ಸಚಿವ ಸ್ಥಾನ ಕೊಟ್ಟಿದ್ರೆ ನಿಭಾಯಿಸಿಕೊಂಡು ಹೋಗಿತ್ತಿದ್ದೆ ಎಂದ ಹಿರಿಯೂರು ಶಾಸಕಿ
ಚಿತ್ರದುರ್ಗ, ಫೆಬ್ರವರಿ.05: ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಕಸರತ್ತು ಜೋರಾಗಿದೆ. ಯಾರಿಗೆ ಸಚಿವ ಸ್ಥಾನ ಕೊಡಬೇಕು, ಯಾರಿಗೆ ಬಿಡಬೇಕು ಎಂಬುದು ಸಿಎಂ ಬಿ.ಎಸ್.ಯಡಿಯೂರಪ್ಪನವರಿಗೆ ತಲೆನೋವಾಗಿದೆ. ಉಪ ಚುನಾವಣೆಯಲ್ಲಿ ಗೆದ್ದವರಿಗೆ ಸಚಿವ ಸ್ಥಾನ ಈಗಾಗಲೇ ಪಕ್ಕಾ ಆಗಿದೆ.
ಈ ರಾಜಕೀಯ ಬೆಳವಣಿಗೆಗಳ ಮಧ್ಯೆ ಬಿಜೆಪಿಯ ಶಾಸಕಿಯೊಬ್ಬರು ತಮಗೂ ಸಚಿವ ಸ್ಥಾನ ನೀಡುವಂತೆ ಡಿಮ್ಯಾಂಡ್ ಇಟ್ಟಿದ್ದಾರೆ. ಬುಧವಾರ ಯರಬಳ್ಳಿ ಗ್ರಾಮದ ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ತಾವೂ ಕೂಡಾ ಸಚಿವಾಕಾಂಕ್ಷಿ ಎಂದಿದ್ದಾರೆ.
ಸಂಪುಟ ವಿಸ್ತರಣೆ ಪಟ್ಟಿ ಪ್ರಕಟ: 10 ಶಾಸಕರಿಗೆ ನಾಳೆಯಿಂದ 'ಗುರು'ಬಲ
ಮಹಿಳಾ ಪ್ರಾತಿನಿಧ್ಯದ ಮಾತು ಬಾಯಿ ಮಾತಿಗೆ ಮಾತ್ರ ಸೀಮಿತ ಆಗುತ್ತಿದೆ. ಸಚಿವ ಸ್ಥಾನ ಕೊಟ್ರೆ ನಾನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದ್ದೇನೆ ಎಂದರು. ನಾನು ರಾಜ್ಯದಲ್ಲಿ ಗೊಲ್ಲ ಸಮುದಾಯದ ಏಕೈಕ ಶಾಸಕಿ ಆಗಿದ್ದು ಸಚಿವ ಸ್ಥಾನಕ್ಕೆ ಪರಿಗಣಿಸಲು ಮನವಿ ಮಾಡಿಕೊಂಡಿದ್ದಾರೆ.
ಶಶಿಕಲಾ ಜೊಲ್ಲೆರನ್ನು ತೆಗೆದು ತಮಗೆ ಮಂತ್ರಿಗಿರಿ ನೀಡಿ ಎನ್ನುವುದಿಲ್ಲ. ರಾಜ್ಯದ ಸಚಿವ ಸಂಪುಟದಲ್ಲಿ ಇಬ್ಬರು ಮಹಿಳೆಯರಿಗೆ ಸ್ಥಾನ ಕೊಟ್ಟರೆ ಕಷ್ಟವೇನಲ್ಲ ಎಂದರು. ನಾನು ಪಕ್ಷದ ಶಿಸ್ತಿಗೆ ತಲೆಬಾಗುತ್ತೇನೆ, ಪಕ್ಷದ ತೀರ್ಮಾನಕ್ಕೆ ಬದ್ಧವಾಗಿ ನಡೆದುಕೊಳ್ಳುತ್ತೇನೆ. ಪಕ್ಷ ಸಚಿವ ಸ್ಥಾನ ಕೊಟ್ಟರೆ ಇನ್ನು ಹೆಚ್ಚಿನ ಕೆಲಸ ಮಾಡುವುದಾಗಿ ಹೇಳಿದರು. ಇಲ್ಲವಾದರೆ ಕ್ಷೇತ್ರದ ಶಾಸಕರಾಗಿ ಕ್ಷೇತ್ರದ ಅಭಿವೃದ್ಧಿಯ ಕಡೆ ಗಮನ ಹರಿಸುವುದಾಗಿ ತಿಳಿಸಿದರು.