್ಪ ಸಂತಸ ವ್ಯಕ್ತಪಡಿಸಿದರು. ಎಲ್ಲೇ ಸಮಸ್ಯೆ ಇದ್ದರೂ ಕೂಡ ತಕ್ಷಣ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಮ್ಮ ಸಂಸ್ಥೆ ಒಳ್ಳೆಯ ಕೆಲಸ ಮಾಡುತ್ತಿದೆ. ನಮ್ಮ ಸಂಸ್ಥೆ ಆರ್ಥಿಕ ಸಂಕಷ್ಟದಲ್ಲಿದ್ದರೂ ಕೂಡಾ ಪ್ರಯಾಣಿಕರಿಗೆ ಅನ್ಯಾಯ ಆಗದ ನಿಟ್ಟಿನಲ್ಲಿ ನಮ್ಮ ಸಂಸ್ಥೆ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.