ಸಂಪುಟ; ಹಿರಿತನ, ಸಾಮಾಜಿಕ ನ್ಯಾಯಕ್ಕೆ ಬೆಲೆ ಇಲ್ಲ ಎಂದ ತಿಪ್ಪಾರೆಡ್ಡಿ
ಚಿತ್ರದುರ್ಗ, ಆಗಸ್ಟ್ 05; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವ ಸಂಪುಟದಲ್ಲಿ ಸ್ಥಾನ ಸಿಗುವ ನಿರೀಕ್ಷೆಯಲ್ಲಿದ್ದ ಚಿತ್ರದುರ್ಗ ಬಿಜೆಪಿ ಶಾಸಕ ಜಿ. ಹೆಚ್. ತಿಪ್ಪಾರೆಡ್ಡಿಗೆ ಸಚಿವ ಸ್ಥಾನ ಕೈ ತಪ್ಪಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗುರುವಾರ ಚಿತ್ರದುರ್ಗ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, "ಹಿರಿತನಕ್ಕೆ, ಸಾಮಾಜಿಕ ನ್ಯಾಯಕ್ಕೆ ಬೆಲೆ ಇಲ್ಲ. ಈ ಸಲ ನನಗೆ ಸಚಿವ ಸ್ಥಾನ ಸಿಗುವ ಬಹಳ ನಿರೀಕ್ಷೆ ಇತ್ತು. ನನಗೆ ಪದವಿ ಕೊಡಲು ಹಿರಿಯರು ಅನೇಕ ಬಾರಿ ಮನಸ್ಸು ಮಾಡಿದ್ದರು. ಆದರೆ ಮಂತ್ರಿ ಸ್ಥಾನ ಕೊಡಲಿಲ್ಲ" ಎಂದು ಬೇಸರ ವ್ಯಕ್ತಪಡಿಸಿದರು.
ಪೂರ್ಣಿಮಾ ಶ್ರೀನಿವಾಸ್ಗೆ ಸಚಿವ ಸ್ಥಾನವಿಲ್ಲ; ಹೆದ್ದಾರಿ ತಡೆದು ಆಕ್ರೋಶ
"ದೆಹಲಿಯಲ್ಲಿಯೂ ಕೂಡ ಮುಖಂಡರು ಹಿರಿಯ ಹಾಗೂ ಜನರ ಜೊತೆ ಚೆನ್ನಾಗಿದ್ದಾರೆ ಎಂದು ಹೇಳಿದ್ದರು. ಆದರೆ ರಾಜಕೀಯ ಬದಲಾವಣೆಯಲ್ಲಿ ಏನಾಯ್ತೋ ತಿಳಿಯಲಿಲ್ಲ. ಆದರೆ ಇಲ್ಲಿ ಹಿರಿತನಕ್ಕೆ, ಸಾಮಾಜಿಕ ನ್ಯಾಯಕ್ಕೆ ಬೆಲೆ ಇಲ್ಲ. ಮೋದಿ ಸಂಪುಟ ವಿಸ್ತರಣೆ ಮಾಡಿದಾಗ ಅತ್ಯಂತ ಸಣ್ಣ ಸಮುದಾಯವರಿಗೂ ಅವಕಾಶ ನೀಡುತ್ತಾರೆ. ಇದನ್ನು ವಿರೋಧ ಪಕ್ಷದವರು ಮೆಚ್ಚಿದ್ದರು" ಎಂದು ತಿಪ್ಪಾರೆಡ್ಡಿ ಹೇಳಿದರು.
ಸಂಪುಟ ವಿಸ್ತರಣೆ; ಸಚಿವ ಸ್ಥಾನ ಕೈತಪ್ಪಿದ ಶಾಸಕರ ಸ್ಟೇಟಸ್ಗಳು
"ರಾಜ್ಯದಲ್ಲಿಯೂ ಕೂಡ ಕಡಿಮೆ ಜನಾಂಗದವರೂ ಬಿಜೆಪಿ ಬೆಂಬಲಿಸುತ್ತಾರೆ. ಸಂಪುಟ ರಚನೆಯಲ್ಲಿ ಕೆಲವೇ ಜನರಿಗೆ ಅವಕಾಶ ಕೊಟ್ಟಿದ್ದಾರೆ. ಪಕ್ಷದ ಹಿತ ದೃಷ್ಟಿಯಿಂದ ಕೊಟ್ಟರೆ ತಪ್ಪಿಲ್ಲ, ಆದರೆ ಜನರು ನನ್ನನ್ನು ಆರು ಬಾರಿ ಗೆಲ್ಲಿಸಿದ್ದಾರೆ. ಸರ್ಕಾರದ ಪರವಾಗಿ ಬಿಲ್ ಪಾಸ್ ಮಾಡುವಾಗ ಕೈ ಎತ್ತುವ ಕೆಲಸ ಒಂದೇ ಬಾಕಿ ಉಳಿದಿರುವುದು" ಎಂದು ಪರೋಕ್ಷವಾಗಿ ಪಕ್ಷಕ್ಕೆ ಟಾಂಗ್ ನೀಡಿದರು.
ಬಸವರಾಜ ಬೊಮ್ಮಾಯಿ ಸಂಪುಟ; ಬೆಂಗಳೂರಿಗೆ 7 ಸಚಿವ ಸ್ಥಾನ
50 ವರ್ಷಗಳ ರಾಜಕೀಯ; "ನಮಗೆ ಅವಕಾಶ ಸಿಗಲಿಲ್ಲ. ಸಚಿವ ಸ್ಥಾನ ನೀಡಿದೆ ಇರುವುದು ಮನಸ್ಸಿಗೆ ನೋವಾಗಿದೆ. 50 ವರ್ಷಗಳ ಕಾಲ ರಾಜಕೀಯ ಮಾಡಿದ್ದೇನೆ. ಆದರೂ ನನ್ನನ್ನು ಪರಿಗಣಿಸಿಲ್ಲ" ಎಂದು ತಿಪ್ಪಾರೆಡ್ಡಿ ಬೇಸರ ವ್ಯಕ್ತಪಡಿಸಿದರು.
"ಕಾಂಗ್ರೆಸ್ನಲ್ಲಿ ಕೆಲಸ ಮಾಡಿದ್ದೇನೆ. ಅಲ್ಲಿಂದ ಇಲ್ಲಿಯವರೆಗೂ ಜನ ಸೇವೆ ಮಾಡೋದರಲ್ಲಿ, ತಂದೆಯವರು ಮಾಡಿದ್ದ ವ್ಯವಹಾರ ಬಿಟ್ಟು 52 ವರ್ಷ ರಾಜಕೀಯ ಮಾಡಿದ್ದೇನೆ. ಈ ಪೀಳಿಗೆಯಲ್ಲಿ ನಮ್ಮ ಕೆಲಸ ಮುಗಿಯಿತು ಎಂಬುದು ನನ್ನ ಭಾವನೆ" ಎಂದು ಹೇಳಿದ ತಿಪ್ಪಾರೆಡ್ಡಿ ನನಗೆ ವಯಸ್ಸಾಗಿದೆ ಎಂದು ಪರೋಕ್ಷವಾಗಿ ತಿಳಿಸಿದರು.
"ಇನ್ನು ಶಾಸಕನಾಗಿ ನನ್ನ ಕ್ಷೇತ್ರದ ಜನರು ಮತ ಕೊಟ್ಟಿದ್ದಾರೆ. ಅವರ ಸೇವೆ ಅವರ ಋಣ ತೀರಿಸುತ್ತೇನೆ. ನನ್ನ ಜಾತಿ ಯಾವುದು ಎಂದು ಗೊತ್ತಿರಲಿಲ್ಲ. ನಾನು ಎಂದಿಗೂ ಜಾತಿಯ ಮೇಲೆ ರಾಜಕಾರಣ ಮಾಡಿಲ್ಲ" ಎಂದು ತಿಪ್ಪಾರೆಡ್ಡಿ ಸ್ಪಷ್ಟಪಡಿಸಿದರು.
"50 ವರ್ಷಗಳ ಕಾಲ ರಾಜಕಾರಣದಲ್ಲಿ ನಾನು ಜಾತ್ಯಾತೀತ ಮನೆತನ ಎಂದು ಜನರು ಗುರುತಿಸಿದ್ದು, ನನಗೆ ಅದು ಸಂತೊಷ ತಂದಿದೆ. ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವ ಅಮಿತ ಶಾ, ಏನು ಹೇಳುತ್ತಾರೋ ಅದರಂತೆ ನಾನು ಕೇಳಿಕೊಂಡು ಹೋಗುತ್ತೇನೆ" ಎಂದರು.
"ನನಗೂ ಮಂತ್ರಿಯಾಗುವ ಬಹಳ ಆಸೆ ಇತ್ತು. ಕಾರಜೋಳ ಅವರಿಗೂ ನೀಡಿದ್ದಾರೆ. ಆದರೆ ಅವರು ನನ್ನಷ್ಟು ಭಾರೀ ಗೆದ್ದಿಲ್ಲ. ನಾನು ಆರು ಬಾರಿ ಗೆದ್ದಿದ್ದೇನೆ. ನನ್ನನ್ನು ಪಕ್ಷ ನೋಡಿ ಗೆಲ್ಲಿಸಿಲ್ಲ, ನನ್ನ ವ್ಯಕ್ತಿತ್ವ ನೋಡಿ ಗೆಲ್ಲಿಸಿದ್ದಾರೆ. ನನ್ನ ಸೇವಾ ಹಿರಿತನ ನೋಡಿ ಸಚಿವ ಸ್ಥಾನ ಕೊಡಬೇಕಾಗಿತ್ತು. ಆದರೆ ಕೊಟ್ಟಿಲ್ಲ. ಜನರ ಋಣ ತೀರಿಸುವ ಕೆಲಸ ಮಾಡುತ್ತೇನೆ" ಎಂದು ತಿಳಿಸಿದರು.
"ಜಾತಿ ಆಧಾರದ ಮೇಲೆ ಮಂತ್ರಿ ಮಂಡಲದಲ್ಲಿ ಅವಕಾಶ ನೀಡಿದ್ದಾರೆ ಎಂದು ತಿಳಿಯುತ್ತದೆ. ನನಗೆ ಜಾತಿ ಭಾವನೆ ಇಲ್ಲ. ನಾನು ಯಾರಿಗೂ ಜಾತಿ ಕೇಳುವುದಿಲ್ಲ. ಎಲ್ಲಾ ಸಮುದಾಯದವರು ನನಗೆ ಮತ ಹಾಕುತ್ತಾರೆ. ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ ಧಕ್ಕೆ ಆಗುತ್ತದೆ. ಆದರೆ ಪಕ್ಷದ ಮುಖಂಡರು ಅದನ್ನು ಸರಿ ಮಾಡುತ್ತಾರೆ. ಕೆಲವೇ ಜನಾಂಗದ ಸರ್ಕಾರವಾಗಿದೆ ಎಂಬ ಭಾವನೆ ಬಂದಿದೆ" ಎಂದರು.
Recommended Video