ಲಾಕ್ ಡೌನ್ ನಿಯಮ ಉಲ್ಲಂಘಿಸಿ ಹೊಸದುರ್ಗ ಮಾಜಿ ಶಾಸಕರ ಮಗನ ಮದುವೆ
ಚಿತ್ರದುರ್ಗ, ಏಪ್ರಿಲ್ 30: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಲಾಕ್ ಡೌನ್ ಜಾರಿಯಲ್ಲಿದೆ. ಆದರೆ ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿ, ತಾಲ್ಲೂಕು ಆಡಳಿತದ ಗಮನಕ್ಕೂ ತರದೆ ಮಾಜಿ ಶಾಸಕರು ತಮ್ಮ ಮಗನ ಮದುವೆ ಮಾಡಿರುವ ಆರೋಪ ಕೇಳಿ ಬಂದಿದೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಕಾಂಗ್ರೆಸ್ ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ ಪುತ್ರನ ವಿವಾಹವನ್ನು ಬೆಲಗೂರಿನಲ್ಲಿ ನಡೆಸಿದ್ದಾರೆ. ಅಲ್ಲಿ ಸಾಕಷ್ಟು ಜನ ಸೇರಿದ್ದು, ಇದರ ಸಂಬಂಧವಾಗಿ ತಾಲ್ಲೂಕು ಆಡಳಿತ, ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆ ಎಂಬ ಆರೋಪ ಕೇಳಿಬಂದಿದೆ.
ಆರೋಗ್ಯ ಸಚಿವರಿಂದಲೇ ಸಾಮಾಜಿಕ ಅಂತರ ಉಲ್ಲಂಘನೆ
ಮದುವೆಯಲ್ಲಿ ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ. ಮಾಸ್ಕ್ ಕೂಡ ಧರಿಸದೇ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ವಿವಾಹ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಚಳ್ಳಕೆರೆ ಹಾಲಿ ಶಾಸಕ ರಘುಮೂರ್ತಿ ಅವರೂ ಭಾಗಿಯಾಗಿದ್ದು, ಇವರೂ ಮಾಸ್ಕ್ ಧರಿಸದಿರುವುದು ಕಂಡುಬಂದಿದೆ.
ಜಿಲ್ಲೆಯಲ್ಲಿ ಸಾಮಾನ್ಯ ಜನಕ್ಕೊಂದು ಕಾನೂನು, ರಾಜಕಾರಣಿಗಳಿಗೆ ಒಂದು ಕಾನೂನು ಏಕೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಜನಪ್ರತಿನಿಧಿಗಳ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಗೊಂಡಿದೆ. ಈ ವಿಚಾರವಾಗಿ ಹೊಸದುರ್ಗ ತಹಶೀಲ್ದಾರ್ ಸಂಪರ್ಕಿಸಿದರೆ, "ನಮಗೆ ಮಾಹಿತಿ ಇಲ್ಲ, ಸ್ಥಳಕ್ಕೆ ಭೇಟಿ ಪರಿಶೀಲನೆ ಮಾಡುತ್ತೇವೆ" ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.