"ಚೈಲ್ಡಿಶ್, ಜೋಕ್ ಆಫ್ ದಿ ಸೆಂಚುರಿ"; ಮೋದಿಗೆ ಜಿಗ್ನೇಶ್ ಮೇವಾನಿ ಬಾಣ!
ಚಿತ್ರದುರ್ಗ, ಅಕ್ಟೋಬರ್ 31: ರಾಜ್ಯ ಮಟ್ಟದಲ್ಲಿ ಸದ್ದು ಮಾಡುತ್ತಿರುವ, ಟಿಪ್ಪು ಹೆಸರನ್ನು ಪಠ್ಯಪುಸ್ತಕದಿಂದ ಹೊರತೆಗೆಯುವ ವಿಚಾರವಾಗಿ, "ಟಿಪ್ಪು ಸುಲ್ತಾನ್ ಹೆಸರನ್ನು ಇಲ್ಲವಾಗಿಸುವ ಯತ್ನ ನಡೆಯುತ್ತಿದೆ. ಆರೆಸ್ಸೆಸ್ ಹಾಗೂ ಬಿಜೆಪಿಯ ಹಿಡನ್ ಅಜೆಂಡಾ ಇದು, ಹಿಂದೂ ತುಷ್ಟೀಕರಣಕ್ಕಾಗಿ ಇತಿಹಾಸವನ್ನು ಅಳಿಸಲು ಬಿಜೆಪಿಯವರು ಹೀಗೆ ಮಾಡುತ್ತಿದ್ದಾರೆ" ಎಂದು ಆರೋಪಿಸಿದ್ದಾರೆ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ.
ಚಿತ್ರದುರ್ಗದಲ್ಲಿ ಜಿಗ್ನೇಶ್ ಮೆವಾನಿ ವಿರುದ್ಧ ಕಳೆದ ವರ್ಷ ಪ್ರಕರಣ ದಾಖಲಾಗಿತ್ತು. ಕಳೆದ ವಿಧಾನಸಭೆ ಚುನಾವಣೆ ವೇಳೆ 'ಮೋದಿ ಕಾರ್ಯಕ್ರಮದಲಿ ಕುರ್ಚಿ ತೂರಿ' ಎಂಬ ಹೇಳಿಕೆ ಹಿನ್ನೆಲೆ 2018 ಏಪ್ರಿಲ್ 6 ರಂದು ನಗರ ಠಾಣೆಯಲ್ಲಿ ಅವರ ವಿರುದ್ಧ ದೂರು ದಾಖಲಾಗಿತ್ತು.
ದಲಿತರಿಗೆ ಗುಜರಾತ್ ಸುರಕ್ಷಿತವಲ್ಲ: ಜಿಗ್ನೇಶ್ ಮೆವಾಣಿ
ಇದೇ ಕಾರಣಕ್ಕೆ ಇಂದು ಚಿತ್ರದುರ್ಗ ನ್ಯಾಯಾಲಯಕ್ಕೆ ಬಂದಿದ್ದ ವೇಳೆ ಪ್ರತಿಕ್ರಿಯಿಸಿದ ಅವರು, "ಟಿಪ್ಪು ಇತಿಹಾಸವನ್ನು ಪಠ್ಯದಿಂದ ತೆಗೆಯುವ ಮೂಲಕ ಮುಸ್ಲಿಂ ಸಮುದಾಯವನ್ನು ದಮನ ಮಾಡುವ ಕಾರ್ಯ ನಡೆಯುತ್ತಿದೆ, ಇದರಿಂದ ಹಿಂದೂ ಮುಸ್ಲಿಂ ಸಮುದಾಯಗಳನ್ನು ಇಬ್ಭಾಗಿಸಲಾಗುತ್ತಿದೆ. ಆರ್ ಎಸ್ ಎಸ್ ಕೋಮುವಾದಿ ಮನಸ್ಥಿತಿ ಈ ಕೆಲಸ ಮಾಡುತ್ತಿದೆ. ವೈವಿಧ್ಯತೆ ಮತ್ತು ಏಕತೆಯೇ ಭಾರತದ ಸೌಂದರ್ಯ. ಅದನ್ನು ನಾವು ಪಾಲಿಸಬೇಕಿದೆ" ಎಂದರು.
"ದೇಶದಲ್ಲಿ ಆರ್ಥಿಕ ಮುಗ್ಗಟ್ಟು, ನಿರುದ್ಯೋಗ ತಾಂಡವವಾಡುತ್ತಿವೆ, ಇದಕ್ಕೆ ಪ್ರಧಾನಿ ಮೋದಿ ಬಳಿ ಯಾವುದೇ ಉತ್ತರವಿಲ್ಲ. ಜನರ ಗಮನ ಬೇರೆಡೆ ಸೆಳೆಯಲು ಇಂಥ ತಂತ್ರ ಹೂಡುತ್ತಿದ್ದಾರೆ. ನರೇಗಾ ಯೋಜನೆ, ಆರೋಗ್ಯ ಯೋಜನೆಗಳು ಮುಗ್ಗರಿಸಿವೆ ಹೋಗಿವೆ. ಜನರಿಗೆ ಈಗ ಬಿಜೆಪಿ ಸರ್ಕಾರದ ಧೋರಣೆ ಅರಿವಾಗುತ್ತಿದೆ. ಎಲ್ಲಾ ಪಕ್ಷದ ನಾಯಕರು ವಾಸ್ತವ ಪರಿಸ್ಥಿತಿಯನ್ನು ಜನರ ಮುಂದಿಡಬೇಕಿದೆ" ಎಂದರು.
ಪ್ರಧಾನಿ ಮೋದಿ ಚಹಾ ಮಾರಿದ ಮಾತಿಗೆ ಪ್ರತಿಕ್ರಿಯಿಸಿದ ಮೇವಾನಿ "ಚೈಲ್ಡಿಶ್, ಜೋಕ್ ಆಫ್ ದಿ ಸೆಂಚುರಿ; ಅವರು ಚಹಾ ಮರಿದ್ದಾರೋ ಇಲ್ಲವೋ ಗೊತ್ತಿಲ್ಲ, ಈಗ ದೇಶ ಮಾರುತ್ತಿದ್ದಾರೆ" ಎಂದು ಮೋದಿ ವಿರುದ್ಧ ಕಿಡಿಕಾರಿದರು. ಆರ್ ಎಸ್ ಎಸ್, ಬಿಜೆಪಿಗೆ ದಲಿತರು, ಮುಸ್ಲಿಮರು 2ನೇ ದರ್ಜೆ ನಾಗರೀಕರಾಗಿದ್ದು, ಅವರನ್ನು ಕೆಲಸಕ್ಕೆ ಮಾತ್ರ ಬಳಸಿಕೊಳ್ಳುವುದು ಬಿಜೆಪಿಯ ಅಜೆಂಡ" ಎಂದು ಸಿಡುಕಿದರು.
ಮೋದಿ ವಿರುದ್ಧ ಅವಹೇಳನಕಾರಿ ಮಾತು: ಮೇವಾನಿ, ರೈ ವಿರುದ್ಧ ದೂರು
ಚಿತ್ರದುರ್ಗದಲ್ಲಿ ಜಿಗ್ನೇಶ್ ಮೇವಾನಿ ವಿರುದ್ಧ ಇರುವ ಪ್ರಕರಣದ ವಿಚಾರವಾಗಿಯೂ ಮಾತನಾಡಿ, "ನನ್ನ ವಿರುದ್ಧ ಪ್ರಕರಣ ದಾಖಲಾಗಿದೆ, ಆದರೆ ನಾನು ಆ ರೀತಿ ಹೇಳಿಲ್ಲ. ಅಸಲಿಗೆ ನನಗೆ ಮೋದಿ ಯಾರು ಎಂದೇ ಗೊತ್ತಿಲ್ಲ" ಎಂದು ವ್ಯಂಗ್ಯದ ಧಾಟಿಯಲ್ಲಿ ಉತ್ತರಿಸಿದರು.