ಚಿತ್ರದುರ್ಗದಲ್ಲಿ ಆರ್ಭಟಿಸಿದ ಹುಬ್ಬೆ ಮಳೆ; ಹಳ್ಳಕೊಳ್ಳಗಳೆಲ್ಲಾ ಭರ್ತಿ
ಚಿತ್ರದುರ್ಗ, ಸೆಪ್ಟೆಂಬರ್ 10: ಕೋಟೆ ನಾಡು ಚಿತ್ರದುರ್ಗದಲ್ಲಿ ಹುಬ್ಬೆ ಮಳೆ ಆರ್ಭಟಕ್ಕೆ ಹಳ್ಳ ಕೊಳ್ಳಗಳು ಮೈದುಂಬಿ ಹರಿಯುತ್ತಿವೆ. ಮಳೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಹಳ್ಳದಲ್ಲಿ ಕೊಚ್ಚಿ ಹೋದ ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಚಿಗತನಹಳ್ಳಿ ಗ್ರಾಮದಲ್ಲಿ ನಡೆದಿದೆ.
ನಿನ್ನೆ ರಾತ್ರಿ ಸುರಿದ ಮಳೆಗೆ ಜಿಲ್ಲೆಯಲ್ಲಿ ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ. ರಭಸವಾಗಿ ಹರಿಯುತ್ತಿರುವ ಹಳ್ಳದಲ್ಲಿ ಚಾಲಕ ಟ್ರ್ಯಾಕ್ಟರ್ ಚಲಾಯಿಸಿದ್ದು, ಟ್ರ್ಯಾಕ್ಟರ್ ಕೊಚ್ಚಿ ಹೋಗಿದೆ. ಅದರಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಟ್ರ್ಯಾಕ್ಟರ್ ಹೊರ ತೆಗೆಯಲು ಗ್ರಾಮಸ್ಥರು ಮುಂದಾಗಿದ್ದಾರೆ.
ಹರಿಯುತ್ತಿರುವ ವೇದಾವತಿ ನದಿ
ಚಿಕ್ಕಮಗಳೂರು ಜಿಲ್ಲೆಯ ಸುತ್ತಮುತ್ತ ಗುಡುಗು, ಮಿಂಚು, ಸಿಡಿಲು ಸಹಿತ ಮಳೆರಾಯ ಅಬ್ಬರಿಸಿದ್ದರಿಂದ ವೇದಾವತಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ ವಿವಿ ಸಾಗರಕ್ಕೆ ಹೆಚ್ಚಿನ ನೀರು ಹರಿದು ಬರುವ ಸಾಧ್ಯತೆ ಇದೆ. ಈಗಾಗಲೇ ಹೊಸದುರ್ಗ ತಾಲ್ಲೂಕಿನ ಕೆಲ್ಲೋಡ್ ಚೆಕ್ ಡ್ಯಾಂ ತುಂಬಿ ಹರಿಯುತ್ತಿದ್ದು ಮುಂದೆ ಕಾರೇಹಳ್ಳಿ ಬ್ರಿಡ್ಜ್ ಕಡೆ ನೀರು ಹರಿಯುತ್ತಿದೆ. ಹೊಸದುರ್ಗ ತಾಲ್ಲೂಕಿನಲ್ಲಿ ಸಹ ಉತ್ತಮ ಮಳೆಯಾಗಿದ್ದು ಇಲ್ಲಿನ ಹಳ್ಳ ಕೊಳ್ಳ ಮೈದುಂಬಿ ಹರಿಯುತ್ತಿವೆ.
ಚಿತ್ರದುರ್ಗದಲ್ಲಿ ತಡರಾತ್ರಿ ಅಬ್ಬರಿಸಿದ ವರುಣ; ಕೋಡಿ ಬಿದ್ದ ಕೆರೆಗಳು
ಗೋಡೆ ಕುಸಿದು ಬಾಲಕಿ ಸಾವು
ನಿನ್ನೆ ರಾತ್ರಿ ಸುರಿದ ಮಳೆಗೆ ಪರುಶುರಾಂಪುರ ಹೋಬಳಿಯ ಜಾಜೂರು ಗ್ರಾಮದ ಶ್ರೀಜನ್ಯ (6) ಸ್ಥಳದಲ್ಲೇ ಸಾವನ್ನಪ್ಪಿದ್ದಳು. ಮನೆ ತುಂಬಾ ಹಳೆಯದಾಗಿದ್ದರಿಂದ ಮನೆ ಕುಸಿದು ಈ ಘಟನೆ ನಡೆದಿತ್ತು. ಬಾಲಕಿ ತಂದೆ, ಅಜ್ಜಿ, ಅಣ್ಣನಿಗೆ ಗಾಯಗಳಾಗಿದ್ದವು. ಇವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮಕ್ಕೆ ಭೇಟಿ ನೀಡಿದ ಆರೋಗ್ಯ ಸಚಿವ ಶ್ರೀರಾಮುಲು ಹಾಗೂ ಶಾಸಕ ಟಿ. ರಘುಮೂರ್ತಿ ಮೃತಪಟ್ಟ ಬಾಲಕಿ ಕುಟುಂಬಕ್ಕೆ ಜಿಲ್ಲಾಡಳಿತದಿಂದ 5 ಲಕ್ಷದ ಚೆಕ್ ಪರಿಹಾರ ನೀಡಿ ಸಾಂತ್ವನ ಹೇಳಿದರು.
ಜಿಲ್ಲೆಯಲ್ಲಿ ಸರಾಸರಿ 52 ಮಿ.ಮಿ. ಮಳೆ
ಜಿಲ್ಲೆಯ ಹಿರಿಯೂರಿನಲ್ಲಿ 21.02 ಮಿ.ಮೀ, ಹೊಳಲ್ಕೆರೆ 23.4 ಮಿ.ಮೀ, ಮೊಳಕಾಲ್ಮೂರು 10.6 ಮಿ.ಮೀ, ಚಳ್ಳಕೆರೆ 3.4 ಮಿ.ಮೀ ಮಳೆಯಾಗಿದೆ. ನಿನ್ನೆ ಜಿಲ್ಲೆಯಲ್ಲಿ ಸರಾಸರಿ 52 ಮಿ.ಮಿ. ಮಳೆಯಾಗಿದೆ. ಮಳೆಯಿಂದಾಗಿ ಜಿಲ್ಲೆಯಲ್ಲಿ ಒಟ್ಟು 34.75 ಲಕ್ಷ ರೂಪಾಯಿ ನಷ್ಟ ಉಂಟಾಗಿದೆ.
Recommended Video
7.40 ಲಕ್ಷ ರೂ ಕೃಷಿ ಬೆಳೆ ನಷ್ಟ
ಮಳೆಯಿಂದಾಗಿ ಕೃಷಿ ಬೆಳೆಗೆ 17.40 ಲಕ್ಷ ರೂ ನಷ್ಟವಾಗಿದೆ. ಮನೆಗಳ ಕುಸಿತದಿಂದ 12.40 ಲಕ್ಷ ರೂ ನಷ್ಟ ಉಂಟಾಗಿದೆ. ಜಿಲ್ಲೆಯ ಹಲವು ಕಡೆ ಈರುಳ್ಳಿ, ಮೆಕ್ಕೆಜೊಳ, ರಾಗಿ, ಶೇಂಗಾ ಮತ್ತಿತರ ಬೆಳೆಗಳು ಮಳೆಗೆ ಕೊಚ್ಚಿ ಹೋಗಿವೆ. ಹಲವಾರು ರೈತರ ಜಮೀನುಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.