ವಾಣಿವಿಲಾಸ ಜಲಾಶಯದಿಂದ ವೇದಾವತಿ ನದಿಗೆ ನೀರು ಬಿಡುಗಡೆ: ನದಿ ಪಾತ್ರದ ಜನರಿಗೆ ಎಚ್ಚರಿಕೆ
ಚಿತ್ರದುರ್ಗ, ಏಪ್ರಿಲ್ 10: ವಾಣಿವಿಲಾಸ ಸಾಗರ ಜಲಾಶಯದಿಂದ ವೇದಾವತಿ ನದಿ ಪಾತ್ರದ ಮೂಲಕ ಹಿರಿಯೂರು, ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲ್ಲೂಕಿನ ನದಿ ಪಾತ್ರದ ಹಳ್ಳಿಗಳಿಗೆ ಏಪ್ರಿಲ್ 14ರಿಂದ ಕುಡಿಯುವ ನೀರು ಹರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಾದೇಶಿಕ ಆಯುಕ್ತರು ತಿಳಿಸಿದ್ದಾರೆ.
ವಿವಿ ಸಾಗರದಲ್ಲಿ ಪ್ರಸ್ತುತ 9.97 ಟಿಎಂಸಿ ನೀರಿನ ಸಂಗ್ರಹಣೆ ಇದ್ದು, ಮಾರ್ಚ್ 24 ರಂದು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ಹಾಗೂ ಬೇಸಿಗೆಯಲ್ಲಿ ಕುಡಿಯವ ನೀರಿನ ಸಲಹಾ ಸಮಿತಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆದ ಕುಡಿಯುವ ನೀರಿನ ಸಲಹಾ ಸಮಿತಿ ಸಭೆಯಲ್ಲಿ ನೀರು ಹರಿಸಲು ಈ ಅನುಮೋದನೆ ನೀಡಲಾಗಿದೆ.
ವಾಣಿವಿಲಾಸ ಜಲಾಶಯದ ನೀರಿಗೆ ರೈತ ಸಂಘದ ನಡುವೆ ಜಿದ್ದಾಜಿದ್ದಿ!
ವಾಣಿವಿಲಾಸ ಜಲಾಶಯದಿಂದ ವೇದಾವತಿ ನದಿಗೆ ನೀರು
ವಾಣಿ ವಿಲಾಸ ಸಾಗರ ಜಲಾಶಯದಿಂದ ವೇದಾವತಿ ನದಿ ಪಾತ್ರದಲ್ಲಿ ಚಳ್ಳಕೆರೆ ಮತ್ತು ಹಿರಿಯೂರು ಕ್ಷೇತ್ರದ ಕಾತ್ರಿಕೇನಹಳ್ಳಿ ಅಣೆಕಟ್ಟು ಮುಖಾಂತರ ವೇದಾವತಿ ನದಿ ಪಾತ್ರದಲ್ಲಿ ಬರುವ ಲಕ್ಕವ್ವನಹಳ್ಳಿ, ಕಸವನಹಳ್ಳಿ, ಹಳೆಯಳನಾಡು, ಕೂಡ್ಲಹಳ್ಳಿ, ತೊರೆಓಬೇನಹಳ್ಳಿ ಬ್ಯಾರೇಜ್ಗಳಲ್ಲಿಯ Scouring Sluice gates ಗಳನ್ನು ತೆಗೆದಿರಿಸಿ, ಬ್ಯಾರೇಜ್ಗಳ ಮುಖಾಂತರ ನೀರು ಸರಾಗವಾಗಿ ಹರಿದು ಮೊಳಕಾಲ್ಮೂರು ಕ್ಷೇತ್ರದ ಗಡಿ ತಲುಪುವಂತೆ ಮಾಡಲು ಸಣ್ಣ ನೀರಾವರಿ ಇಲಾಖೆಗೆ ತಿಳಿಸಲಾಗಿದೆ.
ಬ್ಯಾರೇಜ್ಗಳ ಮುಖಾಂತರ ನೀರನ್ನು ಹರಿಸುವುದು ಒಳಗೊಂಡಂತೆ ಚಳ್ಳಕೆರೆ ಕ್ಷೇತ್ರದ ನದಿ ಪಾತ್ರದಲ್ಲಿ ಕುಡಿಯುವ ನೀರಿಗಾಗಿ ನಿರ್ಮಿಸಿರುವ ಬೊಂಬೇರಹಳ್ಳಿ, ಚೌಳೂರು ಮತ್ತು ಪರಶುರಾಂಪುರ ಗ್ರಾಮಗಳು, ಮೊಳಕಾಲ್ಮೂರು ಕ್ಷೇತ್ರದಲ್ಲಿ ಪಡಗಲಬಂಡೆ, ಹರವಿಗೊಂಡವನಹಳ್ಳಿ, ಹತ್ತಿರ ನಿರ್ಮಿಸಿರುವ ಬ್ಯಾರೇಜ್ಗಳ ಮುಖಾಂತರ ನೀರು ಹರಿಸಲು ಆದೇಶ ನೀಡಲಾಗಿದೆ.
ಕೃಷಿ ಚಟುವಟಿಕೆಗಳಿಗೆ ನೀರು ಬಳಸದಂತೆ ಸೂಚನೆ
ಇದೇ ಏಪ್ರಿಲ್ 14 ರಿಂದ ವೇದಾವತಿ ನದಿ ಪಾತ್ರದ ಮೂಲಕ ನೀರು ಹರಿಸುವುದರಿಂದ ಹಿರಿಯೂರು, ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲ್ಲೂಕು ವ್ಯಾಪ್ತಿಯ ವೇದಾವತಿ ನದಿ ಪಾತ್ರದಲ್ಲಿ ಬರುವ ಗ್ರಾಮಗಳ ಜನರಿಗೆ ಎಚ್ಚರಿಕೆಯಿಂದ ಇರಲು ಹಾಗೂ ಜಾನುವಾರುಗಳ ಸುರಕ್ಷತೆ ಬಗ್ಗೆ ಮುಂಜಾಗ್ರತಾ ಕ್ರಮ ವಹಿಸಲು ಎಚ್ಚರಿಸಲಾಗಿದೆ. ವೇದಾವತಿ ನದಿ ಪಾತ್ರದಲ್ಲಿ ಮತ್ತು ಕಾಲುವೆ ಮುಖಾಂತರ ನೀರು ಹರಿಸುವ ಸಂದರ್ಭದಲ್ಲಿ ಕೃಷಿ ಚಟುವಟಿಕೆಗಳಿಗೆ ನೀರು ಬಳಸದಂತೆ ಅನಧಿಕೃತ ಪಂಪ್ಸೆಟ್ಗಳನ್ನು ಅಳವಡಿಸದೆ ಕಾನೂನು ಬಾಹಿರವಾಗಿ ನೀರನ್ನು ಬಳಸದಂತೆ ಹಾಗೂ ಸರ್ಕಾರದ ಆಸ್ತಿಗಳಿಗೆ ಹಾನಿಯಾಗದಂತೆ ಸುರಕ್ಷತೆ ಬಗ್ಗೆ ಮುಂಜಾಗ್ರತಾ ಕ್ರಮ ವಹಿಸಬೇಕು ಎಂದು ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ ಭದ್ರಾ ಮೇಲ್ದಂಡೆ ಯೋಜನಾ ವಿಭಾಗದ ಹಿರಿಯೂರು ಕ್ಯಾಂಪ್ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.
ಹಿರಿಯೂರು ತಾಲ್ಲೂಕಿನ ಗ್ರಾಮಗಳು
ವೇದಾವತಿ ನದಿ ಪಾತ್ರದಲ್ಲಿ ಹಿರಿಯೂರು ತಾಲ್ಲೂಕಿನಲ್ಲಿ ಬರುವ ಗ್ರಾಮಗಳು: ಕಾತ್ರಿಕೆನಹಳ್ಳಿ, ಲಕ್ಕವ್ವನಹಳ್ಳಿ, ಹಿರಿಯೂರು, ಪಟ್ರೇಹಳ್ಳಿ, ಗುಡ್ಲು, ಆಲೂರು, ಪಿಟ್ಲಾಲಿ, ಕಸವನಹಳ್ಳಿ, ರಂಗನಾಥಪುರ, ಉಪ್ಪಳಗೆರೆ, ದೊಡ್ಡಕಟ್ಟೆ, ಹೊಸಯಳನಾಡು, ನಾಗೇನಹಳ್ಳಿ, ಕೂಡ್ಲಹಳ್ಳಿ, ಮಸ್ಕಲ್, ಬ್ಯಾಡರಹಳ್ಳಿ, ದೇವರಕೊಟ್ಟ, ತೊರೆಓಬೇನಹಳ್ಳಿ, ಕಂಬತ್ತನಹಳ್ಳಿ.
Recommended Video
ಮೊಳಕಾಲ್ಮೂರು ತಾಲ್ಲೂಕಿನ ಗ್ರಾಮಗಳು
ವೇದಾವತಿ ನದಿ ಪಾತ್ರದಲ್ಲಿ ಚಳ್ಳಕೆರೆ, ಮೊಳಕಾಲ್ಮೂರಿನಲ್ಲಿ ಬರುವ ಗ್ರಾಮಗಳು: ಗೊಲ್ಲರಹಟ್ಟಿ, ಬಂದರಿನಹಟ್ಟಿ, ಕಲ್ಮರಹಳ್ಳಿ, ಹೊಸಹಳ್ಳಿ, ಸಾಲುಹುಣಸೆ, ಸೂಗೂರು, ಗೊರಲತ್ತು, ಬುಡುರುಕುಂಟೆ, ತೊರೆಬೀರನಹಳ್ಳಿ, ನಾರಯಾಣಪುರ, ಕೂಣಿಗೆರೆನಹಳ್ಳಿ, ಯಲಗಟ್ಟೆ, ನಲ್ಲೂರಹಳ್ಳಿ, ಬೊಂಬೇರಹಳ್ಳೀ, ವಡೇರಹಳ್ಳಿ, ಗೋಸಿಕೆರೆ, ಸುರ್ನಹಳ್ಳಿ, ಚೌಳೂರು, ಅಲ್ಲಾಪುರ, ಪರಶುರಾಂಪುರ, ಪಗಡಲಬಂಡೆ, ಜಾಜೂರು, ನಾಗಗೊಂಡನಹಳ್ಳಿ, ಮೋದುರು, ಗುಡಿಹಳ್ಳಿ, ತಪ್ಪಗೊಂಡವನಹಳ್ಳಿ, ಕಸವಿಗೊಂಡವನಹಳ್ಳಿ, ಮೈಲನಹಳ್ಳಿ, ರೇಣುಕಾಪುರ, ಬೂದಿಹಳ್ಳಿ, ಬಸಾಪುರ ಬೊಗನಹಳ್ಳಿ. ಈ ಹಳ್ಳಿಗಳಿಗೆ ನೀರು ಹರಿಸಲಾಗುವುದು.