10 ರೂ ಕೊಡಿ, ವೋಟು ಕೊಡಿ : ಪಕ್ಷೇತರ ಅಭ್ಯರ್ಥಿ ಪ್ರಚಾರ!
ಚಿತ್ರದುರ್ಗ, ಏಪ್ರಿಲ್ 24 : ಚುನಾವಣೆಗೆ ಸ್ಪರ್ಧಿಸಲು ಕೋಟಿಗಟ್ಟಲೇ ಹಣ ಬೇಕು. ಆದರೆ, ಇಲ್ಲೊಬ್ಬ ಅಭ್ಯರ್ಥಿ ಜನರಿಂದಲೇ ಹಣ ಪಡೆದು 2018ರ ಚುನಾವಣೆ ಕಣಕ್ಕೆ ಧುಮುಕಿದ್ದಾರೆ. ಕೋಟಿ ಕೋಟಿ ಖರ್ಚು ಮಾಡಿ ಗೆಲುವು ಸಾಧಿಸುವ ಕಾಲದಲ್ಲಿ ಮಾದರಿ ಚುನಾವಣೆ ನಡೆಸುಲು ಪಣತೊಟ್ಟಿದ್ದಾರೆ.
ಎ.ಆರ್.ಶಮಂತ್ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಕ್ಷೇತ್ರದಿಂದ 2018ರ ವಿಧಾನಸಭೆ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. 'ವೋಟು ಕೊಡಿ ನೋಟು ಕೊಡಿ' ಎಂದು ಜನರ ಬಳಿ ಹೋಗುತ್ತಿದ್ದಾರೆ.
ಕ್ಷೇತ್ರ ಪರಿಚಯ : ಹೊಸದುರ್ಗ, ಹೊಸ ಫಲಿತಾಂಶದ ನಿರೀಕ್ಷೆ
ಹೊಸದುರ್ಗ ಪಟ್ಟಣದ ಕೋಟೆ ಬಡಾವಣೆ ನಿವಾಸಿ ಎ.ಆರ್.ಶಮಂತ್ ಬಿಇ, ಎಂಬಿಎ ಪದವೀಧರ. ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿರುವ ಶಮಂತ್, ಈ ಬಾರಿಯ ವಿಧಾನಸಭೆ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಹೊಸದುರ್ಗ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.
ಸಂದರ್ಶನ : ಹಿರಿಯೂರು ಬಿಜೆಪಿ ಅಭ್ಯರ್ಥಿ ಪೂರ್ಣಿಮಾ ಶ್ರೀನಿವಾಸ್
'ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಪಕ್ಷದ ವತಿಯಿಂದ ಲಕ್ಷ ಲಕ್ಷ ದೇಣಿಗೆ ಬರುತ್ತದೆ. ಆದರೆ, ನಾನು ಕೇವಲ 10 ರೂ.ಗಳನ್ನು ಅಭಿಮಾನದಿಂದ ನೀಡುವಂತೆ ಕೇಳುತ್ತಿದ್ದೇನೆ' ಎನ್ನುತ್ತಾರೆ ಶಮಂತ್. ಸಾಮಾಜಿಕ ಜಾಲತಾಣವನ್ನು ಅವರು ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ.
10 ರೂ. ಕೊಡಿ, ವೋಟು ಕೊಡಿ
ಎ.ಆರ್.ಶಮಂತ್ ಹೊಸದುರ್ಗ ಕ್ಷೇತ್ರದಿಂದ 2018ರ ವಿಧಾನಸಭೆ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಚುನಾವಣೆಗೆ ಸ್ಪರ್ಧಿಸಲು 10 ರೂ. ಕೊಡಿ ನನ್ನನ್ನು ಅಶೀರ್ವದಿಸಿ ಎಂದು ಶಮಂತ್ ಪ್ರಚಾರ ನಡೆಸುತ್ತಿದ್ದಾರೆ.
ಜನರಿಂದಲೇ ಚುನಾವಣೆಗೆ ಹಣ ಸಂಗ್ರಹಿಸುತ್ತಿದ್ದಾರೆ. ಈಗಾಗಲೇ 'ಒಂದು ನೋಟು ಒಂದು ವೋಟು' ಎಂಬ ಪರಿಕಲ್ಪನೆಯಲ್ಲಿ ಹಲವಾರು ಅಭ್ಯರ್ಥಿಗಳು ಈಗಾಗಲೇ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲೂ ಪ್ರಚಾರ
ಎ.ಆರ್.ಶಮಂತ್ ಅವರು ಸಾಮಾಜಿಕ ಜಾಲತಾಣದಲ್ಲಿಯೂ ಪ್ರಚಾರ ನಡೆಸುತ್ತಿದ್ದಾರೆ. ಪೋನ್ ನಂಬರ್ ನೀಡುವ ಮೂಲಕ ಪೇಟಿಎಂನಿಂದಲೂ ನೀವು ದೇಣಿಗೆ ಕಳಿಸಬಹುದು ಎಂದು ಹೇಳಿದ್ದಾರೆ. ಜನರಿಂದಲೇ ನೇರವಾಗಿ ಸುಮಾರು 5 ಸಾವಿರಕ್ಕೂ ಅಧಿಕ ದೇಣಿಗೆ ಸಂಗ್ರಹಿಸಿದ್ದಾರೆ.
'10 ರೂಪಾಯಿ ಕೇಳಿದ್ದು ಅಭಿಮಾನಕ್ಕಾಗಿ. ಜನರಿಂದ ಈ ಪರಿಕಲ್ಪನೆಗೆ ಉತ್ತಮ ಪ್ರತಿಕ್ರಿಯೆ ಬಂದಿದೆ. ನಾನು ಯಾವುದೇ ಪಕ್ಷದ ಟಿಕೆಟ್ ಕೇಳಿಲ್ಲ. ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ. ಶೀಘ್ರದಲ್ಲಿಯೇ ಪ್ರಣಾಳಿಕೆ ಬಿಡುಗಡೆ ಮಾಡುತ್ತೇನೆ' ಎಂದು ಹೇಳಿದ್ದಾರೆ.
ಪಕ್ಷೇತರ ಅಭ್ಯರ್ಥಿಗಳನ್ನು ಗೆಲ್ಲಿಸಿದ ಕ್ಷೇತ್ರ
ಹೊಸದುರ್ಗ ಕ್ಷೇತ್ರದಲ್ಲಿ ಪಕ್ಷ ಮುಖ್ಯವಾಗುವುದಿಲ್ಲ. ಅಲ್ಲಿ ವ್ಯಕ್ತಿಗಳೇ ಮುಖ್ಯ, ಹಲವು ಬಾರಿ ಪಕ್ಷೇತರ ಅಭ್ಯರ್ಥಿಗಳನ್ನು ಆರಿಸಿ ಕಳಿಸಿದ ಕೀರ್ತಿ ಕ್ಷೇತ್ರದ್ದು. 5 ಬಾರಿ ಪಕ್ಷೇತರ ಅಭ್ಯರ್ಥಿಗಳು ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ.
2008ರಲ್ಲಿ ಗೂಳಿಹಟ್ಟಿ ಶೇಖರ್ ಅವರು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು ಮತ್ತು ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದರು. 2018ರ ಚುನಾವಣೆಯಲ್ಲಿಯೂ ಗೂಳಿಹಟ್ಟಿ ಶೇಖರ್ ಬಿಜೆಪಿ ಪಕ್ಷದಿಂದ ಅಭ್ಯರ್ಥಿಯಾಗಿದ್ದಾರೆ.
2018ರ ಚುನಾವಣೆಯಲ್ಲಿ ಯಾರು ಅಭ್ಯರ್ಥಿಗಳು?
ಹೊಸದುರ್ಗ ಕ್ಷೇತ್ರದ ಚುನಾವಣೆ ಹಲವು ಕಾರಣಗಳಿಗೆ ಕುತೂಹಲ ಮೂಡಿಸಿದೆ. ಕ್ಷೇತ್ರದಿಂದ ಬಿ.ಜಿ.ಗೋವಿಂದಪ್ಪ ಕಾಂಗ್ರೆಸ್ ಅಭ್ಯರ್ಥಿ. ಬಿಜೆಪಿಯಿಂದ ಗೂಳಿಹಟ್ಟಿ ಶೇಖರ್ ಕಣದಲ್ಲಿದ್ದಾರೆ. ಜೆಡಿಎಸ್ ಪಕ್ಷದಿಂದ ಶಶಿಕುಮಾರ್ ಅವರು ಅಭ್ಯರ್ಥಿ.