ವಾಣಿ ವಿಲಾಸ ಸಾಗರ ಜಲಾಶಯದ ದೃಶ್ಯ ನೋಡಲು ನೆರೆದ ಜನಸಾಗರ
ಚಿತ್ರದುರ್ಗ, ಸೆಪ್ಟೆಂಬರ್ 04: ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ವಾಣಿ ವಿಲಾಸಪುರ ಗ್ರಾಮದ ಬಳಿ ಇರುವ ಮಾರಿಕಣಿವೆ ಅಣೆಕಟ್ಟು ಭರ್ತಿ ಆಗಿದೆ. 1933ರ ಬಳಿಕ ಕೋಡಿ ಬಿದ್ದಿದ್ದು, ಭಾನುವಾರ ರಜೆ ದಿನವಾಗಿದ್ದರಿಂದ ಡ್ಯಾಂ ನೋಡಲು ಜನಸಾಗರವೇ ಹರಿದು ಬಂದಿದೆ.
ಬೆಳಗ್ಗೆಯಿಂದಲೇ ಪ್ರವಾಸಿಗರು ಜಲಾಶಯದ ಕಡೆ ಮುಖ ಮಾಡಿದ್ದು, ಜಲಾಶಯ, ಮಾರಿ ಕಣಿವೆ ಮಾರಮ್ಮ ದೇವಸ್ಥಾನ, ಪಾರ್ಕ್, ಪ್ರವಾಸಿ ಮಂದಿರ, ಕೋಡಿ ಬಿದ್ದಿರುವ ಜಾಗ ಹಾಗೂ ಹಾರನ ಕಣಿವೆ ರಂಗನಾಥ ಸ್ವಾಮಿ ದೇವಸ್ಥಾನ ಸೇರಿದಂತೆ ಡ್ಯಾಂ ಸುತ್ತ ಮುತ್ತಲಿನ ಪ್ರದೇಶದಲ್ಲಿ ಪ್ರವಾಸಿಗರೇ ತುಂಬಿ ತುಳುಕುತ್ತಿದ್ದರು.
Vani Vilasa Sagara : 89 ವರ್ಷಗಳ ನಂತರ ಕೋಟೆ ನಾಡಿಗೆ ಚೈತನ್ಯ ತಂದ ವಾಣಿ ವಿಲಾಸ ಜಲಾಶಯ
ಪ್ರವಾಸಿಗರು ದೂರದ ಊರುಗಳಿಂದ ಜಲಾಶಯ ನೋಡಲು ಬಂದಿದ್ದರು. ಕುಟುಂಬದ ಸದಸ್ಯರು ಮತ್ತು ಮಕ್ಕಳು, ಸ್ನೇಹಿತರು, ಪ್ರೇಮಿಗಳು ಸೇರಿದಂತೆ ಮತ್ತಿತರರು ಜಲಾಶಯಕ್ಕೆ ಆಗಮಿಸಿದ್ದರು. ಅಂದಾಜು 10 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಜಲಾಶಯ ನೋಡಲು ಬಂದಿದ್ದರು. ಆಟೋ, ಕಾರು, ಬೈಕ್, ಬಸ್, ಇನ್ನಿತರ ವಾಹನಗಳಲ್ಲಿ ಬಂದಿದ್ದರು. ಚಿತ್ರದುರ್ಗ, ಬೆಂಗಳೂರು, ಶಿವಮೊಗ್ಗ, ದಾವಣಗೆರೆ, ಬಳ್ಳಾರಿ, ಚಿಕ್ಕಮಗಳೂರು, ತುಮಕೂರು ಸೇರಿದಂತೆ ಮತ್ತಿತರರ ಜಿಲ್ಲೆಗಳಿಂದ ಪ್ರವಾಸಿಗರು ಆಗಮಿಸಿದ್ದರು.
ಕುಣಿದು ಕುಪ್ಪಳಿಸಿದ ಜನತೆ
ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರಿಂದ ಜಲಾಶಯದ ಸರ್ಕಲ್ನಿಂದ, ಮಾರಿಕಣಿವೆ ಗ್ರಾಮ, ಕೋಡಿ ಬೀಳುವ ಜಾಗ ಹಾಗೂ ಹೊಸದುರ್ಗ ರಸ್ತೆ ಸೇರಿದಂತೆ ಸುಮಾರು 3 ಕಿಲೋ ಮೀಟರ್ ದೂರದವರೆಗೂ ಟ್ರಾಫಿಕ್ ಜಾಮ್ ಜಾಮ್ ಉಂಟಾಗಿತ್ತು. ಇದರಿಂದ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣ ಆಗಿತ್ತು. ಸಿಂಗಲ್ ರಸ್ತೆ ಹಾಗೂ ಚಿಕ್ಕ ರಸ್ತೆ ಇರುವುದರಿಂದ ಗಂಟೆ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿತ್ತು. ಜಲಾಶಯದ ನೀರು ಕೋಡಿ ಹೋಗುವ ಜಾಗದ ನೀರಿನಲ್ಲಿ ಪ್ರವಾಸಿಗರು ನೆನೆದು ಮಿಂದೆದ್ದರು. ಕೆಲವರು ಕೈಕಾಲು ಮುಖ ತೊಳೆದರೆ, ಇನ್ನು ಕೆಲವರು ಸ್ನಾನವನ್ನೇ ಮಾಡಿದರು. ಇನ್ನು ಕೆಲವರು ಸೆಲ್ಫೀ, ಫೋಟೋ, ವೀಡಿಯೋ ತೆಗೆಯುವುದರಲ್ಲಿ ನಿರತರಾಗಿದ್ದರು.
'ವೇದವತಿ' ಎಂದು ಹೆಸರು ಬರಲು ಕಾರಣ
ಚಿಕ್ಕಮಗಳೂರು ಜಿಲ್ಲೆಯ ಬಾಬು ಬುಡನ್ ಗಿರಿ ಕಂದಕಗಳಲ್ಲಿ ಜನಿಸುವ ವೇದಾ ಎಂಬ ನದಿ ಕಡೂರಿನ ಬಳಿ ಅವತಿ ನದಿಯನ್ನು ಸೇರುತ್ತದೆ. ಅವು ಮುಂದೆ 'ವೇದಾವತಿ' ನದಿಯಾಗಿ ಹರಿಯುತ್ತದೆ. ಚಿತ್ರದುರ್ಗದ ಹಿರಿಯೂರು ತಾಲೂಕಿನ ವಾಣಿ ವಿಲಾಸಪುರದ ಬಳಿ ಎರಡು ಗುಡ್ಡಗಳ ಮಧ್ಯೆ ನಿರ್ಮಿಸಿರುವ ಜಲಾಶಯವೇ ಮಾರಿಕಣಿವೆ ಡ್ಯಾಂ.
ವಾಣಿ ವಿಲಾಸ ಸಾಗರ ನಿರ್ಮಾಣ ಆಗಿದ್ದು ಹೇಗೆ?
ಇನ್ನೂ ವಾಣಿ ವಿಲಾಸ ಸಾಗರವನ್ನು ಆರ್ಕಿಟೆಕ್ಚರಲ್ ಮಾಸ್ಟರ್ ಪೀಸ್ ಎಂದು ಗುರುತಿಸಲಾಗಿದೆ. ಈ ಅಣೆಕಟ್ಟನ್ನು 1897ರಲ್ಲಿ ಮೈಸೂರು ಮಹಾ ರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ತಾಯಿ ಕೆಂಪರಾಜಮ್ಮಣಿ ಆದೇಶದ ಮೇರೆಗೆ 'ತಾರಾ ಚಾಂದ್ ದಲಾಲ್' ಎಂಬ ಇಂಜಿನಿಯರ್ ನೇತೃತ್ವದ ತಂಡವು ನಿರ್ಮಿಸಿತ್ತು. ಆಗಿನ ಮೈಸೂರು ದಿವಾನರಾಗಿದ್ದ ಶೇಷಾದ್ರಿ ಅಯ್ಯರ್ ಅವರ ಮುಂದಾಳತ್ವದಲ್ಲಿ ನಿರ್ಮಿಸಿ 1907ರಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿದ್ದರು. ಅಲ್ಲದೇ ಕೆಆರ್ಎಸ್ ಅಣೆಕಟ್ಟು ನಿರ್ಮಾಣಕ್ಕೆ ವಾಣಿ ವಿಲಾಸ ಸಾಗರದ ನೀಲಿನಕ್ಷೆಯೇ ಮೂಲ ಎಂದು ಹೇಳಲಾಗುತ್ತದೆ.
89 ವರ್ಷಗಳ ಬಳಿಕ ಬಹುತೇಕ ಭರ್ತಿಯಾದ ವಾಣಿ ವಿಲಾಸ ಸಾಗರ ಜಲಾಶಯ
ಜಲಾಶಯ ದೃಶ್ಯ ಸವಿಯಲು ಒಮ್ಮೆ ಭೇಟಿ ನೀಡಿ
ತುಂಬಿ ತುಳುಕುತ್ತಿರುವ ಜಲಾಶಯ ನೋಡಲು ಬಯಸುವ ಪ್ರವಾಸಿಗರು ಹಿರಿಯೂರು ನಗರದಿಂದ ಹೊಸದುರ್ಗ ರಸ್ತೆ ಮಾರ್ಗವಾಗಿ, 21 ಕಿಲೋ ಮೀಟರ್ ದೂರದ ಎಡಭಾಗಕ್ಕೆ ಬಂದರೆ ಜಲಾಶಯವನ್ನು ತಲುಪಬಹುದು. ಬೆಂಗಳೂರು, ತುಮಕೂರಿನಿಂದ ಹಿರಿಯೂರು ನಗರದ ಮೂಲಕ ಜಲಾಶವನ್ನು ಪ್ರವೇಶಿಸಬಹುದು. ಹುಬ್ಬಳ್ಳಿ, ದಾವಣಗೆರೆಯಿಂದ ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಬಲಭಾಗದ ವಾಣಿ ವಿಲಾಸಪುರ ಕ್ರಾಸ್ ಮೂಲಕ ಬಂದು ಡ್ಯಾಂ ವೀಕ್ಷಿಸಬಹುದಾಗಿದೆ. ಒಟ್ಟಾರೆಯಾಗಿ 89 ವರ್ಷಗಳ ಬಳಿಕ ವಾಣಿ ವಿಲಾದ ಸಾಗರ ಡ್ಯಾಂ ಕೋಡಿ ಬಿದ್ದಿದ್ದು, ಈ ಮೂಲಕ ಇತಿಹಾಸ ಸೃಷ್ಟಿಸಿದೆ. ಈವರೆಗೂ ಎರಡನೇ ಬಾರಿಗೆ ಕೋಡಿ ಬಿದ್ದಂತಾಗಿದೆ. ಇನ್ನು ಕೋಡಿ ಬಿಳುತ್ತಿದ್ದಂತೆ ಜಿಲ್ಲೆಯ ಜನತೆಯಲ್ಲಿ ಮುಖದಲ್ಲಿ ಎಲ್ಲಿಲ್ಲದ ಸಂತೋಷ ಮೂಡಿದಂತಾಗಿದೆ.