ರಾಜಕೀಯ ನಿವೃತ್ತಿಯ ಬಗ್ಗೆ ಮಾತನಾಡಿದ ಆರೋಗ್ಯ ಸಚಿವ ಶ್ರೀರಾಮುಲು
ಚಿತ್ರದುರ್ಗ, ಅ 14: ಕೆಲವು ದಿನಗಳ ಹಿಂದೆ ಬರಪರಿಹಾರದ ವಿಚಾರದಲ್ಲಿ ಜನತೆಯ ಕ್ಷಮೆಯಾಚಿಸಿದ್ದ ಆರೋಗ್ಯ ಸಚಿವ ಬಿ.ಶ್ರೀರಾಮುಲು, ನಗರದಲ್ಲಿ, ರಾಜಕೀಯ ನಿವೃತ್ತಿಯ ಬಗ್ಗೆ ಮಾತನ್ನಾಡಿದ್ದಾರೆ.
Recommended Video
ವಾಲ್ಮೀಕಿ ಜಯಂತಿಯ ಅಂಗವಾಗಿ ಭಾನುವಾರ ( ಅ 13) ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಶ್ರೀರಾಮುಲು, " ರಾಜ್ಯದಲ್ಲಿ ಜನಸಂಖ್ಯೆಯ ಆಧಾರದ ಮೇಲೆ ವಾಲ್ಮೀಕಿ ಜನಾಂಗಕ್ಕೆ ಮೀಸಲಾತಿಯ ಅವಶ್ಯಕತೆಯಿದೆ" ಎಂದು ಹೇಳಿದ್ದಾರೆ.
ಬರಪರಿಹಾರ ವಿಳಂಬ: ಇದೇ ಮೊದಲ ಬಾರಿಗೆ ಕ್ಷಮೆಯಾಚಿಸಿದ ಸಚಿವ
"ಮುಖ್ಯಮಂತ್ರಿಗಳ ಬಗ್ಗೆ ಈ ಮೀಸಲಾತಿ ಬಗ್ಗೆ ಚರ್ಚಿಸಿದ್ದೇನೆ. ಶೇ. 7.5ರಷ್ಟು ಮೀಸಲಾತಿಯ ಅವಶ್ಯಕತೆ ವಾಲ್ಮೀಕಿ ಸಮುದಾಯಕ್ಕೆ ಇದೆ. ಮೀಸಲಾತಿ ಕೊಡಿಸುವಲ್ಲಿ ನಾನು ವಿಫಲನಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ" ಎಂದು ಶ್ರೀರಾಮುಲು ಹೇಳಿದ್ದಾರೆ.
"ಸಮುದಾಯದ ಖುಣ ತೀರಿಸುವ ಜವಾಬ್ದಾರಿ ನನ್ನ ಮೇಲಿದೆ. ಮುಖ್ಯಮಂತ್ರಿಗಳು ನಮ್ಮ ಮನವಿಗೆ ಸೂಕ್ತವಾಗಿ ಸ್ಪಂದಿಸಿದ್ದಾರೆ. ಇನ್ನು, ಎರಡ್ಮೂರು ತಿಂಗಳಲ್ಲಿ ಮೀಸಲಾತಿ ವಿಚಾರ ಒಂದು ಹಂತಕ್ಕೆ ಬರಲಿದೆ" ಎಂದು ಶ್ರೀರಾಮುಲು ಭರವಸೆ ನೀಡಿದ್ದಾರೆ.
"ನಮ್ಮ ಸಮುದಾಯವನ್ನು ಬಳಸಿಕೊಂಡು, ಕಸದಂತೆ ಎಸೆಯುವವರ ಸಂಖ್ಯೆ ಹೆಚ್ಚಾಗಿದೆ. ಇದನ್ನು ಸಮುದಾಯದವರು ಅರ್ಥ ಮಾಡಿಕೊಳ್ಳಬೇಕು. ಮೊಳಕಾಲ್ಮೂರು ನಲ್ಲಿ ನಾನು ಸ್ಪರ್ಧಿಸಿದಾಗಲೂ, ನನ್ನ ಬಗ್ಗೆ ಅಪಪ್ರಚಾರ ಮಾಡಲಾಯಿತು" ಎಂದು ಶ್ರೀರಾಮುಲು ಬೇಸರ ವ್ಯಕ್ತಪಡಿಸಿದರು.
"ಅಧಿಕಾರ ಕಳೆದುಕೊಂಡ ಕಾಂಗ್ರೆಸ್ಸಿನವರು ನಮ್ಮ ಸರಕಾರದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆ, ಜನರು ತಲೆಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ" ಎಂದು ಶ್ರೀರಾಮುಲು, ಕಾಂಗ್ರೆಸ್ ವಿರುದ್ದ ಕಿಡಿಕಾರಿದ್ದಾರೆ.