ಕುರಿ/ಮೇಕೆ ಸಾವು ಪರಿಹಾರ ರದ್ದುಪಡಿಸದಂತೆ ಸಿಎಂಗೆ ಶಾಸಕಿ ಪತ್ರ
ಚಿತ್ರದುರ್ಗ, ಏಪ್ರಿಲ್ 19: ಕುರಿ/ಮೇಕೆಗಳು ಆಕಸ್ಮಿಕವಾಗಿ ಮರಣಕ್ಕೆ ತುತ್ತಾದರೆ ಸರ್ಕಾರದಿಂದ ನೀಡುತ್ತಿದ್ದ 5000 ರೂ. ಕುರಿ ಸಾವು ಪರಿಹಾರ ಧನವನ್ನು ರದುಪಡಿಸದಂತೆ ಹಿರಿಯೂರು ವಿಧಾನಸಭಾ ಕ್ಷೇತ್ರದ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಅವರು ಮುಖ್ಯಮಂತ್ರಿ ಮತ್ತು ಪಶು ಸಂಗೋಪನೆ ಸಚಿವರಿಗೆ ಪತ್ರ ಬರೆದಿದ್ದಾರೆ.
ಕುರಿ/ಮೇಕೆಗಳು ಆಕಸ್ಮಿಕ ಮರಣ ಹೊಂದಿದರೆ ಕುರಿಗಾರರಿಂದ ಅರ್ಜಿಗಳನ್ನು ಸ್ವೀಕರಿಸದೇ ಇರುವುದು ಸೂಕ್ತವೆಂದು, ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದರು.
ಕುರಿ/ಮೇಕೆ ಆಕಸ್ಮಿಕ ಸಾವಿಗೆ ನೀಡುತ್ತಿದ್ದ ಪರಿಹಾರ ವಾಪಸ್; ಭಾರೀ ಟೀಕೆ
ಇದರ ಬಗ್ಗೆ ಕುರಿಗಾರರು ಸೇರಿದಂತೆ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತಪಡಿಸಿದ್ದರು. ಶಾಸಕಿ ಕೆ.ಪೂರ್ಣಿಮಾ ಕೂಡ ಸರ್ಕಾರದ ಸುತ್ತೋಲೆಯನ್ನು ರದ್ದುಗೊಳಿಸಿ ಪರಿಹಾರ ಧನವನ್ನು ಕುರಿ ಮೇಕೆಗಳ ಮಾಲೀಕರಿಗೆ ಸರ್ಕಾರದ ವತಿಯಿಂದ ಪರಿಹಾರ ಧನವನ್ನು ನೀಡಲು ಮುಂದುವರಿಸುವಂತೆ ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ ಒತ್ತಾಯಿಸಿದ್ದಾರೆ.
ಕುರಿ/ಮೇಕೆಗಳ ಸಾಕಾಣಿಕೆಯು ಜೀವನೋಪಾಯ ಕಸುಬಾಗಿರುತ್ತದೆ. ರಾಜ್ಯದಲ್ಲಿ ಸುಮಾರು 1.72 ಕೋಟಿಗೂ ಹೆಚ್ಚು ಕುರಿ/ಮೇಕೆಗಳನ್ನು ಒಂದು ಕಸುಬಾಗಿ ಸಾಕಲಾಗುತ್ತಿದ್ದು, ಬಯಲು ಸೀಮೆಯ ಪ್ರದೇಶಗಳಾದ ಚಿತ್ರದುರ್ಗ, ತುಮಕೂರು, ದಾವಣಗೆರೆ, ಬಳ್ಳಾರಿ ಇನ್ನೀತರ ಭಾಗಗಳಲ್ಲಿ ಬುಡಕಟ್ಟು ಜನಾಂಗಗಳ ಭೂರಹಿತ ಮತ್ತು ಸಣ್ಣ ರೈತರ ಮುಖ್ಯ ಕಸುಬಾಗಿದೆ.
ಆಕಸ್ಮಿಕ ಮರಣಕ್ಕೆ ತುತ್ತಾದ ಕುರಿ, ಮೇಕೆಗಳಿಗೆ ಸರ್ಕಾರದಿಂದ ನೀಡುವ 5000 ರುಪಾಯಿ ಪರಿಹಾರ ನೀಡುವ ಯೋಜನೆಯನ್ನು ಮುಂದುವರಿಸಬೇಕು, ಜೊತೆಗೆ ಅಲೆಮಾರಿ ಕುರಿಗಾಹಿಗಳ ರಕ್ಷಣೆ ಮತ್ತು ಹಿತ ಕಾಪಾಡಲು ಸರ್ಕಾರದಲ್ಲಿ ನಿಮಯ ರೂಪಿಸಿ, ಕುರಿ, ಮೇಕೆಗಳಿಗೆ ಪರಿಹಾರ ಧನ ನೀಡುವ ಯೋಜನೆಗೆ ಅನುದಾನ ಮಂಜೂರು ಮಾಡಿ ಈ ಯೋಜನೆಯನ್ನು ಮುಂದುವರಿಸುವಂತೆ ಆದೇಶ ಹೊರಡಿಸಲು ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಸರ್ಕಾರಕ್ಕೆ ಆಗ್ರಹ ಮಾಡಿದ್ದಾರೆ.