ಚಿತ್ರದುರ್ಗಕ್ಕೂ ಬಂತು ಕೊಡುವ ಕೈಗಳ "ಕೈಂಡ್ನೆಸ್ ಗ್ಯಾಲರಿ"
ಚಿತ್ರದುರ್ಗ, ಅಕ್ಟೋಬರ್ 14: ಮತ್ತೊಬ್ಬರಿಗೆ ಸಹಾಯ ಹಸ್ತ ಚಾಚುವುದರಲ್ಲಿ ಜೀವನದ ಸಾರ್ಥಕತೆ ಅಡಗಿದೆ ಎನ್ನುತ್ತಾರೆ ಹಿರಿಯರು. ಹಾಗೆಯೇ ಉಳ್ಳವರು ಇಲ್ಲದವರಿಗೆ ಕೊಟ್ಟರೆ ಅದು ಸಮಾನ ಸಮಾಜಕ್ಕೆ ಮುನ್ನುಡಿಯಾಗುತ್ತದೆ. ನಮಗೆ ಅವಶ್ಯಕವಿಲ್ಲದ, ಹಾಗೆಯೇ ಮತ್ತೊಬ್ಬರಿಗೆ ತುರ್ತು ಅವಶ್ಯವಿರುವ ಯಾವುದನ್ನೇ ಆಗಲಿ ನೀಡಿದರೆ ಆ ಸಹಾಯಕ್ಕೆ ಬೆಲೆ ಕಟ್ಟಲಾಗದು. ಅದಕ್ಕೆ ಉದಾಹರಣೆ ಎಂಬಂತೆ ಕರ್ನಾಟಕದ ಅಲ್ಲಲ್ಲಿ ಮತ್ತೊಬ್ಬರಿಗೆ ಸಹಾಯ ಮಾಡಲು ನೆರವಾಗುವ "ಕೈಂಡ್ನೆಸ್ ವಾಲ್" (ಕರುಣೆಯ ಗೋಡೆ) ಕಂಡುಬಂದಿದ್ದವು.
ಈಗ ಅಂಥದ್ದೇ ಒಂದು ಪ್ರಯತ್ನ ಚಿತ್ರದುರ್ಗ ಜಿಲ್ಲೆಯಲ್ಲೂ ಆಗಿದೆ. ತಮಗೆ ಅತಿ ಅವಶ್ಯಕವಲ್ಲದ, ಹಾಗೆಯೇ ಮತ್ತೊಬ್ಬರಿಗೆ ಅದು ಅತ್ಯವಶ್ಯಕ ಎನಿಸುವ ವಸ್ತುಗಳನ್ನು ಒಂದೆಡೆ ಶೇಖರಣೆ ಮಾಡಿ ಇಲ್ಲದವರಿಗೆ ತಲುಪಿಸುವ ಕಾರ್ಯಕ್ಕೆ ಹಿರಿಯೂರು ರೋಟರಿ ಸಂಸ್ಥೆ ಮುಂದಾಗಿದ್ದು, ಇಂದಿನಿಂದ ಇಲ್ಲೂ "ಕೈಂಡ್ನೆಸ್ ಗ್ಯಾಲರಿ" ಪ್ರಾರಂಭವಾಗಿದೆ.
ಒಳ್ಳೆಯ ಕೆಲಸಗಳ ಪರಿಣಾಮ ಖಂಡಿತ ಒಳ್ಳೆಯದೇ ಆಗುತ್ತದೆ
Recommended Video
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ಗಾಂಧಿ ವೃತ್ತದಲ್ಲಿ ಈ "ಕೈಂಡ್ನೆಸ್ ಗ್ಯಾಲರಿ" ಎಂಬ ವಿನೂತನ ಪೆಟ್ಟಿಗೆಯನ್ನು ತೆರೆಯಲಾಗಿದೆ. ಯಾರು ಕೆಲ ವಸ್ತುಗಳನ್ನು ಬಳಸುವುದಿಲ್ಲವೋ ಅಂಥವರು ಈ ಗ್ಯಾಲರಿಯಲ್ಲಿ ಅವುಗಳನ್ನು ಇಡಬಹುದು, ಅವಶ್ಯಕವಿದ್ದವರು ಬಂದು ಈ ವಸ್ತುಗಳನ್ನು ತೆಗೆದುಕೊಂಡು ಹೋಗಬಹುದು.
ಈ ಗ್ಯಾಲರಿಯಲ್ಲಿ ಬಟ್ಟೆಗಳು, ಚಪ್ಪಲಿಗಳು, ಶಾಲಾ ಮಕ್ಕಳ ಶೂಗಳು, ಬ್ಯಾಗ್ ಗಳು, ರಗ್ಗುಗಳು, ಚಾಪೆ, ಪಾತ್ರೆಗಳು, ಪುಸ್ತಕಗಳು, ದವಸ ಧಾನ್ಯಗಳು, ಇನ್ನಿತರ ದಿನನಿತ್ಯ ಬಳಸುವ ಗೃಹೋಪಯೋಗಿ ವಸ್ತುಗಳನ್ನು ಇಡಬಹುದು. ಹಾಗೆಯೇ ತೆಗೆದುಕೊಳ್ಳಬಹುದು. ಬಡವರಿಗೆ, ನಿರ್ಗತಿಕರಿಗೆ ಇಂತಹ ಒಂದು ಪ್ರಯತ್ನ ಉಪಯುಕ್ತವಾಗಲಿದೆ.
ಮಹಿಳಾ ದಿನಾಚರಣೆ ವಿಶೇಷ:ಸ್ಮಶಾನದಲ್ಲಿ ಕೆಲಸ ಮಾಡುವ ನೀಲಮ್ಮನ ಸಾಹಸಗಾಥೆ
ರೋಟರಿ ಸಂಸ್ಥೆಯ ಅಧ್ಯಕ್ಷ ಎಚ್.ಎಸ್. ಪ್ರಶಾಂತ್ ಮಾತನಾಡಿ, "ಬಡವರಿಗೆ, ಅನಾಥರಿಗೆ ಅನುಕೂಲವಾಗಲೆಂದು ಈ ವೇದಿಕೆ ನಿರ್ಮಾಣ ಮಾಡಲಾಗಿದೆ. ಇಲ್ಲಿ ಯಾವುದೇ ಜಾತಿ, ಧರ್ಮ, ಜನಾಂಗ ಇಲ್ಲ. ಪ್ರತಿಯೊಬ್ಬರೂ ಇದನ್ನು ಬಳಸಿಕೊಳ್ಳಬಹುದು, ಅದೆಷ್ಟೋ ಬಡವರಿಗೆ ಇಂತಹ ವಸ್ತುಗಳ ಅವಶ್ಯಕತೆ ಇದೆ. ಈ ರೀತಿಯ ಕೆಲಸಗಳಿಂದ ಉಪಯೋಗವಾಗಲಿದೆ" ಎಂದು ಹೇಳಿದ್ದಾರೆ.