ಕಾಂಗ್ರೆಸ್ ಗೆ ಪಾಠ ಕಲಿಸಿತಾ ಕಾಡುಗೊಲ್ಲ ಸಮುದಾಯ?
ಚಿತ್ರದುರ್ಗ, ಮೇ 27 : ಚಿತ್ರದುರ್ಗ ಜಿಲ್ಲೆಯಲ್ಲಿ ಕಾಡುಗೊಲ್ಲ ಸಮುದಾಯವು ಅತಿ ಹೆಚ್ಚು ಮತಗಳನ್ನು ಹೊಂದಿದ್ದು, ಯಾವುದೇ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಕಾಡುಗೊಲ್ಲ ಮತಗಳೇ ನಿರ್ಣಾಯಕ.
ಮೊನ್ನೆ ನಡೆದ ವಿಧಾನಸಭಾ ಚುನಾವಣೆಯಲ್ಲಿಯೂ ಚಿತ್ರದುರ್ಗ ವಿಧಾನಸಭಾ ಕ್ಷೇತ್ರಕ್ಕೆ ಈ . ದೊಡ್ಡ ನಾಗಯ್ಯ ನವರಿಗೆ ಟಿಕೆಟ್ ನೀಡುವಂತೆ ಕಾಡುಗೊಲ್ಲರು ಕಾಂಗ್ರೆಸ್ ಗೆ ಒತ್ತಾಯಿಸಿದ್ದರು.
ಕಳೆದ ಹಿಂದಿನ ಸರ್ಕಾರದಲ್ಲಿ ಸಮಾಜಕಲ್ಯಾಣ ಸಚಿವರಾಗಿದ್ದ ಎಚ್. ಆಂಜನೇಯ ಅವರು ಕಾಡುಗೊಲ್ಲರ ಬಗ್ಗೆ ಆಸಕ್ತಿ ತೋರಲಿಲ್ಲ. ಜಾತಿ ಪಟ್ಟಿ ವಿಚಾರದಲ್ಲಿ ಸಾಕಷ್ಟು ವಿಳಂಬ ಮಾಡಿದ್ದು ಎಚ್. ಆಂಜನೇಯ ಅವರಿಗೆ ಈ ಬಾರಿ ಸೋಲಿನ ರುಚಿ ತೋರಿಸಿದ್ದಾರೆ.
ಎಲೆಕ್ಷನ್ನೂ ಬೇಡ, ಕಲೆಕ್ಷನ್ನೂ ಬೇಡವೆಂದ ಸಿರುಗುಪ್ಪ ಜನ ಗುಳೆ ಹೊರಟ್ರು
ಇದರ ಜೊತೆಗೆ ಹಿರಿಯೂರಿನಲ್ಲಿ ಡಿ. ಸುಧಾಕರ್ ಮತ್ತು ಹೊಸದುರ್ಗದ ಬಿ.ಜಿ.ಗೋವಿಂದಪ್ಪ ನವರ ಗೆಲುವಿಗೂ ಬ್ರೇಕ್ ಹಾಕಿದ್ದಾರೆ. ಹಿರಿಯೂರಿನಲ್ಲಿ ಸುಮಾರು ಐವತ್ತು ಸಾವಿರ ಕಾಡುಗೊಲ್ಲರ ಮತಗಳಿದ್ದು, ಇವರ ಬಗ್ಗೆ ಧ್ವನಿ ಎತ್ತದ ಕಾರಣ ಮತ್ತು ಟಿಕೆಟ್ ಕೊಡಿಸಲು ವಿಫಲವಾಗಿದ್ದರಿಂದ ಡಿ. ಸುಧಾಕರ್ ಹ್ಯಾಟ್ರಿಕ್ ಕನಸು ನನಸಾಗಲಿಲ್ಲ.
ಈ ಚುನಾವಣೆಯಲ್ಲಿ ಚಿತ್ರದುರ್ಗದ ಐದು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತು. ಕಾಡುಗೊಲ್ಲರನ್ನು ಕಡೆಗಣಿಸಿದಾಗ ಜಿಲ್ಲೆಯ ಅಭ್ಯರ್ಥಿಗಳು ಹೇಗೆ ಪರಾಭವಗೊಳ್ಳುತ್ತಾರೆ ಎಂಬುದರ ವಿವರ ಇಲ್ಲಿದೆ ನೋಡಿ...
ರಾಜಕೀಯದಲ್ಲಿಯೂ ಯಾವುದೇ ಸ್ಥಾನಮಾನವಿಲ್ಲ
ಬುಡಕಟ್ಟು ಸಮುದಾಯಗಳಲ್ಲಿ ಕಾಡುಗೊಲ್ಲ ಸಮುದಾಯವು ಒಂದಾಗಿದೆ. ಈ ಸಮುದಾಯ ಮೂಲತಃ ಅಲೆಮಾರಿ ಜನಾಂಗವಾಗಿದ್ದು, ತನ್ನದೇ ಆದ ಬದುಕನ್ನು ಕಟ್ಟಿಕೊಂಡು ಬದುಕುತ್ತಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ವಾಸಿಸುವ ಈ ಜನಾಂಗದ ಭಾಷೆ ಕನ್ನಡ.
ಜುಂಜಪ್ಪ , ಕ್ಯಾತೇಲಿಂಗ, ಚಿತ್ರಲಿಂಗ, ಕಾಟಮಲಿಂಗ, ಇನ್ನಿತರ ದೇವರುಗಳನ್ನ ಆರಾಧಿಸುವ ಇವರು ಕಲೆಯಲ್ಲಿ ಶ್ರೀಮಂತಿಕೆ ಹೊಂದಿದ್ದಾರೆ. ಚಿತ್ರದುರ್ಗ, ದಾವಣಗೆರೆ, ತುಮಕೂರು, ಬೆಂಗಳೂರು, ಅರಸೀಕೆರೆ, ಬಳ್ಳಾರಿ ಇನ್ನೂ ಮುಂತಾದ ಕಡೆ ಹೆಚ್ಚಾಗಿ ಕಂಡು ಬರುತ್ತಾರೆ.
ಇವರು ಆರ್ಥಿಕವಾಗಿ, ರಾಜಕೀಯವಾಗಿ, ಶಿಕ್ಷಣ, ಉದ್ಯೋಗ, ಶೈಕ್ಷಣಿಕವಾಗಿ ಹಿಂದುಳಿದ್ದು ಇವರಿಗೆ ರಾಜಕೀಯದಲ್ಲಿ ಯಾವುದೇ ಸ್ಥಾನಮಾನ ಕಲ್ಪಿಸಿಲ್ಲ. ಹಿಂದೆ ಇವರನ್ನು ಹಟ್ಟಿಗೊಲ್ಲ ಅಥವಾ ಅಡವಿಗೊಲ್ಲ ಎಂದು ಕರೆಯುತ್ತಿದ್ದರು.
ಕಾಡುಗೊಲ್ಲರು ದಶಕಗಳಿಂದ ಜಾತಿ ಪಟ್ಟಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಹೋರಾಟ ಮಾಡಿಕೊಂಡು ಬಂದಿದ್ದರು. ಆದರೆ ಹಿಂದಿನ ಸರ್ಕಾರ ಅಂದರೆ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನವರಿ 17, 2018 ರಂದು ಕಾಡುಗೊಲ್ಲರಿಗೆ ಕಾಡುಗೊಲ್ಲ ಅಂತ ಜಾತಿ ಪ್ರಮಾಣ ಪತ್ರ ಕೊಡಲು ಸಚಿವ ಸಂಪುಟದಲ್ಲಿ ನಿರ್ಣಯ ತೆಗೆದುಕೊಂಡಿತ್ತು.
ಇದು ಕಾಡುಗೊಲ್ಲರ ದಶಕದ ಹೋರಾಟಕ್ಕೆ ಮೊದಲ ಜಯವಾಗಿತ್ತು.
ಮಗನ ಜೊತೆ ಸೋಲಿನ ಪಾಠ ಕಲಿತ ತಂದೆ
ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ ಟಿ. ಬಿ. ಜಯಚಂದ್ರ ಅವರು ತಮ್ಮ ಮಗನಾದ ಸಂತೋಷ್ ಜಯಚಂದ್ರ ಅವರಿಗೆ ಟಿಕೆಟ್ ಕೊಡಿಸಿದ್ದು ಇದು ಇಡೀ ರಾಜ್ಯದ ಕಾಡುಗೊಲ್ಲರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು.
ಚಿಕ್ಕನಾಯಕನಹಳ್ಳಿ 30 ಸಾವಿರ ಮತ್ತು ಶಿರಾದಲ್ಲಿ 40 ಸಾವಿರ ಕಾಡುಗೊಲ್ಲ ಮತಗಳು ಇದ್ದವು. ರಾಜ್ಯದಲ್ಲಿ ಜನಾಂಗಕ್ಕೆ ಒಂದು ಟಿಕೆಟ್ ಕೊಡದ ಕಾಂಗ್ರೆಸ್ ಗೆ ಮತ್ತು ಅಪ್ಪ-ಮಗನಿಗೆ ಸೋಲಿನ ಪಾಠ ಕಲಿಸಿದರು.
ಸೋಲಿಸದೇ ಬಿಡಲಿಲ್ಲ ಕಾಡುಗೊಲ್ಲರು
ರಾಜ್ಯದ 224 ಕ್ಷೇತ್ರಗಳಲ್ಲಿ ಕೇವಲ ಎರಡು ಕ್ಷೇತ್ರಕ್ಕೆ ತಮ್ಮ ಜನಾಂಗದವರಿಗೆ ಟಿಕೆಟ್ ಕೊಡಬೇಕೆಂದು ಕಾಡುಗೊಲ್ಲರು ಬೇಡಿಕೆ ಇಟ್ಟಿದ್ದರು. ಅಂದರೆ ಚಿತ್ರದುರ್ಗ ಕ್ಷೇತ್ರಕ್ಕೆ ಈ. ದೊಡ್ಡ ನಾಗಯ್ಯ ಮತ್ತು ಚಿ. ನಾ. ಹಳ್ಳಿಗೆ ಸಾಸಲು ಸತೀಶ್ ಅವರು ಪ್ರಬಲ ಆಕಾಂಕ್ಷಿಯಾಗಿದ್ದರು.
ಇವರಿಗೆ ಟಿಕೆಟ್ ಕೊಡಲು ಸಾಕಷ್ಟು ಮನವಿಯನ್ನೂ ಮಾಡಿದ್ದರು. ಕಾಡುಗೊಲ್ಲರ ಸ್ವಾಭಿಮಾನಕ್ಕಾದರೂ ಕಾಂಗ್ರೆಸ್ ಕ್ಯಾರೆ ಅನ್ನಲಿಲ್ಲ. ಇದರಿಂದ ಸಿಡಿದೆದ್ದ ಕಾಡುಗೊಲ್ಲರು ಈ ಬಾರಿ ಕಾಂಗ್ರೆಸ್ ತಿರಸ್ಕರಿಸಿ ಚಿತ್ರದುರ್ಗ, ಹೊಳಲ್ಕೆರೆ, ಹಿರಿಯೂರು, ಹೊಸದುರ್ಗ, ಶಿರಾ, ಮಧುಗಿರಿ, ಗುಬ್ಬಿ, ಕುಣಿಗಲ್, ಚಿಕ್ಕನಾಯಕನಹಳ್ಳಿ, ಕೂಡ್ಲಿಗಿ, ದಾವಣಗೆರೆ , ಅರಸೀಕೆರೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆ ಸರಿಯಾದ ಉತ್ತರ ನೀಡಿದ್ದಾರೆ.
ಮೂಢನಂಬಿಕೆ ಇಂದಿಗೂ ಜೀವಂತ
ಮೂಲಭೂತ ಸೌಕರ್ಯ ಗಳಿಂದ ವಂಚಿತವಾಗಿರುವ ಕಾಡುಗೊಲ್ಲ ಸಮುದಾಯವು ಊರಿನಿಂದ ದೂರ ಉಳಿದಿದ್ದು, ಇದುವರೆಗೆ ಸರಿಯಾದ ರಸ್ತೆ, ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಮನೆಗಳು ಸೇರಿದಂತೆ ಯಾವುದೇ ರೀತಿಯ ಸೌಲಭ್ಯಗಳು ಜನಾಂಗಕ್ಕೆ ದೊರೆತಿಲ್ಲ.
ರಾಜಕೀಯ ಪಕ್ಷಗಳು ಕಾಡುಗೊಲ್ಲರನ್ನು ಕೇವಲ ಮತಕ್ಕಾಗಿ ಬಳಸಿಕೊಳ್ಳುತ್ತಿವೆ. ಇಂದಿಗೂ ಹಟ್ಟಿಗಳು ಕಂದಾಯ ಗ್ರಾಮಗಳಾಗಿ ಏರ್ಪಟ್ಟಿಲ್ಲ. ಇವರಲ್ಲಿ ಮೂಢನಂಬಿಕೆ , ಕಂದಚಾರಗಳು ಇದ್ದು ಇವತ್ತಿಗೂ ಹೆಣ್ಣು ಮಕ್ಕಳು ರಜಾ ದಿನ ಹೊರಹೋಗುವ ಪದ್ದತಿ ಇನ್ನೂ ಜೀವಂತವಾಗಿದೆ.
ಅರಿವಿನ ಕೊರತೆ ಎದ್ದು ಕಾಣುತ್ತಿದ್ದು, ಗುಡಿಸಲು ಮನೆಗಳಲ್ಲಿ ವಾಸಿಸುವುದನ್ನು ಈಗಲೂ ಕಾಣಬಹುದು.