ಪಿಪಿಇ ಕಿಟ್ ಧರಿಸಿ ಆಸ್ಪತ್ರೆಗೆ ಭೇಟಿ ನೀಡಿದ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್
ಚಿತ್ರದುರ್ಗ, ಜುಲೈ 23: ಚಿತ್ರದುರ್ಗ ಜಿಲ್ಲೆ ಹಿರಿಯೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಅವರು ಪಿಪಿಇ ಕಿಟ್ ಧರಿಸಿ ಧರ್ಮಪುರದ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹಿರಿಯೂರು ತಾಲ್ಲೂಕಿನ ಧರ್ಮಪುರದಲ್ಲಿ ಕೋವಿಡ್ ಆಸ್ಪತ್ರೆ ತೆರೆಯಾಲಾಗಿದ್ದು, ತಾಲ್ಲೂಕಿನ ಪ್ರಕರಣಗಳ ಚಿಕಿತ್ಸೆಯನ್ನು ಪರಿಶೀಲಿಸಲು ಆಸ್ಪತ್ರೆಗೆ ಬುಧವಾರ ಭೇಟಿ ನೀಡಿದ್ದಾರೆ. ಆಸ್ಪತ್ರೆಯ ಶೌಚಾಲಯ, ಬೆಡ್ ಗಳು, ಅಲ್ಲಿನ ಸ್ವಚ್ಛತೆ, ಸಮಯಕ್ಕೆ ಸರಿಯಾಗಿ ಚಿಕಿತ್ಸೆ, ಊಟ ಮತ್ತಿತರ ವ್ಯವಸ್ಥೆಯನ್ನು ಪರಿಶೀಲಿಸಿದರು.
ಚಿತ್ರದುರ್ಗ ಜಿಲ್ಲಾಧಿಕಾರಿ ಆಪ್ತ ಸಹಾಯಕನಿಗೆ ಕೊರೊನಾ ಪಾಸಿಟಿವ್
ಕೊರೊನಾ ಸೋಂಕಿತರಿರುವ ವಾರ್ಡ್ ಗಳಿಗೆ ತೆರಳಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಕೊರೊನಾ ಸೋಂಕಿಗೆ ಯಾರೂ ಭಯ ಪಡಬೇಡಿ ಧೈರ್ಯವಾಗಿ ಇರಿ ಎಂದು ಸೋಂಕಿತರಿಗೆ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಧೈರ್ಯ ತುಂಬಿದರು.
ನಂತರ ಸೋಂಕಿತರು ಇಲ್ಲಿನ ವ್ಯವಸ್ಥೆ ಚೆನ್ನಾಗಿದೆ, ಡಾಕ್ಟರ್ ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ, ಉತ್ತಮ ಚಿಕಿತ್ಸೆ ನೀಡುತ್ತಾರೆ ಎಂದು ಧರ್ಮಪುರ ಆಸ್ಪತ್ರೆಯ ಬಗ್ಗೆ ಸೋಂಕಿತರು ಮೆಚ್ಚುಗೆ ವ್ಯಕ್ತಪಡಿಸಿದರು. ಇದುವರೆಗೂ ಹಿರಿಯೂರಿನಲ್ಲಿ ಒಟ್ಟು 74 ಪ್ರಕರಣಗಳಿದ್ದು, ಇಬ್ಬರು ಮೃತಪಟ್ಟಿದ್ದು, 33 ಮಂದಿ ಗುಣಮುಖರಾಗಿದ್ದಾರೆ ಉಳಿದ 29 ಪ್ರಕರಣಗಳು ಸಕ್ರಿಯವಾಗಿವೆ.