ಚಿತ್ರದುರ್ಗದಲ್ಲಿ ಕ್ಷೇತ್ರಾವಾರು ಸಾವಿರ ಮನೆ ಮಂಜೂರಾತಿಗೆ ಕ್ರಮ; ಸಚಿವ ವಿ.ಸೋಮಣ್ಣ
ಚಿತ್ರದುರ್ಗ, ಜೂನ್ 26: ಅರ್ಹ ಬಡವರಿಗೆ ಸರ್ಕಾರದ ವಿವಿಧ ವಸತಿ ಯೋಜನೆಗಳ ಸೌಲಭ್ಯಗಳು ತಲುಪಬೇಕು. ಯಾವುದೇ ಕಾರಣಕ್ಕೂ ಅನರ್ಹರು ವಸತಿ ಯೋಜನೆಯ ಸೌಲಭ್ಯ ಪಡೆಯುವಂತಾಗಬಾರದು. ಅರ್ಹತೆ ಇದ್ದವರಿಗೆ ಮಾತ್ರ ವಸತಿ ಸೌಲಭ್ಯ ನೀಡಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮವಹಿಸಬೇಕು ಎಂದು ವಸತಿ ಸಚಿವ ವಿ.ಸೋಮಣ್ಣ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
Recommended Video
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲೆಯ ವಿವಿಧ ವಸತಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. "ವಿವಿಧ ಹಂತದ ವಸತಿ ಯೋಜನೆಗಳು ನನೆಗುದಿಗೆ ಬಿದ್ದಿದ್ದವು. ಆ ಯೋಜನೆಗಳನ್ನು ಕೈಗೆತ್ತಿಕೊಂಡು ಹಲವಾರು ಮಾರ್ಪಾಡುಗಳನ್ನು ಮಾಡಬೇಕಿದೆ. ವಸತಿ ಇಲಾಖೆಯ ಹಿರಿಯ ಅಧಿಕಾರಿಗಳು ವಸತಿ ಯೋಜನೆಯ ನ್ಯೂನತೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಹಾಗಾಗಿ ಅಧಿಕಾರಿಗಳು, ಜನಪ್ರತಿನಿಧಿಗಳು ಯಾವುದೇ ಮುಲಾಜಿಗೆ ಒಳಗಾಗದೇ ಕೆಲಸ ಮಾಡಬೇಕು ಎಂದು ಸೂಚಿಸಿದರು.
"2022ಕ್ಕೆ ಸರ್ವರಿಗೂ ಸೂರು" ಪರಿಕಲ್ಪನೆಯೊಂದಿಗೆ ಕೆಲಸ
ಚಿತ್ರದುರ್ಗ ಜಿಲ್ಲೆ ಹಿಂದುಳಿದ ಜಿಲ್ಲೆಯಾಗಿದ್ದು, ಇಲ್ಲಿನ ಜನರು ಬರಗಾಲದಿಂದಾಗಿ ತುಂಬಾ ನೋವು ಅನುಭವಿಸಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರದ ವ್ಯಾಪ್ತಿಯಲ್ಲಿ ಬರುವ ಇಒಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತುಂಬಾ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು. 2022ಕ್ಕೆ ಸರ್ವರಿಗೂ ಸೂರು ಎಂಬ ಪರಿಕಲ್ಪನೆ ಪ್ರಧಾನಿಗಳ ಆಶಯವಾಗಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ತಾಕೀತು ಮಾಡಿದರು.
ಬೆಂಗಳೂರು ಲಾಕ್ ಡೌನ್ ಮಾಡದಿರಲು ನಿರ್ಧಾರ: ಸಚಿವ ವಿ.ಸೋಮಣ್ಣ
ಕ್ಷೇತ್ರಾವಾರು ಸಾವಿರ ಮನೆ ಮಂಜೂರಾತಿಗೆ ಕ್ರಮ
ಚಿತ್ರದುರ್ಗ ಜಿಲ್ಲೆಯ ಆರು ವಿಧಾನ ಸಭಾ ಕ್ಷೇತ್ರಾವಾರು ಒಂದೊಂದು ಕ್ಷೇತ್ರಕ್ಕೂ ವಿವಿಧ ವಸತಿ ಯೋಜನೆಗಳಡಿ ಒಂದು ಸಾವಿರ ಮನೆ ಮಂಜೂರಾತಿಗೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು. ಜಿಲ್ಲೆಯ ಅಲೆಮಾರಿ, ಅರೆ ಅಲೆಮಾರಿ ಕುಟುಂಬಗಳಿಗೆ ಕ್ಷೇತ್ರಾವಾರು ತಲಾ 500 ಮನೆಗಳ ಪಟ್ಟಿ ಜೊತೆಗೆ ಇತರೆಯವರಿಗೆ 500 ಮನೆಗಳು ಸೇರಿ ಒಟ್ಟು ಸಾವಿರ ಮನೆಗಳನ್ನು ನೀಡಲಾಗುತ್ತದೆ, ಬಡವರಿಗೆ ಮನೆ ಕೊಡುವ ನೆಪದಲ್ಲಿ ರಾಜಕೀಯ ಮಾಡದೇ, ಜಾತಿ ತಾರತಾಮ್ಯ ಮಾಡದೇ ಅರ್ಹರಿಗೆ ಮನೆ ತಲುಪಿಸುವ ಕೆಲಸವಾಗಬೇಕು ಎಂದು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ವಿವಿಧ ಹಂತಗಳಲ್ಲಿ ಮನೆ ನಿರ್ಮಾಣ
ಜಿಲ್ಲೆಯ ಆರು ತಾಲ್ಲೂಕು ವ್ಯಾಪ್ತಿಯಲ್ಲಿ 23,014 ಮನೆಗಳು ವಿವಿಧ ಹಂತಗಳಲ್ಲಿ ನಿರ್ಮಾಣವಾಗುತ್ತಿದ್ದು, ಸಂಬಂಧಪಟ್ಟ ಪಿಡಿಒಗಳು, ಇಒಗಳು ಪರಿಶೀಲನೆ ನಡೆಸಿ ವರದಿ ಸಲ್ಲಿಸಿದರೆ ಕೂಡಲೇ ಹಣ ಬಿಡುಗಡೆಗೆ ಕ್ರಮವಹಿಸಲಾಗುವುದು ಎಂದು ಹೇಳಿದರು.
ವಸತಿ ಯೋಜನೆಗೆ ಸಂಬಂಧಿಸಿದಂತೆ ಜಿಲ್ಲೆಯ ಪಿಡಿಒಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು ಎಂದು ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಸೂಚನೆ ನೀಡಿದರು. ಪಿಡಿಒಗಳು ಸರಿಯಾಗಿ ಕೆಲಸ ಮಾಡದಿದ್ದರೆ ಎಷ್ಟು ಸಾವಿರ ಮನೆ ಕೊಟ್ಟರೂ ಅರ್ಹರಿಗೆ ತಲುಪಿಸಲು ಸಾಧ್ಯವಿಲ್ಲ. ಪಿಡಿಒಗಳು ಕ್ಷೇತ್ರಗಳಿಗೆ ಹೋಗಿ ಕೆಲಸ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಚಿವರಲ್ಲಿ ಮನವಿ ಮಾಡಿದ ಶಾಸಕಿ
ಈ ಕುರಿತು ಎಲ್ಲಾ ತಾಲ್ಲೂಕಿನ ಇಒಗಳು ಗಮನಹರಿಸಬೇಕು. ವಸತಿ ಯೋಜನೆಗಳ ಸೌಲಭ್ಯಗಳ ಕುರಿತು ಅಧಿಕಾರಿಗಳು ಹೆಚ್ಚು ಗಮನಕೊಡಬೇಕು. ಸಮರ್ಪಕವಾಗಿ ಕಾರ್ಯನಿರ್ವಹಿಸದ ಪಿಡಿಓಗಳ ವಿರುದ್ಧ ಇಒಗಳಿಗೆ ಅಮಾನತು ಮಾಡುವ ಅಧಿಕಾರವನ್ನು ನೀಡಬೇಕು ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಸಚಿವರಲ್ಲಿ ಮನವಿ ಮಾಡಿದರು.
ಸಭೆಯಲ್ಲಿ ಸಂಸದ ಎ.ನಾರಾಯಣಸ್ವಾಮಿ, ಶಾಸಕರಾದ ಪೂರ್ಣಿಮಾ ಕೆ.ಶ್ರೀನಿವಾಸ್, ಗೂಳಿಹಟ್ಟಿ ಡಿ.ಶೇಖರ್, ರಘುಮೂರ್ತಿ, ಎಂ.ಚಂದ್ರಪ್ಪ, ವಿಧಾನ ಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು, ಜಿಲ್ಲಾಧಿಕಾರಿ ವಿನೋತ್ ಪ್ರಿಯಾ, ರಾಜೀವ್ ವಸತಿ ನಿಗಮದ ಮಹದೇವ್ ಪಸಾದ್ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.