ಚಿತ್ರದುರ್ಗ ಮುಖಂಡರ ವಿರೋಧವಿದ್ದರೂ ಮರಳಿ ಕಾಂಗ್ರೆಸ್ ಸೇರ್ಪಡೆಯಾದ ವ್ಯಕ್ತಿ ಯಾರು?
ಚಿತ್ರದುರ್ಗ, ಸೆಪ್ಟೆಂಬರ್ 4: ಆತ ಒಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ನಾಯಕ. ಎರಡನೇ ಬಾರಿ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗಲಿಲ್ಲ ಎಂಬ ಒಂದೇ ಒಂದು ಕಾರಣಕ್ಕೆ ಕಾಂಗ್ರೆಸ್ ಪಕ್ಷದ ಸಂಬಂಧವನ್ನು ಕಳೆದುಕೊಂಡು ಬಿಜೆಪಿ ಪಕ್ಷದ ನಾಯಕರ ಜೊತೆ ಓಡಾಡುವ ಪರಿಪಾಠ ಬೆಳೆಸಿಕೊಂಡಿದ್ದ ವ್ಯಕ್ತಿ, ಇದೀಗ ಕೆಪಿಸಿಸಿ ಅಧ್ಯಕ್ಷರ ಮನೆಗೆ ತೆರಳಿ ಮರಳಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾನೆ.
ಈತನ ಕಾಂಗ್ರೆಸ್ ಸೇರ್ಪಡೆಯಿಂದ ಚಿತ್ರದುರ್ಗ ಜಿಲ್ಲೆ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ಅವರ ಮುಂದಿನ ನಡೆ ಏನು ಎಂಬುದು ಜಿಲ್ಲೆಯ ರಾಜಕಾರಣದಲ್ಲಿ ಕುತೂಹಲ ಕೆರಳಿಸಿದೆ. ಹಾಗಾದರೆ ಆ ವ್ಯಕ್ತಿ ಯಾರು ಅಂತೀರಾ ಈ ಸ್ಟೋರಿ ಓದಿ...
2009ರಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಭ್ಯರ್ಥಿ ತನ್ನ ಗೆಲುವಿಗಾಗಿ 2009ರಲ್ಲೇ ರಾಹುಲ್ ಗಾಂಧಿಯನ್ನು ಜಿಲ್ಲೆಗೆ ಕರೆತಂದು ದೊಡ್ಡ ಪ್ರಚಾರದ ಕಾರ್ಯಕ್ರಮವನ್ನು ಮಾಡಲಾಗಿತ್ತು. ಆದರೂ ಸಹ ಕೇವಲ 2 ಲಕ್ಷಕ್ಕೂ ಹೆಚ್ಚು ಮತ ಪಡೆದು ಬಿಜೆಪಿ ಅಭ್ಯರ್ಥಿ ಜನಾರ್ಧನಸ್ವಾಮಿ ವಿರುದ್ಧ ಹೀನಾಯ ಸೋಲು ಅನುಭವಿಸಿದ್ದರು.
ನಂತರ 2013ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಹೊಳಲ್ಕೆರೆ ಮೀಸಲು ಕ್ಷೇತ್ರದಿಂದ ಟಿಕೆಟ್ ಪಡೆಯಲು ಸಾಕಷ್ಟು ರೀತಿಯಲ್ಲಿ ಲಾಬಿ ನಡೆಸಿದರು. ಆದರೆ ಎಚ್. ಆಂಜನೇಯಗೆ ಟಿಕೆಟ್ ನೀಡಿದ್ದರಿಂದ ಇವರಿಗೆ ಟಿಕೆಟ್ ಕೈತಪ್ಪಿ ಹೋಯಿತು. ತದನಂತರದ ಬೆಳವಣಿಗೆಯ ಸಂದರ್ಭದಲ್ಲಿ 2014ರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ನಿಂದ ಟಿಕೆಟ್ ಬಯಸಿದ್ದರು. ಆದರೆ ಎರಡನೇ ಬಾರಿಗೆ ಟಿಕೆಟ್ ದೊರೆಯದ ಕಾರಣ ಪಕ್ಷದಿಂದ ಮುನಿಸಿಕೊಂಡು ದೂರ ಉಳಿದು, ಬಿಜೆಪಿ ನಾಯಕರ ಜೊತೆ ಗುರುತಿಸಿಕೊಂಡಿದ್ದ ವ್ಯಕ್ತಿಯೇ ಚಿತ್ರದುರ್ಗದ ಜೆ.ಜೆ. ಹಟ್ಟಿ ತಿಪ್ಪೇಸ್ವಾಮಿ ಮರಳಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಇದೀಗ ಇವರ ಸೇರ್ಪಡೆಯಿಂದ ಜಿಲ್ಲೆಯ ನಾಯಕರಿಗೆ ಇರಿಸು ಮುರಿಸು ಉಂಟಾಗಿದೆ ಎನ್ನಲಾಗಿದೆ.
ತಿಪ್ಪೇಸ್ವಾಮಿ ಚಿತ್ರದುರ್ಗ ಜಿಲ್ಲೆಯ ಕಾಂಗ್ರೆಸ್ನ ಎಲ್ಲಾ ಹಾಲಿ ಶಾಸಕರು, ಮಾಜಿ ಶಾಸಕರು ಹಾಗೂ ಪಕ್ಷದ ಮುಖಂಡರ ವಿರೋಧ ಕಟ್ಟಿಕೊಂಡಿದ್ದರು. ಈ ವಿರೋಧದ ನಡುವೆಯೂ ದಿಢೀರ್ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಇನ್ನು ಈ ಬಗ್ಗೆ ತಿಪ್ಪೇಸ್ವಾಮಿಯನ್ನು ಪ್ರಶ್ನಿಸಿದಾಗ, ""ನಾನು ಎಲ್ಲೂ ಹೋಗಿರಲಿಲ್ಲ, ನಾನು ಯಾರ ಜೊತೆಗೂ ಗುರುತಿಸಿಕೊಂಡಿರಲಿಲ್ಲ, ನಾನು ತಟಸ್ಥವಾಗಿ ಇದ್ದೆ. ಮತ್ತೆ ಕಾಂಗ್ರೆಸ್ ಪಕ್ಷ ಸೇರಿದ್ದೀನಿ ಎಂದು ಹೇಳುತ್ತಾರೆ.''
ಇದು ಮುಂದಿನ ಚುನಾವಣೆಗೆ ರಾಜಕೀಯ ದಾಳ ಉರಿಳಿಸುವುದಕ್ಕೆ ಕೆಲ ರಾಜಕೀಯ ಪ್ರಭಾವಿ ನಾಯಕರುಗಳು ಮಾಡುತ್ತಿರುವ ಆಟ ಎಂಬ ಮಾತುಗಳು ಕೇಳಿಬರುತ್ತಿವೆ. ಜೆ.ಜೆ. ಹಟ್ಟಿ ತಿಪ್ಪೇಸ್ವಾಮಿಯನ್ನು ಮುಂದಿಟ್ಟುಕೊಂಡು ಮಾಜಿ ಸಂಸದ ಬಿ.ಎನ್. ಚಂದ್ರಪ್ಪ ವಿರುದ್ಧ ಮಸಲತ್ತು ಮಾಡಲು ಹೊರಟಿದ್ದಾರೆ ಎನ್ನಲಾಗಿದೆ. 2014ರಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸ್ಪರ್ಧಿಸಲು ಕಾಂಗ್ರೆಸ್ ಬಿ.ಎನ್. ಚಂದ್ರಪ್ಪಗೆ ಟಿಕೆಟ್ ನೀಡಿತು. ತಿಪ್ಪೇಸ್ವಾಮಿಗೆ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ಬಿ.ಎನ್. ಚಂದ್ರಪ್ಪರನ್ನು ಪ್ರಬಲವಾಗಿ ವಿರೋಧಿಸಿದ್ದರು. ಹೊರಗಿನಿಂದ ಬಂದ ವ್ಯಕ್ತಿಗೆ ಟಿಕೆಟ್ ನೀಡಿದ್ದಾರೆ. ಅವರು ದಲಿತ ಸಮುದಾಯದ ವ್ಯಕ್ತಿಯೇ ಅಲ್ಲ. ಇವರಿಗೆ ಹೇಗೆ ಟಿಕೆಟ್ ಕೊಟ್ಟಿದ್ದಾರೆ ಎಂದು ವಿರೋಧಿಸುವ ಮೂಲಕ ಕಾಂಗ್ರೆಸ್ನಿಂದ ದೂರ ಉಳಿದಿದ್ದರು.
"ತಿಪ್ಪೇಸ್ವಾಮಿ ಒಂದು ವೇಳೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುವುದಾದರೆ ಚಿತ್ರದುರ್ಗ ಜಿಲ್ಲೆಯಲ್ಲೇ ಪಕ್ಷಕ್ಕೆ ಸೇರ್ಪಡೆಯಾಗಬಹುದಿತ್ತು. ಆದರೆ ಎಲ್ಲರ ವಿರೋಧ ಇದೆ ಎಂಬ ಕಾರಣಕ್ಕೆ ಕೆಪಿಸಿಸಿ ಡಿ.ಕೆ. ಶಿವಕುಮಾರ್ ಮನೆಯಲ್ಲಿ ಪಕ್ಷ ಸೇರ್ಪಡೆ ಆಗಿರುವುದು ಇತನ ಮುಂದಿನ ನಡೆ ಏನು ಎಂಬ ಪ್ರಶ್ನೆ ಮೂಡಿದೆ.
ಜೆ.ಜೆ. ಹಟ್ಟಿ ತಿಪ್ಪೇಸ್ವಾಮಿ ಮತ್ತೆ ಕಾಂಗ್ರೆಸ್ಗೆ ಮರಳಿ ವಾಪಸ್ ಬಂದಿರುವುದರಿಂದ ಜಿಲ್ಲೆಯ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಆದರೂ ಪರೋಕ್ಷವಾಗಿ ಏನನ್ನು ಮಾತನಾಡದೆ ಜಿಲ್ಲೆಯ ಕಾಂಗ್ರೆಸ್ ನಾಯಕರು ಒಪ್ಪಿಕೊಳ್ಳುವ ಮೂಲಕ ಸ್ವಾಗತಿಸಿದ್ದಾರೆಂದರೆ ತಪ್ಪಾಗಲಾರದು. ಆದರೆ ಈತನ ಆಗಮನದಿಂದ ಮುಂದೆ ಕಾಂಗ್ರೆಸ್ನಲ್ಲಿ ಮತ್ತಷ್ಟು ಭಿನ್ನಮತ ಚಟುವಟಿಕೆಗಳು ಉಂಟಾಗುತ್ತವೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಈಗಿನ ಹಾಲಿ ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರುಗಳು ಹಾಗೂ ಪಕ್ಷದ ಮುಖಂಡರುಗಳು ಕೂಡ ಇವರ ಸೇರ್ಪಡೆಗೆ ತೀವ್ರ ಆಕ್ಷೇಪಣೆಯನ್ನು ವ್ಯಕ್ತಪಡಿಸಿದ್ದಾರೆ. ಆದರೆ ಇವರೆಲ್ಲರೂ ಪರೋಕ್ಷವಾಗಿ ಆಕ್ಷೇಪ ವ್ಯಕ್ತಪಡಿಸಿದರೂ ಪ್ರತ್ಯಕ್ಷವಾಗಿ ಯಾರು ಕೂಡ ಮಾತನಾಡದೇ ಇರುವುದು ಸೋಜಿಗದ ಸಂಗತಿಯಾಗಿದೆ. ಇದು ಮುಂದೆ ಜಿಲ್ಲೆಯಲ್ಲಿ ಯಾವ ಯಾವ ರೀತಿಯಲ್ಲಿ ರಾಜಕೀಯ ತಿರುವು ಪಡೆದುಕೊಳ್ಳುತ್ತದೆ ಎನ್ನುವುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕು.
Recommended Video