ಚಿತ್ರದುರ್ಗದ ಹೊಸಯಳನಾಡು ಸರ್ಕಾರಿ ಶಾಲೆಗೆ ಭೇಷ್ ಎಂದ ಸಚಿವ ಈಶ್ವರಪ್ಪ
ಚಿತ್ರದುರ್ಗ, ಜುಲೈ 23: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿರುವ ಹೊಸಯಳನಾಡು ಕರ್ನಾಟಕ ಪಬ್ಲಿಕ್ ಶಾಲೆಗೆ ಇಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಭೇಟಿ ನೀಡಿ ಶಾಲೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಹೊಸಯಳನಾಡು ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಇಂದು ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ಕೆ ಈಶ್ವರಪ್ಪ ಅವರು ಚಾಲನೆ ನೀಡಿದರು. ಶಾಲೆಯಲ್ಲಿನ ವಿವಿಧ ಸೌಲಭ್ಯಗಳನ್ನು ವೀಕ್ಷಿಸಿ ಮಾತನಾಡಿದ ಅವರು, ಶಾಲೆಯ ಅಭಿವೃದ್ಧಿಗೆ ಸಹಕಾರ ನೀಡುವುದರ ಜತೆಗೆ ರೂ.25 ಲಕ್ಷ ವೈಯಕ್ತಿಕ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಕೋಟೆನಾಡಿನ ಹೆಮ್ಮೆಯಿದು ಹೊಸಯಳನಾಡು ಕರ್ನಾಟಕ ಪಬ್ಲಿಕ್ ಶಾಲೆ
ಶಾಲೆಯ ಮಹಾಪೋಷಕ ನಾ. ತಿಪ್ಪೇಸ್ವಾಮಿ ಅವರು ಮನವಿ ಮಾಡಿರುವಂತೆ ಶಾಲೆಯ ಶೌಚಾಲಯ, ಕಾಂಪೌಂಡ್, ಬಾಗಿಲು ಹಾಗೂ ಕುಡಿಯುವ ನೀರಿನ ಪೈಪ್ಲೈನ್ ವ್ಯವಸ್ಥೆಗಳನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಲು ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಸೂಚಿಸಿದರು. ಇದೇ ಸಂದರ್ಭ ತಮ್ಮ ಹಿಂದಿನ ದಿನಗಳನ್ನು ನೆನೆಸಿಕೊಂಡು, "ನನ್ನ ತಾಯಿ, ನಾನು ಸರ್ಕಾರಿ ನೌಕರ ಆಗುತ್ತೇನೆ ಎಂದು ತುಂಬಾ ಭರವಸೆ ಇಟ್ಟಿದ್ದರು. ಆದರೆ ವೇದಿಕೆ ಮೇಲೆ ನಿಂತು ನಾಲ್ಕು ಜನರ ಮಧ್ಯೆ ಮಾತಾಡುವ ಅವಕಾಶ ನನಗೆ ಸಿಕ್ಕಿದೆ" ಎಂದರು.
"ಈ ಶಾಲೆ ಪಾಠ ಪ್ರವಚನಗಳನ್ನು ಕಲಿಸುವುದಕ್ಕಷ್ಟೇ ಸೀಮಿತವಾಗದೇ ಸಂಸ್ಕಾರ ಕೇಂದ್ರವಾಗಿ ಬೆಳೆಯುತ್ತಿರುವುದು ವಿಶೇಷ. ಹೊಸಯಳನಾಡು ಶಾಲೆ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಿಗೆ ಮಾದರಿ. ಈ ಶಾಲೆಯ ಅಭಿವೃದ್ಧಿಗೆ ಸಹಕಾರ ನೀಡುತ್ತಿರುವುದೇ ನಿಜವಾದ ಸಮಾಜ ಸೇವೆ ಅಥವಾ ಸುಧಾರಣೆ. ಆ ನಿಟ್ಟಿನಲ್ಲಿ ಶ್ರಮಿಸುತ್ತಿರುವ ನಾ.ತಿಪ್ಪೇಸ್ವಾಮಿ ಹಾಗೂ ಅವರ ತಂಡಕ್ಕೆ ಅಭಿನಂದನೆ" ಎಂದರು.
ಯಾವುದೇ ಸಂದರ್ಭದಲ್ಲೂ ಚುನಾವಣೆಗೆ ಸಿದ್ಧ: ಸೆಪ್ಟೆಂಬರ್ ನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, "ರಾಜ್ಯದಲ್ಲಿ ಚುನಾವಣಾ ಆಯೋಗ ಯಾವುದೇ ಸಂದರ್ಭದಲ್ಲಿ ಚುನಾವಣೆ ಘೋಷಣೆ ಮಾಡಿದರೂ ನಾವು ಸಿದ್ಧರಿದ್ದೇವೆ. ಇಂಥ ಪರಿಸ್ಥಿತಿಯಲ್ಲಿ ಚುನಾವಣೆ ಆಗಲು ಕಷ್ಟವಿದೆ. ಆದರೆ ಭಗವಂತನ ದಯೆಯಿಂದ ಕೊರೊನಾ ಹೋಗಿ ಚುನಾವಣೆ ನಡೆಯುವಂತಾದರೆ ಅದನ್ನು ಸ್ವಾಗತಿಸುತ್ತೇವೆ" ಎಂದರು.
ಈ ಸಂದರ್ಭ ಶಾಸಕಿ ಕೆ.ಪೂರ್ಣಿಮಾಶ್ರೀನಿವಾಸ್, ಜಿಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶಬಾಬು, ಜಿ.ಪಂ. ಸದಸ್ಯೆ ಆರ್.ರಾಜೇಶ್ವರಿ, ಜಿ.ಪಂ. ಸಿಇಒ ಯೋಗೇಶ್, ವಿದ್ಯಾಸಂಸ್ಥೆಯ ನಾ.ತಿಪ್ಪೇಸ್ವಾಮಿ, ತಾ.ಬಿಜೆಪಿ ಅಧ್ಯಕ್ಷ ವಿಶ್ವನಾಥ್, ತಹಶೀಲ್ದಾರ್ ಜಿ.ಎಚ್.ಸತ್ಯನಾರಾಯಣ, ಬಿಇಒ ಪಿ.ರಾಮಯ್ಯ, ಪ್ರಾಂಶುಪಾಲ ಚಂದ್ರಯ್ಯ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.