ಸರ್ಕಾರ ರಚನೆ ಆಗುವ ಮೊದಲೇ ಸಚಿವ ಸ್ಥಾನ ಕೇಳಿದ ಬಿಜೆಪಿ ಶಾಸಕ
ಚಿತ್ರದುರ್ಗ, ಜುಲೈ 21: ಬಿಜೆಪಿಯು ಸತತ ಒಂದು ವರ್ಷ ನಾಲ್ಕು ತಿಂಗಳಿನಿಂದಲೂ ಪ್ರಯತ್ನ ಮಾಡಿದ ಬಳಿಕ ಈಗ ಸರ್ಕಾರ ಪತನವಾಗುವ ಸ್ಪಷ್ಟ ಲಕ್ಷಣಗಳು ಗೋಚರವಾಗುತ್ತಿವೆ.
ಆದರೆ ಇನ್ನೂ ಮೈತ್ರಿ ಸರ್ಕಾರ ಪತನವಾಗುವ ಮೊದಲೇ ಬಿಜೆಪಿಯಲ್ಲಿ ಸಚಿವ ಸ್ಥಾನಕ್ಕಾಗಿ ಕಿತ್ತಾಟಗಳು ಆರಂಭವಾಗಿಬಿಟ್ಟಿವೆ.
ಕಾಂಗ್ರೆಸ್, ಜೆಡಿಎಸ್ ನಾಯಕರಿಗೆ ಈಶ್ವರಪ್ಪ ಮಾಡಿದ ವಿನಂತಿ ಏನು?
ಚಿತ್ರದುರ್ಗ ಬಿಜೆಪಿಯ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರು ತಮಗೆ ಸಚಿವ ಸ್ಥಾನ ಬೇಕೆಂದು ಈಗಲೇ ಒತ್ತಾಯ ಮಾಡಿದ್ದು, ಕೂಸು ಹುಟ್ಟುವ ಮುಂಚೆ ಕುಲಾವಿಯೊಂದಿಗೆ ತಯಾರಾಗಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ನಮ್ಮ ಪಕ್ಷ ಅಧಿಕಾರಕ್ಕೆ ಬರುತ್ತದೆ, ನಾನೂ ಕೂಡ ಸಚಿವ ಸ್ಥಾನ ಆಕಾಂಕ್ಷಿ ಎಂದು ಹೇಳಿದ್ದಾರೆ.
ಕಳೆದ 15 ವರ್ಷಗಳಿಂದ ಹೊರ ಜಿಲ್ಲೆಯವರೇ ನಮ್ಮ ಜಿಲ್ಲೆಯ ಮಂತ್ರಿಗಳಾಗಿದ್ದಾರೆ. ಅವರು ಅಭಿವೃದ್ಧಿ ಮಾಡುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ನನಗೆ ಸಚಿವ ಸ್ಥಾನ ನೀಡಿದ್ದೆ ಆದಲ್ಲಿ ಅದನ್ನ ಅಚ್ಚುಕಟ್ಟಾಗಿ ನಿಭಾಯಿಸುತ್ತೇನೆ ಅಂತಾ ತಿಪ್ಪಾರೆಡ್ಡಿ ಹೇಳಿದರು.
ಜಿಲ್ಲೆಯಲ್ಲಿ ನಾನು ಹೆಚ್ಚು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ರಾಜಕೀಯದಲ್ಲಿ ಅನುಭವ ಇರುವುದರಿಂದ ನನಗೆ ಸಚಿವ ಸ್ಥಾನ ಸಿಗುವ ಭರವಸೆ ಇದೆ ಅಂತಾ ತಿಪ್ಪಾರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.