ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಲೂಟಿ : ಕಸವನಹಳ್ಳಿ ರಮೇಶ್
ಚಿತ್ರದುರ್ಗ, ಮೇ.24 : ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ನಕಲಿ ರೈತರ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಹಣ ಲೂಟಿಯಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಕಸವನಹಳ್ಳಿ ರಮೇಶ್ ಹಿರಿಯೂರಿನಲ್ಲಿ ಗಂಭೀರ ಆರೋಪ ಮಾಡಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇದೊಂದು ಬಹುಕೋಟಿ ಲೂಟಿ ಹಗರಣ ಎನ್ನಬಹುದು. ಪ್ರಧಾನಮಂತ್ರಿ ಕಿಸಾನ್ ಹೋಮ್ ಪೇಜ್ ನಲ್ಲಿ ದಿನಾಂಕ 30-04-2022 ರಂದು ಡೌನ್ ಲೋಡ್ ಮಾಡಿದ ಮಾಹಿತಿ ಪ್ರಕಾರ ಹಿರಿಯೂರು ತಾಲೂಕು ಐಮಂಗಲ ಕಂದಾಯ ಗ್ರಾಮದಲ್ಲಿ 3,052 ಪ್ರಧಾನಮಂತ್ರಿ ಕಿಸಾನ್ ಫಲಾನುಭವಿಗಳಿದ್ದು, ಒಟ್ಟು ಖಾತೆದಾರರು 700 ಮಾತ್ರ ಇದ್ದಾರೆ. 2,352 ನಕಲಿ ಹೆಸರುಗಳು ಸೇರ್ಪಡೆಯಾಗಿರುತ್ತವೆ. ಆದಿವಾಲ ಗ್ರಾಮದಲ್ಲಿ 1,379 ಫಲಾನುಭವಿಗಳು ಇದ್ದು, ಖಾತೆದಾರರು ಮಾತ್ರ ಕೇವಲ 836 ಇದ್ದಾರೆ. ಬಬ್ಬೂರ್ ಗ್ರಾಮದಲ್ಲಿ 416 ನಕಲಿ ಹೆಸರುಗಳು ಇವೆ ಎಂದು ವಿವರಿಸಿದರು.
ಆಯಾ ಗ್ರಾಮದ ಖಾತೆದಾರರಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ನಕಲಿ ಹೆಸರು ನೊಂದಾಯಿಸಲಾಗಿದೆ. ಇದರಲ್ಲಿ ಆ ಗ್ರಾಮದಲ್ಲಿ ಇಲ್ಲದ ಹಾಗೂ ಇಲ್ಲಿಯವರೆಗೂ ಕಂಡು ಕೇಳರಿಯದ ಹೆಸರುಗಳ ಜೊತೆಗೆ ಇತರೆ ನಕಲಿ ಹೆಸರುಗಳು ಸೇರ್ಪಡೆಯಾಗಿದೆ. ಇದರಿಂದ ನೈಜ ರೈತರಿಗೆ ಅನ್ಯಾಯ ಮಾಡಿರುವುದು ದಾಖಲೆ ಸಹಿತ ಮೇಲ್ನೋಟಕ್ಕೆ ದೃಢಪಟ್ಟಿದೆ. ಮುಸ್ಲಿಮರ ಹೆಸರಿನಲ್ಲಿ ನಕಲಿ ಖಾತೆಗಳನ್ನು ಸೇರಿಸುವ ಮೂಲಕ ಆ ವರ್ಗದವರಿಗೆ ಕೆಟ್ಟ ಹೆಸರು ತರುವ ಹುನ್ನಾರ ಕೂಡ ಇರಬಹುದು ಎಂದು ರಮೇಶ್ ಸಂಶಯ ವ್ಯಕ್ತಪಡಿಸಿದರು.
ಈ ಎಲ್ಲಾ ನಕಲಿ ಹೆಸರುಗಳ ಸತ್ಯಾಸತ್ಯತೆ ತನಿಖೆಯಿಂದ ಹೊರಬರಬೇಕು. ಇದು ಕೇವಲ 3 ಹಳ್ಳಿಗಳ ತಾಜಾ ಉದಾಹರಣೆ.ಇದೇ ರೀತಿ ದೇಶದ ಹಲವಾರು ರಾಜ್ಯಗಳಲ್ಲಿ ಅಧಿಕಾರಿಗಳು ಮತ್ತು ರಾಜಕಾರಣಿಗಳು ಷರೀಕ್ ಆಗಿ ಬಹುಕೋಟಿ ಲೂಟಿ ಮಾಡಿರುವ ಸಾಧ್ಯತೆ ಇದೆ.
ನಕಲಿ ರೈತರು ಎಲ್ಲಿಂದ ಬಂದರು?
ಸದ್ಯ ಈ ನಕಲಿ ರೈತರು ಎಲ್ಲಿಂದ ಬಂದರು..? ಕಾಲ ಕಾಲಕ್ಕೆ ಕೃಷಿ ಮತ್ತು ಕಂದಾಯ ಅಧಿಕಾರಿಗಳು ಫಲಾನುಭವಿ ಪಟ್ಟಿ ತಪಾಸಣೆ ಏಕೆ ಮಾಡಿಲ್ಲ..? ಈ ಹಣ ಯಾರ ಖಾತೆಗೆ ಜಮಾ ಆಗಿದೆ..? ಮದ್ಯ ವರ್ತಿಗಳ ಹಾವಳಿ ಇಲ್ಲದೆ ಡಿಬಿಟಿ ಮೂಲಕ 100% ಪ್ರಾಮಾಣಿಕ ರೈತರ ಖಾತೆಗೆ ಹಣ ಜಮಾ ಆಗುವ ಈ ಯೋಜನೆ ಹಳ್ಳ ಹಿಡಿಯಲು ಕಾರಣ ಯಾರೆಂಬುದು ತಿಳಿಯಬೇಕು. ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.
ಸರ್ಕಾರ ಜೀವಂತ ಇದ್ದರೆ
ಸರ್ಕಾರ ಕಣ್ಣು, ಕಿವಿ, ಮೂಗು, ಬಾಯಿ, ಪಂಚೇಂದ್ರಿಯಗಳ ಸಹಿತ ಜೀವಂತ ಇರುವುದು ಸತ್ಯವೇ ಆಗಿದ್ದರೆ ಸಿಬಿಐ ಮೂಲಕ ಈ ಹಗರಣ ತನಿಖೆ ಮಾಡಿಸಬೇಕು. ಅಥವಾ ನ್ಯಾಯಾಂಗ ತನಿಖೆ ಮಾಡಿಸಬೇಕು. ಇನ್ನೇನು ಕೆಲವೇ ದಿನಗಳಲ್ಲಿ (ಮೇ ತಿಂಗಳಲ್ಲಿ) 11 ನೇ ಕಂತಿನ ಹಣ ಜಮಾ ಮಾಡುವ ತಯಾರಿ ನಡೆದಿದ್ದು, ಅದನ್ನು ಕೂಡಲೇ ತಡೆ ಹಿಡಿಯಬೇಕು.
ನಕಲಿ ರೈತರ ವಿವರ ಸಿದ್ಧಪಡಿಸಿ
ಈ ಕೂಡಲೆ ರೈತ ಸಂಪರ್ಕ ಕೇಂದ್ರದವರು ಸಂಬಂಧಪಟ್ಟ ಗ್ರಾಮ ಲೆಕ್ಕಾಧಿಕಾರಿಗಳ ಮೂಲಕ ನಕಲಿ ರೈತರ ಪಟ್ಟಿ ತಯಾರಿಸಬೇಕು. ಅಸಲಿ ರೈತರಿಗೆ ನ್ಯಾಯ ಕೊಡಬೇಕು, ಇದಕ್ಕೆ ಅವಕಾಶ ಮಾಡಿಕೊಟ್ಟ ಕೃಷಿ ಅಧಿಕಾರಿಗಳನ್ನು ನೇರ ಹೊಣೆ ಮಾಡಬೇಕು. ಅಸಲಿ ರೈತರಿಗೆ ಮಾತ್ರ 2019 ರಿಂದ ಇತ್ತೀಚೆಗೆ ಪೌತಿ ಖಾತೆ, ಪಾಲುವಿಭಾಗ, ಕ್ರಯ, ದಾನ, ವಿಲ್ ಪ್ರಕಾರ ಹೊಸದಾಗಿ ಖಾತೆದಾರರು ಆದವರಿಗೆ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ನೋಂದಾಯಿಸಿದ್ದರೂ ಅವರಿಗೆ ಹಣ ಸಂದಾಯ ಮಾಡದೆ ತಡೆ ಹಿಡಿಯಲಾಗಿದೆ. ಈಗ ಹೊಸದಾಗಿ ನೋಂದಾಯಿಸಲು ಅವಕಾಶ ಇಲ್ಲವಾಗಿದೆ.ಇನ್ನೂ ಹಲವಾರು ನೋಂದಾಯಿತ ರೈತರಿಗೂ ಕೂಡಾ ಸರಿಯಾಗಿ ಎಲ್ಲಾ ಕಂತಿನ ಹಣ ಕೊಡದೆ ತಾಂತ್ರಿಕ ಕಾರಣ ಹೇಳಿ ಹಣ ಸಂದಾಯ ಮಾಡದೆ ವಂಚನೆ ಮಾಡಲಾಗಿದೆ ಎಂದರು.
ಕಂದಾಯ ಇಲಾಖೆ ಅನುಮೋದನೆ ಬೇಕು
ಇನ್ನು ಮುಂದೆ ಕೃಷಿ ಇಲಾಖೆಯವರು ಕಂದಾಯ ಇಲಾಖೆ ಅನುಮೋದನೆ ಇಲ್ಲದೆ ಯಾವುದೆ ಫಲಾನುಭವಿ ರೈತರಿಗೆ ಹಣ ನೀಡಬಾರದು ಎಂದು ಆಗ್ರಹಿಸಿದರು. ಸದ್ಯ ರಾಜ್ಯದಲ್ಲಿ ಆಗಿರುವ ಈ ಬಹುಕೋಟಿ ಲೂಟಿ ಹಗರಣ ಕುರಿತು ಎಸಿಬಿ ಯವರು ಸುಮೋಟೋ ದೂರು ದಾಖಲಿಸಿ ತನಿಖೆ ನಡೆಸಿ ಸತ್ಯ ಬಯಲು ಮಾಡಿ. ತಪ್ಪಿತಸ್ಥ ನೌಕರರಿಗೆ ಶಿಕ್ಷೆ ಆಗಬೇಕು. ಚಿತ್ರದುರ್ಗ ಜಿಲ್ಲಾಧಿಕಾರಿಗಳು ಕೂಡ ಇತ್ತ ಗಮನಿಸಿ ಗ್ರಾಮ ಲೆಕ್ಕಾಧಿಕಾರಿಗಳ ಮೂಲಕ ನಕಲಿ ರೈತರ ಪಟ್ಟಿ ತಯಾರಿಸಿ ರೈತ ಸಂಪರ್ಕ ಕೇಂದ್ರದಿಂದ ಡಿಲಿಟ್ ಮಾಡಿಸುವಂತೆ ಸಾಮಾಜಿಕ ಕಾರ್ಯಕರ್ತ ಕಸವನಹಳ್ಳಿ ರಮೇಶ್ ಹಿರಿಯೂರಿನಲ್ಲಿ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.