ದುರ್ಗದ ಹೊಂಡ, ಕೆರೆ ಭರ್ತಿ, ಪ್ರವಾಸಿಗರೇ ಬನ್ನಿ ಒಂದ್ಸರ್ತಿ!
ಚಿತ್ರದುರ್ಗ ಜಿಲ್ಲೆಯಾದ್ಯಂತ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಐತಿಹಾಸಿಕ ಚಂದ್ರವಳ್ಳಿ ಕೆರೆ, ಗೋಪಾಲಸ್ವಾಮಿ ಹೊಂಡ, ಸಿಹಿ ನೀರು ಹೊಂಡ, ತಣ್ಣೀರು ದೋಣಿ, ಅಕ್ಕ ತಂಗಿ ಹೊಂಡ, ಸಂತೇಹೊಂಡ, ಕಾಮನಬಾವಿ ಹೀಗೆ ಎಲ್ಲ ಪುಷ್ಕರಣಿ ಹೊಂಡುಗಳು ತುಂಬಿ ಹರಿಯುತ್ತಿವೆ. ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆ.
ಅಲ್ಲದೆ, ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪದ ಗಾಯತ್ರಿಪುರದಲ್ಲಿರುವ ಗಾಯತ್ರಿ ಡ್ಯಾಂ ಭರ್ತಿಯಾಗಿದ್ದು ಅಕ್ಟೋಬರ್ ಶಾಲಾ-ಕಾಲೇಜ್ ರಜೆಗೆ ಕುಟುಂಬ ಸಮೇತವಾಗಿ ಒಂದು ವಿಶೇಷ ಪ್ರವಾಸ ಹಮ್ಮಿಕೊಂಡು ದಣಿದ ಮನಕ್ಕೆ ಮುದ ನೀಡುವ ಅವಕಾಶ ವರುಣನ ಕೃಪೆಯಿಂದ ಲಭ್ಯವಾಗಿದೆ.
ಐತಿಹಾಸಿಕ ಚಂದ್ರವಳ್ಳಿ ಕೆರೆ-ಚಿತ್ರದುರ್ಗ ನಗರದ ಹೊಳಲ್ಕೆರೆ ರಸ್ತೆಗೆ ಕೂಗಳತೆ ದೂರದಲ್ಲಿರುವ ಐತಿಹಾಸಿಕ ಚಂದ್ರವಳ್ಳಿ ಕೆರೆ ಭಾರೀ ಮಳೆಯಿಂದಾಗಿ ಕಳೆದ ವಾರ ಭರ್ತಿಯಾಗಿ ಕೋಡಿ ಹರಿದಿದೆ.
ನಗರದ ಶ್ವಾಸಕೋಶದ ಬಹುದೊಡ್ಡ ತಾಣ, ಆಮ್ಲಜನಕ ಉತ್ಪತ್ತಿಯ ಸಸ್ಯಕಾಶಿ ಎಂದೇ ಖ್ಯಾತಿ ಪಡೆದಿರುವ ಚಂದ್ರವಳ್ಳಿ ಕೆರೆ ಪ್ರವಾಸಿಗರ ನೆಚ್ಚಿನ ತಾಣವೂ ಆಗಿದೆ.
ಚಿತ್ತಾ ಮಳೆಗೆ ಕೆರೆ ತುಂಬಿ ಕೋಡಿ
ಐತಿಹಾಸಿಕ ಏಳು ಸುತ್ತಿನ ಕೋಟೆಯ ಹಿಂಭಾಗ, ಧವಳಪ್ಪನ ಗುಡ್ಡದ ಜಲಾನಯನ ಪ್ರದೇಶದಲ್ಲಿ ಸುರಿದ ಚಿತ್ತಾ ಮಳೆಗೆ ಕೆರೆ ತುಂಬಿ ಕೋಡಿ ಬಿದ್ದಿದೆ. ಕೆರೆಯಲ್ಲಿ ಹೆಚ್ಚಾದ ನೀರು ವಿಶಾಲವಾಗಿ ಮೈಚೆಲ್ಲಿರುವ ಬಂಡೆಗಳಮೇಲೆ ಜಲಪಾತದಂತೆ ಹರಿಯುತ್ತಿದೆ. ಹಬ್ಬದ ರಜೆಯ ದಿನಗಳಲ್ಲಿ ನಗರದ ನಾಗರಿಕರು, ಪ್ರವಾಸಿಗರು ಮಕ್ಕಳೊಂದಿಗೆ ಈ ಪುಟ್ಟ ಜಲಪಾತದಲ್ಲಿ ಆಟವಾಡುತ್ತಿದ್ದನ್ನು ನೋಡುವುದೇ ಒಂದು ಸಂಭ್ರಮ.
ನಿರ್ಮಾಣ-ಜಲಾಗಾರ
ನಿರ್ಮಾಣ- ಚಿತ್ರದುರ್ಗದ ಇತಿಹಾಸದ ಪ್ರಕಾರ ಚಂದ್ರವಳ್ಳಿಯ ಕೆರೆಯನ್ನು ಕದಂಬ ರಾಜ ಮಯೂರ ವರ್ಮ ನಿರ್ಮಿಸಿದ್ದಾನೆ ಎಂದು ಹೇಳಲಾಗುತ್ತಿದೆ. ಆದರೆ, ಇತ್ತೀಚೆಗೆ ಸಣ್ಣ ನೀರಾವರಿ ಇಲಾಖೆ, ಅರಣ್ಯ ಇಲಾಖೆ, ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆಗೆ ಸೇರಿದೆ. ಇದರ ನಿರ್ವಹಣೆ ಕೂಡ ಸಂಬಂಧಪಟ್ಟ ಇಲಾಖೆಗಳೇ ನೋಡಿಕೊಳ್ಳುತ್ತಿವೆ.
ಜಲಾಗಾರ: ಚಂದ್ರವಳ್ಳಿ ಕೆರೆ ನಗರದ ಅಂತರ್ಜಲ ಮಟ್ಟ ಕಾಯ್ದುಕೊಳ್ಳುವ ಪ್ರಮುಖ ಜಲಮೂಲ. ಚಂದ್ರವಳ್ಳಿ ಕೆರೆ ಭರ್ತಿಯಾದರೆ ಅದರ ಮುಂದಿನ ಬಹುದೊಡ್ಡ ಕೆರೆಗಳ ಜಲಾನಯನದ ಆರಂಭಿಕ ಜಲಾಗಾರವಾಗಿದೆ.
ಮಲ್ಲಾಪುರ ಕೆರೆ ಸೇರುತ್ತದೆ
ಚಂದ್ರವಳ್ಳಿ ಕೆರೆ ಭರ್ತಿಯಾಗಿ ಕೋಡಿ ಹರಿದರೆ ಬರಗೇರಮ್ಮ ದೇವಸ್ಥಾನದ ಸಮೀಪದ ರಾಜ ಕಾಲುವೆ ಮೂಲಕ ಹೊಳಲ್ಕೆರೆ ರಸ್ತೆ ಹಾದುಕೊಂಡು ನೆಹರು ನಗರದಲ್ಲಿರುವ ಗಣಪತಿ ದೇವಸ್ಥಾನ, ಕೆರೆ ಅಂಗಳ, ದಾವಣಗೆರೆ ರಸ್ತೆ ಮೂಲಕ ಮಲ್ಲಾಪುರ ಕೆರೆ ಸೇರುತ್ತದೆ. ನಂತರ ಮಲ್ಲಾಪುರದ ಕೆರೆ, ಗೋನೂರು ಕೆರೆ, ದ್ಯಾಮವ್ವನಹಳ್ಳಿ ಕೆರೆ, ಕಲ್ಲಹಳ್ಳಿ ಕೆರೆ, ಸಾಣೇಕೆರೆ, ರಾಣಿಕೆರೆ ಸೇರಿ ಆಂಧ್ರದ ತಿಪ್ಪಗೊಂಡನಹಳ್ಳಿ ಡ್ಯಾಂಗೆ ಸೇರುತ್ತದೆ. ಹೀಗೆ ಒಂದಕ್ಕೊಂದು ಸಂಪರ್ಕ ಇರುವಂತೆ ಈ ಹಿಂದೆ ಆಳ್ವಿಕೆ ಮಾಡಿದ ರಾಜರು ಕೆರೆಗಳನ್ನು ರೈತ ಸ್ನೇಹಿಯಾಗಿ ನಿರ್ಮಿಸಿದ್ದಾರೆ.
ಸಿಹಿ ನೀರು ಹೊಂಡಕ್ಕೂ ಸೇರುತ್ತದೆ
ಚಂದ್ರವಳ್ಳಿಯ ಸ್ವಲ್ಪ ಭಾಗ ನೀರು ನಗರದ ಸಿಹಿ ನೀರು ಹೊಂಡಕ್ಕೂ ಸೇರುತ್ತದೆ. ಅಲ್ಲಿಂದ ಸಂತೆಹೊಂಡ ಸೇರುತ್ತದೆ. ಸಂತೇಹೊಂಡ ಭರ್ತಿಯಾದ ನಂತರ ಮಲ್ಲಾಪುರ ಕೆರೆ ಸೇರಲಿದೆ.
ಕಳೆದ 4-5 ವರ್ಷಗಳಿಂದ ಚಂದ್ರವಳ್ಳಿ ಕೆರೆ ತುಂಬಿರಲಿಲ್ಲ. ಆದರೂ ಕೆರೆಯಲ್ಲಿ ನೀರು ಬತ್ತಿ ಹೋಗಿರಲಿಲ್ಲ. ಧವಳಪ್ಪನ ಗುಡ್ಡ ಸೇರಿದಂತೆ ಅದರ ಸುತ್ತ ಮುತ್ತ, ಕೋಟೆ ಹಿಂಭಾಗದ ಸುತ್ತ ಮುತ್ತ ಬೀಳುವ ಮಳೆಯಿಂದಾಗಿ ಅಲ್ಪಸ್ವಲ್ಪ ನೀರು ಶೇಖರಣೆಯಾಗಿತ್ತು. ಐದಾರು ವರ್ಷಗಳಿಂದ ಚಿತ್ರದುರ್ಗ ಭೀಕರ ಬರಕ್ಕೆ ತುತ್ತಾಗಿದ್ದರೂ ಚಂದ್ರವಳ್ಳಿ ಕೆರೆಯಲ್ಲಿ ನೀರು ಇದ್ದು ಅಲ್ಲಿ ಮೀನು ಸಾಕಾಣಿಕೆಗೆ ನೆರವಾಗುತ್ತಿದೆ.
ಚಂದ್ರವಳ್ಳಿ ಕೆರೆ
ಪ್ರವಾಸಿ ತಾಣ- ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಚಂದ್ರವಳ್ಳಿ ಕೆರೆ ಬರಲಿದೆ. ಈ ಪ್ರದೇಶದ ಸುತ್ತ ಮುತ್ತ ಹೆಚ್ಚಿನ ಸಂಖ್ಯೆಲ್ಲಿ ಕಾಡು ಇರುವುದರಿಂದ ಅರಣ್ಯ ಇಲಾಖೆಗೂ ಸಂಬಂಧಿಸಿದೆ. ಇದಲ್ಲದೆ ಅತಿಮುಖ್ಯವಾಗಿ ಐತಿಹಾಸಿಕ ದೇಗುಲಗಳು ಈ ಪ್ರದೇಶದಲ್ಲಿ ನೆಲೆಗೊಂಡಿರುವುದರಿಂದ ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆಯು ಒಂದು ಭಾಗವನ್ನು ನಿರ್ವಹಣೆ ಮಾಡುತ್ತಿದೆ.
ಐತಿಹಾಸಿಕ ಚಂದ್ರವಳ್ಳಿಯು ಚಾರಣ ಪ್ರಿಯರ ನೆಚ್ಚಿನ ತಾಣವಾಗಿದೆ. ಕೆರೆಗೆ ಸಮೀಪದಲ್ಲಿ ಗುಹಾಲಯ ಹೊಂದಿರುವ ಅರಳೀಮಠ, ಪಾಂಡವರು ಪ್ರತಿಷ್ಠಾಪಿಸಿರುವ ಪಂಚಲಿಂಗೇಶ್ವರ ದೇಗುಲ, ಧವಳಪ್ಪನ ಗುಡ್ಡ, ಚಂದ್ರವಳ್ಳಿ ಕೆರೆ, ಹುಲಿಗೊಂದಿ ಭೈರೇಶ್ವರ ದೇಗುಲ, ಬಯಲು ಆಂಜನೇಯ, ಬರಲಗೊಂದಿ, ಬಸವಗೊಂದಿ, ಆಡು ಮಲ್ಲೇಶ್ವರ, ಚಿರತೆ ಕಲ್ಲು ಹೀಗೆ ಪ್ರವಾಸಿಗರ ತಾಣವಾಗಿದೆ. ವಿದೇಶಿಗರನ್ನೂ ತನ್ನತ್ತ ಆಕರ್ಷಿಸುತ್ತಿದೆ.
ಪರಂಪರೆ ತಾಣಗಳ ಪಟ್ಟಿಯಲ್ಲಿ ಚಂದ್ರವಳ್ಳಿ
ಚಂದ್ರವಳ್ಳಿಯಲ್ಲಿ ದೊರೆತಿರುವ ಕದಂಬರ ಕಾಲದ 3-4ನೇ ಶತಮಾನದ ಶಾಸನ ಹಾಗೂ ಮಯೂರ ಶಾಸನಗಳ ಪ್ರಕಾರ ಚಂದ್ರವಳ್ಳಿ ಹರಪ್ಪ-ಮೊಹೆಂಜೋದಾರ ನಾಗರಿಕತೆ ಸಂಸ್ಕೃತಿಯ ಸಮಾನವಾದುದು ಎಂಬುದಾಗಿ ಇತಿಹಾಸಜ್ಞರು ಅಭಿಪ್ರಾಯಪಡುತ್ತಾರೆ. ಹಾಗಾಗಿ, ಆಗಿನ ಮೈಸೂರು ಸರ್ಕಾರ ಚಂದ್ರವಳ್ಳಿಗೆ ಐತಿಹಾಸಿಕ ಪರಂಪರೆ ತಾಣಗಳ ಪಟ್ಟಿಯಲ್ಲಿ ಅಗ್ರಸ್ಥಾನ ನೀಡಿತ್ತು.
ಮಾರ್ಗ-ಬೆಂಗಳೂರಿನಿಂದ 200 ಕಿಲೋ ಮೀಟರ್ ದೂರದಲ್ಲಿ ಚಿತ್ರದುರ್ಗ ಇದೆ. ರಾಷ್ಟ್ರೀಯ ಹೆದ್ದಾರಿ ನಾಲ್ಕರ ಮೇಲೆ ಬರಲಿದೆ. ಗಾಯತ್ರಿ ಜಲಾಶಯ ಬೆಂಗಳೂರಿನಿಂದ 140 ಕಿಲೋ ಮೀಟರ್ ದೂರದಲ್ಲಿದ್ದು ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿರುವ ಜವನಗೊಂಡನಹಳ್ಳಿ(ಜೆಜಿಹಳ್ಳಿ)ಯಲ್ಲಿ ಇಳಿದುಕೊಂಡು ಗಾಯತ್ರಿ ಪುರಕ್ಕೆ ಹೋಗಬೇಕು. ಜೆಜಿಹಳ್ಳಿಯಿಂದ 6 ಕಿಲೋ ಮೀಟರ್ ದೂರದಲ್ಲಿ ಗಾಯತ್ರಿ ಡ್ಯಾಂ ಇದೆ.