ಕೋಟೆನಾಡಿಗೆ ಹರಿದು ಬಂದಿದೆ ನೀರು; ಕೆಲ್ಲೋಡ್ ಚೆಕ್ ಡ್ಯಾಂ ಭರ್ತಿ
ಚಿತ್ರದುರ್ಗ, ಆಗಸ್ಟ್ 10: ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಕೆಲ್ಲೋಡ್ ಚೆಕ್ ಡ್ಯಾಂ ಭರ್ತಿಯಾಗಿದೆ. ವೇದಾವತಿ ನದಿಗೆ ನೀರಿನ ಹರಿವು ಹೆಚ್ಚಿದೆ.
ಕಡೂರು, ಬೀರೂರು, ಯಗಟಿ ಮೂಲಕ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಬಲ್ಲಾಳ ಸಮುದ್ರಕ್ಕೆ ನೀರು ಹರಿದು ಬಂದಿದ್ದು, ನೀರಿನ ಹರಿವು ಸ್ವಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ಹೊಸದುರ್ಗದ ಕೆಲ್ಲೋಡು ಸೇತುವೆ ಭರ್ತಿ ಆಗಿದೆ. ನಂತರ ಬೇವಿನಹಳ್ಳಿ ಮೂಲಕ ಹಿರಿಯೂರಿನ ವಾಣಿವಿಲಾಸ ಸಾಗರ ಜಲಾಶಯದತ್ತ ನೀರು ಹರಿಯುತ್ತಿದೆ.
ಚಿಕ್ಕಮಗಳೂರಿನಲ್ಲಿ ರಣ ಮಳೆ; ಆಗಸ್ಟ್ 1ರಿಂದ 10 ರವರೆಗೆ ಕ್ವಿಕ್ ರಿಪೋರ್ಟ್
ಡೆಡ್ ಸ್ಟೋರೇಜ್ ಹಂತಕ್ಕೆ ತಲುಪಿರುವ ವಿವಿ ಸಾಗರ ಜಲಾಶಯಕ್ಕೆ ಜೀವ ತುಂಬುವಂತಿದೆ. ನೀರು ವಿವಿ ಸಾಗರ ಡ್ಯಾಂ ತಲುಪುದು ಬಹುತೇಕ ಖಚಿತವಾಗಿದ್ದು, ಸುಮಾರು 2 ರಿಂದ 5 ಅಡಿ ನೀರು ಹರಿದು ಬರಬಹುದೆಂದು ಅಂದಾಜಿಸಲಾಗಿದೆ.
ಚಿಕ್ಕಮಗಳೂರು ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಆದರೆ ನೀರಿನ ವೇಗ ಹೆಚ್ಚುವ ಸಾಧ್ಯತೆ ಇದ್ದು, ಇತ್ತ ಭದ್ರಾ ಡ್ಯಾಂ ನೀರಿನ ಮಟ್ಟ 171 ಅಡಿ ತಲುಪಿದೆ. 75000 ಸಾವಿರ ಕ್ಯೂಸೆಕ್ ನೀರು ಒಳ ಹರಿವಿದ್ದು ಹೆಚ್ಚಿನ ನೀರು ಹೊರಬಿಡಲು ಸೂಚಿಸಲಾಗಿದೆಂದು ತಿಳಿದು ಬಂದಿದೆ.
ಸತತ ಬರದಿಂದ ಕಂಗಾಲಾಗಿದ್ದ ಬರದನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಜನತೆ ಇದೀಗ ನಿಟ್ಟುಸಿರುಬಿಟ್ಟಿದ್ದಾರೆ.