ಚಿತ್ರದುರ್ಗದಿಂದ ಶಿರಡಿಗೆ ನೂತನ ಸರ್ಕಾರಿ ಬಸ್ ಸೇವೆ
ಚಿತ್ರದುರ್ಗ, ಫೆಬ್ರವರಿ 19: ಭಾರತದ ಪ್ರಮುಖ ಪ್ರಮುಖ ದೇವಸ್ಥಾನಗಳಲ್ಲಿ ಒಂದಾದ ಮಹಾರಾಷ್ಟ್ರದ ಶಿರಡಿ ಸಾಯಿಬಾಬಾ ದೇವಸ್ಥಾನವು ಒಂದಾಗಿದ್ದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಚಿತ್ರದುರ್ಗ ವಿಭಾಗ ವತಿಯಿಂದ ಇಂದಿನಿಂದ ಚಿತ್ರದುರ್ಗ-ಶಿರಡಿ ನಡುವೆ ನೂತನ ನಾನ್ ಎಸಿ ಸ್ಲೀಪರ್ ಸಾರಿಗೆ ಬಸ್ ಸೇವೆ ಆರಂಭಿಸಿದೆ.
ಚಿತ್ರದುರ್ಗದಿಂದ ಹೊರಟ ಬಸ್ ಹೊಸಪೇಟೆ, ಇಳಕಲ್ಲು, ವಿಜಯಪುರ, ಸೊಲ್ಲಾಪುರ ಹಾಗೂ ಅಹಮದನಗರ ಮಾರ್ಗವಾಗಿ ಬಸ್ ಶಿರಡಿಗೆ ತಲುಪುತ್ತದೆ.
ಚಿತ್ರದುರ್ಗ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಿಂದ ಸಂಜೆ 5 ಗಂಟೆಗೆ ಬಸ್ ಹೊರಡಲಿದ್ದು, ಮುಂಜಾನೆ 5 ಗಂಟೆಗೆ ಶಿರಡಿ ತಲುಪುತ್ತದೆ. ನಂತರ ಅದೇ ದಿನ ಶಿರಡಿಯಿಂದ ಸಂಜೆ 6 ಗಂಟೆಗೆ ಹೊರಟರೆ, ಬೆಳಿಗ್ಗೆ 6 ಗಂಟೆಗೆ ಚಿತ್ರದುರ್ಗ ತಲುಪುತ್ತದೆ. ಚಿತ್ರದುರ್ಗದಿಂದ ಹೊರಡುವ ಒಬ್ಬ ಪ್ರಯಾಣಿಕನಿಗೆ 1,150 ಟಿಕೆಟ್ ದರ ನಿಗದಿ ಮಾಡಲಾಗಿದೆ.
ಚಿತ್ರದುರ್ಗದಿಂದ ಶಿರಡಿ ಸಾಯಿಬಾಬಾ ದರ್ಶನಕ್ಕೆ ಹೋಗಲು ಬಸ್ ಸೇವೆ ಇಲ್ಲದ ಕಾರಣ ಬೇರೆ ಬೇರೆ ಕಡೆಗಳಿಂದ ಹೋಗಬೇಕಿತ್ತು, ಇದೀಗ ಸಾಯಿಬಾಬಾ ಭಕ್ತರಿಗೆ ಚಿತ್ರದುರ್ಗದಿಂದ ನೇರವಾಗಿ ಶಿರಡಿಗೆ ಹೋಗುವ ಅವಕಾಶವನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಚಿತ್ರದುರ್ಗ ವಿಭಾಗ ವತಿಯಿಂದ ಕಲ್ಪಿಸಲಾಗಿದೆ.
ಈ ಸಾರಿಗೆ ಸೇವೆಯನ್ನು ಶಿರಡಿ ಸಾಯಿಬಾಬನ ಭಕ್ತರು ಮತ್ತು ಸಾರ್ವಜನಿಕ ಪ್ರಯಾಣಿಕರು ನೂತನ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ.
ಇನ್ನು ಹಿರಿಯೂರು, ಶಿರಾ, ಪಾವಗಡ, ಹೊಸದುರ್ಗ, ಚಳ್ಳಕೆರೆ, ಜಗಳೂರು, ತರೀಕೆರೆ,ಅಜ್ಜಂಪುರ, ಮೊಳಕಾಲ್ಮೂರು, ಚಿಕ್ಕನಾಯಕನಹಳ್ಳಿ , ದಾವಣಗೆರೆ ಜಿಲ್ಲೆ ಸೇರಿದಂತೆ ಮತ್ತಿತರ ಜಿಲ್ಲೆಯ ಪ್ರಯಾಣಿಕರು ಮತ್ತು ಭಕ್ತರು ಈ ಸೇವೆ ಬಳಸಿಕೊಳ್ಳಬಹುದಾಗಿದೆ.