ನಳಿನ್ ಕುಮಾರ್ ಕಟೀಲ್ರನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿದ ಡಿ.ಕೆ. ಶಿವಕುಮಾರ್
ಚಿತ್ರದುರ್ಗ, ಜುಲೈ 15: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದಾರೆ.
ಚಿತ್ರದುರ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, "ಪೆಟ್ರೋಲ್ ಮತ್ತು ಡೀಸೆಲ್ ಏರಿಕೆ ವಿರುದ್ಧ ಕಾಂಗ್ರೆಸ್ ಪಕ್ಷ ಸೈಕಲ್ ಜಾಥಾ, ಪ್ರತಿಭಟನೆ ಮಾಡಿದ್ದು, ಶುಕ್ರವಾರ ಬೆಂಗಳೂರಿನಲ್ಲಿ ಹಿರಿಯ ನಾಯಕರ ಸಭೆ ಕರೆದಿದ್ದು, ರಾಷ್ಟ್ರಮಟ್ಟದಲ್ಲಿ ಈ ಬಗ್ಗೆ ಚರ್ಚೆ ಮಾಡಲಿದ್ದೇವೆ,'' ಎಂದು ತಿಳಿಸಿದರು.
ಇನ್ನು ಸಿದ್ದರಾಮಯ್ಯ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಡಿ.ಕೆ. ಶಿವಕುಮಾರ್, "ಕಾಂಗ್ರೆಸ್ ಮ್ಯೂಜಿಕಲ್ ಚೇರ್ ಆಡುತ್ತಿದ್ದೇವೋ, ಯಾವ ಚೇರ್ ಆಡುತ್ತಿದ್ದೇವೋ, ಆದರೆ ಬಿಜೆಪಿಯಲ್ಲಿ ನಡೆಯುತ್ತಿರುವ ಆಟಕ್ಕೆ ಏನು ಹೆಸರು ಇಟ್ಟಿದ್ದೀರಾ?,'' ಎಂದು ಪ್ರಶ್ನೆ ಮಾಡಿದರು.
ಸಿದ್ದರಾಮಯ್ಯ ಕೊಟ್ಟ ಮಾತು ಯಾವತ್ತೂ ತಪ್ಪಿಲ್ಲ. ಸಿದ್ದರಾಮಯ್ಯ ಅಧಿಕಾರ ಅವಧಿಯಲ್ಲಿ ಚುನಾವಣಾ ಪ್ರಣಾಳಿಕೆಯಂತೆ ನುಡಿದಂತೆ ನಡೆದಿದ್ದು, ಬಸವಣ್ಣ ಜನ್ಮದಿನಾಚರಣೆಯೆಂದು ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕರಿಸಿ, ಜನರಿಗೆ ಹೇಳಿದ ಶೇ.95ರಷ್ಟು ಭರವಸೆ ಪೂರೈಸಿದ್ದಾರೆ.''
"ನಳೀನ್ ಕುಮಾರ್ ಕಟೀಲ್ ಬಹಿರಂಗ ಚರ್ಚೆಗೆ ಬರಲಿ, ಮಾಧ್ಯಮದವರು ಏರ್ಪಾಡು ಮಾಡಿ. ಕುಳಿತು ಈ ಕುರಿತು ಚರ್ಚೆ ಮಾಡೋಣ,'' ಎನ್ನುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಬಹಿರಂಗ ಚರ್ಚೆಗೆ ಡಿ.ಕೆ. ಶಿವಕುಮಾರ್ ಆಹ್ವಾನ ನೀಡಿದರು.
ಚಿತ್ರದುರ್ಗ ಜಿಲ್ಲೆಯಿಂದ ತೆರಳಿ ದಾವಣಗೆರೆಯ ಹೊನ್ನಾಳಿ ತಾಲೂಕಿನ ಬಂಜಾರ ಸಮೂದಾಯದ ಸೇವಲಾಲ್ ಗುರುಗಳ ಕ್ಷೇತ್ರವಾಗಿರುವ ಸುರಗೊಂಡನಕೊಪ್ಪಕ್ಕೆ ಭೇಟಿ ನೀಡಲಿರುವ ಡಿ.ಕೆ ಶಿವಕುಮಾರ್, ತಾಂಡಾ ನಿವಾಸಿಗಳ ನಿರುದ್ಯೋಗ, ಕೊರೊನಾ ಸಂಕಷ್ಟದ ಬಗ್ಗೆ ಮಾಹಿತಿ ಪಡೆಯಲಿದ್ದಾರೆ.
Recommended Video
ಬಳಿಕ ಶಿಕಾರಿಪುರದ ಬೆಂಡೆಕಟ್ಟೆ, ಮರಡಿ ಹಾಗೂ ಶಿವಮೊಗ್ಗದ ಕುಂಚೇನಹಳ್ಳಿ ತಾಂಡಾಕ್ಕೆ ಡಿ.ಕೆ. ಶಿವಕುಮಾರ್ ಭೇಟಿ ನೀಡಲಿದ್ದಾರೆ. ತಮ್ಮ ಬಳಿ ಮುಕ್ತವಾಗಿ ಸಮಸ್ಯೆ ಹೇಳಿಕೊಳ್ಳುವಂತೆ ಡಿ.ಕೆ. ಶಿವಕುಮಾರ್ ಈಗಾಗಲೇ ತಾಂಡಾ ನಿವಾಸಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ.