"ಜಾನಪದ ಕೋಗಿಲೆಯ" ನೆನಪಿಗೆ 11 ವರ್ಷ; ಈಡೇರಿತೇ ಸಿರಿಯಜ್ಜಿ ಬೇಡಿಕೆ?
ಚಿತ್ರದುರ್ಗ, ಸೆಪ್ಟೆಂಬರ್ 22: ತಮ್ಮ ಸಿರಿಕಂಠದ ಮೂಲಕ ಕನ್ನಡ ಜಾನಪದ ಲೋಕಕ್ಕೆ ಅತ್ಯಮೂಲ್ಯ ಕೊಡುಗೆ ನೀಡಿದ ಹಿರಿಯ ಗಾಯಕಿ, ದಿವಂಗತ ಸಿರಿಯಜ್ಜಿ ಮರೆಯಾಗಿ ಇಂದಿಗೆ ಹನ್ನೊಂದು ವರ್ಷ. ಆದರೆ ಇಷ್ಟು ವರ್ಷಗಳು ಕಳೆದರೂ ಸಿರಿಯಜ್ಜಿಯ ಬೇಡಿಕೆಗಳು ಈಡೇರದೆ, ಅಜ್ಜಿಯ ಸಮಾಧಿಯೂ ನೆಲಸಮವಾಗಿದೆ. ಆದರೆ ಆಕೆಯ ಕಲೆಯನ್ನು ಶಾಶ್ವತವಾಗಿ ಉಳಿಸುವ ಯಾವ ಕಾರ್ಯಗಳೂ ನಡೆಯದಿಲ್ಲದಿರುವುದು ಬೇಸರದ ಸಂಗತಿ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಯಲಗಟ್ಟೆ ಗೊಲ್ಲರಟ್ಟಿಯಲ್ಲಿ ಜನಿಸಿದ ಸಿರಿಯಜ್ಜಿ ತನ್ನ ತಾಯಿ ಹಾಗೂ ಅಜ್ಜಿಯಿಂದ ಚಿಕ್ಕಂದಿನಿಂದಲೇ ಸಾವಿರಾರು ಹಾಡುಗಳನ್ನು ಕಲಿತಿದ್ದರು. ಅಕ್ಷರ ಜ್ಞಾನವಿಲ್ಲದ ಸಿರಿಯಜ್ಜಿ ತನ್ನ ಕೊನೆಯ ಉಸಿರು ಇರುವವರೆಗೂ ಹಾಡುತ್ತಲೇ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿ ಮಾಡುವ "ಜನಪದ ಕಣಜ" "ಕಾಡುಗೊಲ್ಲರ ಗಾನಕೋಗಿಲೆ" ಎಂದೇ ಹೆಸರು ಪಡೆದಿದ್ದರು. 10000 ಸಾವಿರಕ್ಕೂ ಹೆಚ್ಚು ಜಾನಪದ ಹಾಡುಗಳನ್ನು ತನ್ನ ಮೆದುಳಿನ ಜ್ಞಾನಭಂಡಾರದಲ್ಲಿ ಇಟ್ಟುಕೊಂಡಿದ್ದ ಸಿರಿಯಜ್ಜಿ ಮದುವೆ, ದೇವರ, ಜಾತ್ರೆ ಉತ್ಸವ, ಹಬ್ಬಹರಿದಿನಗಳಲ್ಲಿ ಮತ್ತಿತರ ಶುಭ ಸಮಾರಂಭಗಳಲ್ಲಿ ಹಾಡಲು ಪ್ರಾರಂಭಿಸಿದರೆ ಅಲ್ಲಿ ಜಾನಪದ ಲೋಕವೇ ತೆರೆದುಕೊಳ್ಳುತ್ತಿತ್ತು.
ದಣಿಯದೆ ಹಾಡುತ್ತಿದ್ದ ಕಲೆಗಾತಿ
ದಣಿವರಿಯದೆ ನಿರಂತರವಾಗಿ ಹಾಡುವ ಕಲೆಯನ್ನು ಸಿರಿಯಜ್ಜಿ ರೂಢಿಸಿಕೊಂಡಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯ, ದಿ. ಗುಂಡೂರಾವ್ ಅಜ್ಜಿಯ ಮನೆಗೆ ಭೇಟಿ ನೀಡಿ ಹಾಡುಗಳನ್ನು ಕೇಳಿಸಿಕೊಂಡಿದ್ದಾರೆ. ಇಂತಹ "ಜನಪದ ಧ್ರುವತಾರೆ" ಸಿರಿಯಜ್ಜಿಯ ಕನಸುಗಳು ಇಂದಿಗೂ ನನಸಾಗದೇ ಉಳಿದಿರುವುದು ದುರದೃಷ್ಟಕರ.
"ಜಾನಪದ ಸಿರಿ" ಸಿರಿಯಜ್ಜಿಯ ನೆನಪಿಗೆ ಸ್ಮಾರಕವಾದರೂ ಬೇಡವೇ?
ಒಮ್ಮೆ ಸಿರಿಯಜ್ಜಿ ಕಾಲು ಮುರಿದುಕೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದಾಗ, ಆಕೆಗೆ ಊರುಗೋಲಾಗಿದ್ದ ವಿದ್ಯಾವಂತ ಮೊಮ್ಮಗನಿಗೆ ಮುರುಘಾ ಶರಣರ ಸಂಸ್ಥೆಯಲ್ಲಿ ಉದ್ಯೋಗ ನೀಡುವ ಭರವಸೆಯನ್ನು ಅಜ್ಜಿಗೆ ನೀಡಿದ್ದರು. ಆದರೆ ಇದುವರೆಗೂ ಉದ್ಯೋಗ ದೊರೆತಿಲ್ಲ.
ಹನ್ನೊಂದು ವರ್ಷವಾದರೂ ಯಥಾಸ್ಥಿತಿ
ಗೊಲ್ಲರಹಟ್ಟಿಯಲ್ಲಿ ಮಹಿಳೆಯರಿಗೆ ಹೆರಿಗೆ ಕೊಠಡಿ, ಅಜ್ಜಿಗೆ ಬಂದ ಪ್ರಶಸ್ತಿಗಳನ್ನು ಸಂಗ್ರಹಿಸಲು ಒಂದು ಗ್ರಂಥಾಲಯ, ಅಜ್ಜಿ ವಾಸಿಸುತ್ತಿದ್ದ ಗುಡಿಸಲಿನ ಜಾಗದಲ್ಲಿ ಮನೆ ನಿರ್ಮಿಸುವಂತೆ ಅಜ್ಜಿಯು ಸಾಯುವುದಕ್ಕಿಂತ ಮುಂಚೆ ಅಧಿಕಾರಿಗಳ ಮುಂದೆ ಬೇಡಿಕೆಗಳನ್ನು ಇಟ್ಟಿದ್ದರು. ಆದರೆ ಬೇಡಿಕೆಗಳನ್ನು ಅಂದು ಕೇಳಿಸಿಕೊಂಡ ಅಧಿಕಾರಿಗಳು ಅಂದೇ ಮರೆತುಬಿಟ್ಟಿದ್ದಾರೆ. ಇಂದಿಗೆ ಸಿರಿಯಜ್ಜಿ ಸತ್ತು ಹನ್ನೊಂದು ವರ್ಷ ಕಳೆದರೂ ಬೇಡಿಕೆಗಳು ಈಡೇರಿಲ್ಲ, ಈಡೇರಿಸಲು ಯಾರು ಸಹ ಮುಂದೆ ಬಂದಿಲ್ಲ.
ಭರವಸೆಯಾಗಿಯೇ ಉಳಿಯಿತು ಸ್ಮಾರಕ ನಿರ್ಮಾಣ
ಸಿರಿಯಜ್ಜಿ ಮೃತಪಟ್ಟ ವಿಷಯವನ್ನು ಕೇಳಿದ ನೂರಾರು ಮಂದಿ ಅಂತಿಮ ದರ್ಶನ ಪಡೆಯಲು ಬಂದಿದ್ದರು. ಅಜ್ಜಿಯ ಅಂತಿಮ ದರ್ಶನಕ್ಕೆ ಯಲಗಟ್ಟೆ ಗೊಲ್ಲರಟ್ಟಿಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಅಂದು ಅಂತಿಮ ದರ್ಶನ ಪಡೆಯಲು ಬಂದಿದ್ದ ಉಪನ್ಯಾಸಕರು, ಸಾಹಿತಿಗಳು, ಅಧಿಕಾರಿಗಳು, ಅಜ್ಜಿ ಅಭಿಮಾನಿಗಳು, ಜನಪ್ರತಿನಿಧಿಗಳು ಸ್ಮಾರಕ ನಿರ್ಮಾಣಕ್ಕಾಗಿ ದೇಣಿಗೆ ನೀಡುವುದಾಗಿ ಸ್ವಯಂ ಘೋಷಣೆ ಮಾಡಿದ್ದರು. ಇಂದಿಗೆ ಹನ್ನೊಂದು ವರ್ಷ ಕಳೆದರೂ ಅಜ್ಜಿಯ ಸ್ಮಾರಕ ನಿರ್ಮಾಣ ಮಾಡಲು ಯಾರೂ ಮುಂದೆ ಬಂದಿಲ್ಲ.
'ಜಾನಪದ ಕೋಗಿಲೆ' ಸಿರಿಯಜ್ಜಿ ನಿಧನ, ಗಣ್ಯರ ಶೋಕ
Recommended Video
ಅನಾಥವಾಗಿದೆ ಸಿರಿಯಜ್ಜಿಯ ಸಮಾಧಿ
ಸರ್ಕಾರವಾಗಲಿ, ಇಲ್ಲಿನ ಜನಪ್ರತಿನಿಧಿಗಳಾಗಲಿ ಅಜ್ಜಿಯ ಸಮಾಧಿ ಕಡೆ ಇಣುಕಿಯೂ ನೋಡುತ್ತಿಲ್ಲ. ಅಜ್ಜಿಯ ಸಮಾಧಿಗೆ ನಾಲ್ಕು ಕಲ್ಲುಗಳ ಮಧ್ಯೆ ಬೇನುವವನ್ನು ಹಾಕಲಾಗಿದೆಯಷ್ಟೆ. ಆ ಕಲ್ಲು ಎರಡು ದಿನಗಳ ಹಿಂದೆ "ನಾಡೋಜ ಸಿರಿಯಜ್ಜಿ ಸಾಂಸ್ಕೃತಿಕ ಪ್ರತಿಷ್ಠಾನ" ಲೋಗೋ ಬಿಡುಗಡೆಗೊಂಡಿದ್ದು, ಈ ಪ್ರತಿಷ್ಠಾನದವರು ಅಜ್ಜಿಯ ಕಲೆಯನ್ನು, ನೆನಪುಗಳನ್ನು ಸ್ಮರಣೀಯವಾಗಿಸುತ್ತಾರಾ ಕಾದುನೋಡಬೇಕಿದೆ.