ಕ್ಷೇತ್ರ ಪರಿಚಯ : ತ್ರಿಕೋನ ಸ್ಪರ್ಧೆಯಲ್ಲಿ ಹಿರಿಯೂರು
ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಮತ್ತು ವೇದಾವತಿ ನದಿಯ ದಡದಲ್ಲಿರುವ ಹಿರಿಯೂರು ವಿಧಾನಸಭಾ ಕ್ಷೇತ್ರ ಶ್ರೀ ತೇರುಮಲ್ಲೆಶ್ವರ ಸ್ವಾಮಿ. ಶ್ರೀಕಣಿವೆ ರಂಗನಾಥ ಸ್ವಾಮಿ. ಕಣಿವೆ ಮಾರಮ್ಮ. ನಂದಿಹಳ್ಳಿ ರಂಗನಾಥ ಸ್ವಾಮಿ ಹಾಗೂ ನಗರದ ದುರ್ಗಮ್ಮ ದೇವಿ ಹೀಗೆ ಇತಿಹಾಸ ಹೊಂದಿರುವ ದೇವಸ್ಥಾನಗಳ ಜೊತೆಗೆ, ಗಾಯಿತ್ರಿ ಜಲಾಶಯ, ಸುವರ್ಣ ಮುಖಿ ನದಿ ಹರಿಯುತ್ತಿದೆ.
ಕ್ಷೇತ್ರ ಪರಿಚಯ: ಬರದ ನಾಡಿನ ವೈವಿಧ್ಯಮಯ ಕ್ಷೇತ್ರ ಹಿರಿಯೂರು
ವಿ.ವಿ ಸಾಗರ ಜಲಾಶಯ ಹೊಂದಿದ್ದು ಅಚ್ಚ ಹಸಿರಿನಿಂದ ಕಂಗೊಳಿಸುವ ಗಿಡಮರಗಳು, ಪವನ ವಿದ್ಯುತ್ ಕಂಬಗಳು, ಬೆಟ್ಟ ಗುಡ್ಡಗಳ ಸಾಲು, ನಾಲೆಗಳಿಂದ ಕೃಷಿಗೆ ನೀರು ಹರಿಸುತ್ತಿದ್ದು ಕಬ್ಬು, ಭತ್ತ, ರಾಗಿ, ಜೋಳ, ಹತ್ತಿ, ಶೇಂಗಾ, ತೆಂಗು, ಅಡಿಕೆ, ಬಾಳೆ ಹೀಗೆ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದು, ಒಂದಾನೊಂದು ಕಾಲದಲ್ಲಿ ಮಲೆ ನಾಡಿನಂತೆ ಕಂಗೊಳಿಸುತ್ತಿದ್ದ ಹಿರಿಯೂರು ಇಂದು ಬರದ ಛಾಯೆ ಆವರಿಸಿದೆ.
ಮತದಾರರು ಮೂರನೇ ಬಾರಿ ಡಿ. ಸುಧಾಕರ್ ಕೈ ಹಿಡಿಯುತ್ತಾರಾ ?, ಕಮಲ ಅರಳಿಸಲು ಬಿಜೆಪಿ ಹೇಗೆ ರಣತಂತ್ರ ರೂಪಿಸಿದೆ.. ತಿಳಿಯಲು ಮುಂದೆ ಓದಿ...
ರಾಜಕೀಯ ಚಿತ್ರಣ
ಹಿರಿಯೂರು ವಿಧಾನಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ಮೂರು ರಾಜಕೀಯ ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆಗೆ ರಾಜಕೀಯ ಅಖಾಡ ಸಿದ್ದವಾಗಿದೆ. 6 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ 4 ಕಾಂಗ್ರೆಸ್, ಬಿಜೆಪಿ 1, ಜೆಡಿಎಸ್ 1 ಒಳಗೊಂಡಿದೆ. ತಾಲೂಕು ಪಂಚಾಯಿತಿ, ಎಪಿಎಂಸಿ, ಬಹುತೇಕ ಗ್ರಾಮ ಪಂಚಾಯಿತಿಗಳು ಕೈ ವಶದಲ್ಲಿದ್ದು, ನಗರಸಭೆ ಬಿಜೆಪಿಯ ಆಡಳಿತ ಚುಕ್ಕಾಣಿ ಹಿಡಿದಿದೆ. ಇನ್ನೂ ಜೆಡಿಎಸ್ ನ 11 ತಾಲೂಕು ಪಂಚಾಯತ್ ಸದಸ್ಯರಿದ್ದಾರೆ.
ಡಿ. ಸುಧಾಕರ್ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ
ತಾಲ್ಲೂಕಿನ ಸಂಪೂರ್ಣ ಅಭಿವೃದ್ಧಿಗೆ ಅಂದರೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ರಸ್ತೆ ನಿರ್ಮಾಣ, ಮನೆ, ಕಾಲೇಜು ನಿರ್ಮಾಣ, ಶಿಕ್ಷಣ, ಬಡವರಿಗೆ ಸಹಾಯ ಸೇರಿದಂತೆ ಮೇಟಿಕುರ್ಕೆ, ಉಡುವಳ್ಳಿ ಕೆರೆಯಲ್ಲಿ ಬರಗಾಲದಲ್ಲಿ ಮೇವು ಬೆಳೆದು ಜಾನುವಾರುಗಳಿಗೆ ವಿತರಿಸಿರುವುದು ಪ್ರಮುಖ ಸಾಧನೆಯಾಗಿದೆ. ಶಾಸಕರು ಅಭಿವೃದ್ಧಿಗೆ ಹೆಚ್ಚು ಹೊತ್ತು ಕೊಟ್ಟಿದ್ದರೂ ಸಹ ಇದರ ಜೊತೆಯಲ್ಲಿ ಸಾಕಷ್ಟು ವಿರೋಧಗಳು ಕೇಳಿ ಬರುತ್ತಿವೆ. ಮತ್ತೊಂದು ಕಡೆ ಬಿಜೆಪಿ ಮತ್ತು ಜೆಡಿಎಸ್ ಪ್ರಬಲ ಪೈಪೋಟಿ ನೀಡಲು ಸಕಲ ಸಿದ್ದತೆಯಲ್ಲಿ ತೊಡಗಿಕೊಂಡಿವೆ.
ಕಮಲ ಅರಳಿಸಲು ಬಿಜೆಪಿ ರಣತಂತ್ರ
ಕಾಂಗ್ರೆಸ್ ಮತ್ತು ಜೆಡಿಎಸ್ ಭದ್ರ ಕೋಟೆ ಎಂದೇ ಬಿಂಬಿತವಾಗಿರುವ ಹಿರಿಯೂರು ಕ್ಷೇತ್ರವನ್ನು ತನ್ನ ಹಿಡಿತಕ್ಕೆ ಒಳಪಡಿಸಿಕೊಳ್ಳಲು ಸಾಕಷ್ಟು ಸಿದ್ಧತೆಯಲ್ಲಿದೆ. ಮೊದಲನೆ ಬಾರಿಗೆ ನಗರಸಭೆಯನ್ನು ಆಡಳಿತಕ್ಕೆ ಪಡೆದುಕೊಂಡಿದ್ದು ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯತ್ ಒಂದೊಂದು ಕ್ಷೇತ್ರದಲ್ಲಿ ಅಧಿಕಾರ ಇದೆ. ತಳ ಮಟ್ಟದಿಂದ ಪಕ್ಷ ಸಂಘಟನೆ ಮಾಡಿಕೊಂಡು ಬಂದಿರುವ ಬಿಜೆಪಿ ನಾಯಕರು ಮದುವೆ, ನಾಮಕರಣ ಮುಂತಾದ ಶುಭ ಸಮಾರಂಭಗಳಲ್ಲಿ ಪಾಲ್ಗೊಳ್ಳುವುದರ ಮೂಲಕ ಗೆಲುವಿಗೆ ಸಾಕಷ್ಟು ರಣತಂತ್ರ ರೂಪಿಸಿದ್ದಾರೆ.
ಅಬ್ಬರದ ಪ್ರಚಾರದಲ್ಲಿ ಜೆಡಿಎಸ್
ಹಿಂದಿನಿಂದಲೂ ಕ್ಷೇತ್ರದಲ್ಲಿ ಜೆಡಿಎಸ್ ಮತಗಳು ಭದ್ರವಾಗಿದ್ದು, ಕಳೆದ ವರ್ಷ ಕೂದಲೆಳೆ ಅಂತರದಲ್ಲಿ ಸೋತಿದ್ದು, ಈ ಬಾರಿ ಗೆಲುವು ಪಡೆಯಲು ಮನೆ ಮನೆಗೆ ಹೋಗಿ ಪ್ರಚಾರದಲ್ಲಿ ತೊಡಗಿದ್ದಾರೆ. ಸ್ಥಳೀಯ ಅಭ್ಯರ್ಥಿ ಕಣದಲ್ಲಿದ್ದು, ಈ ಬಾರಿ ಹಿರಿಯೂರು ಕ್ಷೇತ್ರ ಹೊರಗಿನವರಿಗೆ ಅಧಿಕಾರ ಕೊಡಲ್ಲ ಸ್ಥಳೀಯ ಅಭ್ಯರ್ಥಿಗೆ ಕೊಡಲಿದ್ದಾರೆ ಎಂಬುದು ಇಲ್ಲಿನ ಜೆಡಿಎಸ್ ನಾಯಕರ ನಿರ್ಧಾರ.
ಇದಕ್ಕೆ ಸರಿಯಾಗಿ ಮನೆ ಮನೆಗೆ ಕುಮಾರಣ್ಣ ಎಂಬ ಕಾರ್ಯಕ್ರಮ ಹಮ್ಮಿಕೊಂಡು ಮನೆಗಳಿಗೆ ತೆರಳಿ ಮತಯಾಚನೆ ಮಾಡುತ್ತಿದ್ದು, ಮತ್ತೊಂದು ಕಡೆ ಗೆಲುವಿಗೆ ಸಾಕ್ಷಿ ಕುಮಾರ ಪರ್ವ ಎಂಬ ಜೆಡಿಎಸ್ ಬೃಹತ್ ಸಮಾವೇಶಕ್ಕೆ ಆಗಮಿಸಿದ್ದ ಜನಸ್ತೋಮ. ಇದು ಜೆಡಿಎಸ್ ಗೆಲುವಿಗೆ ಒಂದು ಕಡೆ ಯುಗಾದಿಯ ಹೊಸ ಚಿಗುರು ಎಂದು ಹೇಳಬಹುದು
ಪಿ.ಕೊದಂಡರಾಮಯ್ಯ ಸ್ಪರ್ಧೆ ಮಾಡುವ ಸಾಧ್ಯತೆ
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪಿ. ಕೊದಂಡರಾಮಯ್ಯ ನವರು ಜೆಡಿಯು ಪಕ್ಷದಿಂದ ಅಖಾಡಕ್ಕೆ ಇಳಿಯುವ ಸಾಧ್ಯತೆ ಇದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಮತ್ತು ಜೆಡಿಯು ಪಕ್ಷದ ಮೈತ್ರಿ ಬಗ್ಗೆ ಸುಳಿವು ಸಿಕ್ಕಿದೆ.
ಒಟ್ಟಾರೆಯಾಗಿ ಹಿರಿಯೂರು ವಿಧಾನಸಭಾ ಕ್ಷೇತ್ರ ದಿನ ದಿನಕ್ಕೆ ಚುನಾವಣಾ ಕಾವು ರಂಗೇರುತ್ತಿದ್ದು 2018 ರ ಗೆಲುವು ಹ್ಯಾಟ್ರಿಕೋ, ಹೊರಗಿನವರಿಗೊ, ಅಥವಾ ಸ್ಥಳೀಯರಿಗೋ ಯಾರ ಕಡೆ ಮತದಾರ ಒಲವು ಎಂಬುದು ಮೇ 15 ರ ತನಕ ಕಾದು ನೋಡಬೇಕಿದೆ