ಅನುದಾನ ನಂಬಿ ಹಳೆ ಮನೆ ಕೆಡವಿದರು, ದನದ ಕೊಟ್ಟಿಗೆಯಲ್ಲೇ ಉಳಿದರು
ಚಿತ್ರದುರ್ಗ, ನವೆಂಬರ್ 14: ಬಡವರಿಗೆ ಉತ್ತಮ ಸೂರು ಕಲ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಪರಿಚಯಿಸಿದ್ದು ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತದ ಬಸವ ವಸತಿ ಯೋಜನೆ. ಆದರೆ ಈ ಯೋಜನೆ ನಿಜಕ್ಕೂ ಫಲಾನುಭವಿಗಳನ್ನು ತಲುಪಿದೆಯೇ? ಸ್ವಂತ ಸೂರಿನ ಕನಸು ಹೊತ್ತವರಿಗೆ ಇದರಿಂದ ಅನುಕೂಲವಾಗಿದೆಯೇ?
ದನದ ಕೊಟ್ಟಿಗೆಯಲ್ಲಿ ವಾಸ ಮಾಡುತ್ತಿರುವ ಈ ದಂಪತಿ ನೋಡಿದರೆ ಸತ್ಯ ಕಾಣುತ್ತದೆ. ಹೊಸ ಸೂರು ಕಟ್ಟಿಕೊಳ್ಳುವ ಇವರ ಆಸೆ ಆಸೆಯಾಗೇ ಉಳಿದುಕೊಂಡಿದೆ.
ಯೋಜನೆಗೆ ಆಯ್ಕೆಯಾಗಿದ್ದ ದಂಪತಿ
ಬಸವ ವಸತಿ ಯೋಜನೆಯಡಿಯಲ್ಲಿ 2016-2017ರಲ್ಲಿ ಆಯ್ಕೆಯಾದವರು ಈರಮ್ಮ, ಚಿತ್ತಪ್ಪ ದಂಪತಿ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕರಿಯಾಲ ಗ್ರಾಮ ಪಂಚಾಯ್ತಿಯ ಮೂಡಲಹಟ್ಟಿ ಗ್ರಾಮದ ಈ ದಂಪತಿಗೆ ಇಬ್ಬರು ಗಂಡು ಮಕ್ಕಳು. ಸ್ವಂತ ಮನೆ ಕಟ್ಟಿಕೊಳ್ಳುವ ಕನಸು ಕಂಡಿದ್ದ ಇವರಿಗೆ ಸರ್ಕಾರದ ನೆರವೂ ದೊರೆತಿತ್ತು. ಇದು ಇವರ ಮನೆಯ ಕನಸಿಗೆ ನೀರೆರೆದಿತ್ತು.
ಸಂತ್ರಸ್ತೆಗೆ ಬೆಳಿಗ್ಗೆ ಪರಿಹಾರದ ಚೆಕ್ ನೀಡಿ, ಸಂಜೆ ವಾಪಸ್ ಪಡೆದರು...!
ಹಳೆ ಮನೆ ಕೆಡವಿ ಅಡಿಪಾಯ ಹಾಕಿದರು
ಸರ್ಕಾರದಿಂದ ಆಶ್ರಯ ಮನೆ ಮಂಜೂರಾಗಿದ್ದೇ ತಡ, ಈರಮ್ಮ, ಚಿತ್ತಪ್ಪ ಖುಷಿ ಎಲ್ಲೆ ಮೀರಿತ್ತು. ಹಾಗಾಗೇ, ಶಿಥಿಲಗೊಂಡಿದ್ದ ಹಳೆ ಮನೆಯನ್ನು ಕೆಡವಿ ಕೂಡಿಟ್ಟಿದ್ದ ಒಂದಿಷ್ಟು ಸ್ವಂತ ಹಣದಲ್ಲಿ ಅಡಿಪಾಯ ಹಾಕಿದರು. ನಂತರ ಅನುದಾನಕ್ಕೆ ಕಾದರು. ಆದರೆ ಅವರ ಕಾಯುವಿಕೆ ಕೊನೆಯಾಗಲೇ ಇಲ್ಲ. ಹಲವು ತಿಂಗಳುಗಳಿಂದ ಅನುದಾನ ಎದುರು ನೋಡುತ್ತಾ ಕುಳಿತ ಇವರು ಅನುದಾನಕ್ಕೆ ಅಲೆದಾಡಲು ಆರಂಭಿಸಿದರು. ಆದರೆ ಪ್ರಯೋಜನವಾಗಲೇ ಇಲ್ಲ.
ದನದ ಕೊಟ್ಟಿಗೆಯಲ್ಲೇ ಜೀವನ
ಆರು ತಿಂಗಳ ಕಾಲ ಅಲೆದು ಸಾಕಾಗಿ ಈಗ ಸರ್ಕಾರದ ಹಣವೇ ಬೇಡ ಎನ್ನುವ ಸ್ಥಿತಿಗೆ ಬಂದಿದ್ದಾರೆ. ದನದ ಕೊಟ್ಟಿಗೆ ಜಾಗದಲ್ಲೇ ಜೋಪಡಿಯಂತೆ ಮಾಡಿಕೊಂಡು ಅಲ್ಲೇ ಜೀವನ ನಡೆಸುತ್ತಿದ್ದಾರೆ. ದನದ ಕೊಟ್ಟಿಗೆಯಲ್ಲಿ ಇರಲು ಕಷ್ಟವಾಗುತ್ತಿದ್ದು, ಮತ್ತೆ ಗುಡಿಸಲು ನಿರ್ಮಿಸಿಕೊಳ್ಳಲು ಮುಂದಾಗಿದ್ದೇನೆ ಎಂದು ಬೇಸರದಿಂದ ನುಡಿಯುತ್ತಾರೆ ಚಿತ್ತಪ್ಪ.
ಕೊಡಗಿನಲ್ಲಿ ಸಂತ್ರಸ್ತರಿಗೆ ನಿರ್ಮಿಸಿದ ಮನೆ ನೋಡಿದ್ರೆ ಬೆಚ್ಚಿ ಬೀಳ್ತೀರ...
ಇನ್ನೂ ಹಲವರದ್ದು ಇದೇ ಸ್ಥಿತಿ
ಮನೆ ನಿರ್ಮಾಣದ ಹಣವನ್ನು ಹಂತ ಹಂತವಾಗಿ ಹಣ ಬಿಡುಗಡೆ ಮಾಡಲಾಗುತ್ತದೆ. ಮನೆ ಅಡಿಪಾಯ ಮುಗಿದಿದ್ದು ಆ ಚಿತ್ರವನ್ನು ಜಿಪಿಎಸ್ ತಂತ್ರಜ್ಞಾನಕ್ಕೆ ಸೇರಿಸಲಾಗಿದೆ. ನಿರ್ಮಾಣ ಕಟ್ಟಡವನ್ನು ಹಂತಹಂತವಾಗಿ ಪರಿಶೀಲಿಸಿ ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡಲಾಗುತ್ತದೆ. ಆದರೆ ಇನ್ನೂ ಹಣ ಬಂದಿಲ್ಲ. ಇದೇ ಗ್ರಾಮದ ಯಶೋಧಮ್ಮ, ನೀಲಾವತಿ, ರೇಖಾ ಎಂಬ ಫಲಾನುಭವಿಗಳದ್ದೂ ಇದೇ ಪರಿಸ್ಥಿತಿಯಾಗಿದೆ. ಸಂಬಂಧಪಟ್ಟವರು ಇತ್ತ ಗಮನ ಹರಿಸಬೇಕು ಎಂಬುದು ಇವರೆಲ್ಲರ ಮನವಿಯಾಗಿದೆ.