ಕೋಟೆನಾಡಿನ ಹೆಮ್ಮೆಯಿದು ಹೊಸಯಳನಾಡು ಕರ್ನಾಟಕ ಪಬ್ಲಿಕ್ ಶಾಲೆ
ಚಿತ್ರದುರ್ಗ, ಆಗಸ್ಟ್ 30: ಸರ್ಕಾರಿ ಶಾಲೆಗಳೆಂದರೆ ನಿರ್ಲಕ್ಷ್ಯ ತೋರುವವರೇ ಹೆಚ್ಚು. ಈ ನಿರ್ಲಕ್ಷ್ಯಕ್ಕೆ ಹಲವು ಕಾರಣಗಳೂ ಉಂಟು. ಆದರೆ ಈ ಸರ್ಕಾರಿ ಶಾಲೆ ಹಾಗಲ್ಲ. ಇದು ಯಾವುದಕ್ಕೂ ಕಡಿಮೆ ಇಲ್ಲ. ಶಿಕ್ಷಣ, ಸೌಲಭ್ಯ, ಶಿಸ್ತು ಎಲ್ಲದರಲ್ಲೂ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತೆ ಗುರುತಿಸಿಕೊಂಡಿದೆ.
ಮಲ್ಲಿಗೆ ಕೃಷಿ ಮಾಡಿ ಶಿಕ್ಷಕರಿಗೆ ಸಂಬಳ ನೀಡುವ ವಿದ್ಯಾರ್ಥಿಗಳು
ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನಿಂದ ಸುಮಾರು 10 ಕಿ.ಮೀ ದೂರದಲ್ಲಿರುವ ಹೊಸಯಳನಾಡು ಗ್ರಾಮದ ಸರ್ಕಾರಿ ಶಾಲೆ ಈಗ ಕರ್ನಾಟಕ ಪಬ್ಲಿಕ್ ಶಾಲೆಯಾಗಿ ಮಾರ್ಪಟ್ಟು ಎತ್ತರಕ್ಕೆ ಬೆಳೆದು ಅಂತರ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಳ್ಳುವತ್ತ ಮುನ್ನುಗ್ಗುತ್ತಿದೆ.
ಕಲಿಕೆ ಹೆಚ್ಚಿಸಲು ಸ್ಮಾರ್ಟ್ ಕ್ಲಾಸ್, ಪ್ರಯೋಗಾಲಯ
ಈ ಶಾಲೆಯಲ್ಲಿ ಎಲ್ ಕೆಜಿಯಿಂದ ಪಿಯುಸಿವರೆಗೂ ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಇದೇ ಶಾಲೆ ಆವರಣದಲ್ಲಿ ಉರ್ದು ಸರ್ಕಾರಿ ಶಾಲೆಯೂ ಇರುವುದು ವಿಶೇಷ. 11 ಎಕರೆ ಪ್ರದೇಶದಲ್ಲಿ ರೂಪುಗೊಂಡಿರುವ ಈ ಶಾಲೆಯಲ್ಲಿ 30ಕ್ಕೂ ಹೆಚ್ಚು ಕೊಠಡಿಗಳಿವೆ. ವಿಶಾಲ ಆಟದ ಮೈದಾನ, ಶಾಲೆಯ ಸುತ್ತಮುತ್ತಲಿನ ಪರಿಸರ, ಕುಡಿಯುವ ನೀರಿನ ಟ್ಯಾಂಕ್, 11 ಫೀಡ್ ಲೈಟ್ ವ್ಯವಸ್ಥೆ ಇದೆ. ನವೀನ ರೀತಿಯ ಕೊಠಡಿಗಳು, ಸುಸಜ್ಜಿತ ಗ್ರಂಥಾಲಯ, ವಾಹನ ಸೌಲಭ್ಯ, ಜಿಮ್ ಕೊಠಡಿ ಕೂಡ ಇದೆ.
ಈ ವೈಜ್ಞಾನಿಕ ಯುಗದಲ್ಲಿ ಮಕ್ಕಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಸಲುವಾಗಿ ಕಂಪ್ಯೂಟರ್ ಶಿಕ್ಷಣ ಹಾಗೂ ಅನುಭವಿ ಶಿಕ್ಷಕರಿಂದ ಉತ್ತಮ ಭೋಧನೆ ನೀಡಲಾಗುತ್ತಿದೆ. ಸೋಲಾರ್ ಆಧಾರಿತ ಸ್ಮಾರ್ಟ್ ಕ್ಲಾಸ್ ಗಳ ವ್ಯವಸ್ಥೆ ಇದ್ದು, ಬೋಧನೆಗೆ ತಕ್ಕಂತೆ ಪ್ರಯೋಗಾಲಯವೂ ಇದೆ. ಇಷ್ಟೇ ಅಲ್ಲ, ಮಕ್ಕಳಿಗೆ ಪ್ರತಿನಿತ್ಯ ಶುಚಿರುಚಿ ಆರೋಗ್ಯಕರ ಬಿಸಿಯೂಟವೂ ಇದೆ.
5 ವರ್ಷಗಳಿಂದ ಶೇಕಡಾ 85ರಷ್ಟು ಫಲಿತಾಂಶ
ಈ ಶಾಲೆಗೆ ಕಳೆದ ಸಾಲಿನಲ್ಲಿ "ಹಸಿರುಶಾಲೆ - ಪರಿಸರ ಮಿತ್ರ ಶಾಲೆ" ಪ್ರಶಸ್ತಿ ಕೂಡ ದೊರೆತಿದೆ. ಮಕ್ಕಳು ವಿವಿಧ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಾಲೂಕು, ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಭಾಗವಹಿಸಿ ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಕಳೆದ 5 ವರ್ಷಗಳಿಂದ 10ನೇ ತರಗತಿಯಲ್ಲಿ ಶೇಕಡಾ 85 ಹಾಗೂ ಪಿಯುಸಿಯಲ್ಲಿ ಶೇಕಡಾ 95 ಫಲಿತಾಂಶ ಪಡೆದುಕೊಂಡಿರುವುದು ಮತ್ತೂ ಒಂದು ವಿಶೇಷ.
1935ರಲ್ಲಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಸ್ಥಾಪನೆಯಾಗಿ, 1965ರಲ್ಲಿ ಫ್ರೌಢಶಾಲೆ, ತದನಂತರ 1984ರಲ್ಲಿ ಪದವಿ ಕಾಲೇಜು ಆರಂಭವಾಯಿತು. ಈ ಹಿಂದೆ ಗ್ರಾಮದ ನಾಗರಿಕತೆ ಮತ್ತು ಸಂಸ್ಕೃತಿ ನಿರ್ಮಾಣಕ್ಕೆ ಯಳನಾಡು ಗಾಂಧಿ ಎಂದೇ ಹೆಸರುವಾಸಿಯಾದ ದಿವಂಗತ ಸಿ. ತಿಮ್ಮಯ್ಯನವರು ಶ್ರಮಿಸಿದರು ಎಂದು ಸ್ಮರಿಸುತ್ತಾರೆ ಪ್ರಾಂಶುಪಾಲ ಚಂದ್ರಯ್ಯ.
ಚಾಮರಾಜನಗರದಲ್ಲಿ ವಿದ್ಯಾರ್ಥಿಗಳಿಲ್ಲದೆ ಮುಚ್ಚಿದ ಸರ್ಕಾರಿ ಶಾಲೆ
ಮುಚ್ಚುವ ಶಾಲೆಯನ್ನು ಮೆಚ್ಚುವಂತೆ ಮಾಡಿದ ನಾ.ತಿಪ್ಪೇಸ್ವಾಮಿ
ತಾನು ವಿದ್ಯೆ ಕಲಿತ ಶಾಲೆ ಮುಚ್ಚುವ ಸ್ಥಿತಿಯಲ್ಲಿದ್ದದನ್ನು ಕಂಡು ಅದನ್ನು ಎಲ್ಲರೂ ಮೆಚ್ಚುವ ಹಾಗೆ ಮಾಡಬೇಕೆಂದು ಖಾಸಗಿ ಶಾಲೆಗಳಿಗೆ ಸಡ್ಡು ಹೊಡೆಯುವಂತೆ ಮಾಡಿದರು ನಾ ತಿಪ್ಪೇಸ್ವಾಮಿ. ಸರ್ಕಾರವೂ ಒದಗಿಸಲಾರದ ಸೌಲಭ್ಯಗಳನ್ನು ಈ ಶಾಲೆಗೆ ನಾ.ತಿಪ್ಪೇಸ್ವಾಮಿ ಅವರ ಒದಗಿಸುತ್ತಿದ್ದಾರೆ. ಸುಮಾರು 300 ಜನ ಕೂರಬಹುದಾದ ಸಭಾಂಗಣವನ್ನು ತಮ್ಮ ತಂದೆ ತಾಯಿ ಹೆಸರಲ್ಲಿ ಕಟ್ಟಿಸಿದ್ದಾರೆ.
ಹೊಸಯಳನಾಡು ಗ್ರಾಮದ ನಾ. ತಿಪ್ಪೇಸ್ವಾಮಿ ಇದೇ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಕಲಿತು ಸರ್ಕಾರಿ ನೌಕರಿ ಪಡೆದವರು. ಈಗ ನಿವೃತ್ತಿ ಹೊಂದಿರುವ ಅವರು, ತನ್ನ ಗ್ರಾಮಕ್ಕೆ ಏನಾದರೂ ಕೊಡುಗೆ ನೀಡಬೇಕೆಂದು ಶ್ರಮಿಸುತ್ತಿದ್ದಾರೆ. ಶಾಲೆ, ಮಕ್ಕಳ ಆರ್ಥಿಕ ಸ್ಥಿತಿಗತಿ ಅರಿತಿರುವ ಅವರು, ಈ ಮಕ್ಕಳಿಗೆ ಉತ್ತಮ ಸೌಲಭ್ಯ ನೀಡಬೇಕೆಂದು ಪ್ರಯತ್ನಿಸುತ್ತಿದ್ದಾರೆ.
ಶಾಲೆಯ ಅಭಿವೃದ್ಧಿಗೆ ಗಣ್ಯರ ಹಾರೈಕೆ
ನಾ. ತಿಪ್ಪೇಸ್ವಾಮಿಯವರ ಈ ಕಾರ್ಯವನ್ನು ಗುರುತಿಸಿ ದಿ. ಕೇಂದ್ರ ಮಾಜಿ ಸಚಿವ ಅನಂತ್ ಕುಮಾರ್, ಆದಿಚುಂದನಗಿರಿಯ ನಿರ್ಮಲಾನಂದ ಶ್ರೀಗಳು, ಬೇಲಿ ಮಠದ ಸ್ವಾಮೀಜಿ, ಚಿತ್ರದುರ್ಗದ ಮಾದಾರ ಚನ್ನಯ್ಯ ಶ್ರೀಗಳು, ನಿವೃತ್ತ ನ್ಯಾಯಧೀಶ ಡಾ. ಶಿವರಾಜ್ ಪಾಟೀಲ್, ಶಿಕ್ಷಣ ತಜ್ಞ ಡಾ. ಗುರುರಾಜ ಕರ್ಜಗಿ, ಸೂಲಿಬೆಲೆ ಚಕ್ರವರ್ತಿ, ಬೆಂಗಳೂರು ನಗರ ಪೋಲಿಸ್ ಆಯುಕ್ತರಾದ ಭಾಸ್ಕರ್ ರಾವ್, ಪಿಯು ಬೋರ್ಡ್ ಆಯುಕ್ತರಾದ ಶಿಖಾ, ಸಚಿವ ಆರ್. ಅಶೋಕ್, ಸಚಿವ ಡಾ.ಅಶ್ವಥ್ ನಾರಾಯಣ ಮುಂತಾದವರು ಶಾಲೆಗೆ ಭೇಟಿ ನೀಡಿ ಶುಭ ಹಾರೈಸಿದ್ದಾರೆ.
ವಿಡಿಯೋ ವೈರಲ್; ಭಾರೀ ಮಳೆಯಲ್ಲೂ ಕದಲದೇ ರಾಷ್ಟ್ರಗೀತೆ ಹಾಡಿದ ಶಾಲಾ ಮಕ್ಕಳು