ವಾರದಿಂದ ಕ್ಷೇತ್ರ ಪರ್ಯಟನೆ, ಮಕ್ಕಳಿಗೆ ಪಾಠ; ವಾರಾಂತ್ಯದಲ್ಲಿ ಸಿನಿಮಾ ವೀಕ್ಷಿಸಿದ ಹಿರಿಯೂರು ಶಾಸಕಿ
ಚಿತ್ರದುರ್ಗ ಏಪ್ರಿಲ್ 3: ರಾಜಕೀಯ ಒತ್ತಡ ಹಾಗೂ ಕಳೆದ ಒಂದು ವಾರದಿಂದ ಕ್ಷೇತ್ರ ಪರ್ಯಟನೆ ನಂತರ ವಾರಾಂತ್ಯ ಹಿನ್ನೆಲೆಯಲ್ಲಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಅವರು ವಿವಿ ಸಾಗರ ಹಿನ್ನೀರಿನ ಪ್ರದೇಶದಲ್ಲಿ ಜಲಕ್ರೀಡೆಯಲ್ಲಿ ಭಾಗವಹಿಸಿ, ನಂತರ "ಯುವರತ್ನ' ಸಿನಿಮಾ ವೀಕ್ಷಣೆ ಮಾಡಿದರು.
Recommended Video
ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸಿನಿಮಾವನ್ನು ಹಿರಿಯೂರು ನಗರದ ನಂಜುಂಡೇಶ್ವರ ಚಿತ್ರಮಂದಿರದಲ್ಲಿ ವೀಕ್ಷಿಸಿದರು. ವೀಕ್ ಎಂಡ್ ಇದ್ದರಿಂದ ಶಾಸಕರು ಸಿನಿಮಾ ನೋಡಿ ಫುಲ್ ಎಂಜಾಯ್ ಮಾಡಿದ್ದಾರೆ. ಗುರುವಾರ ಶಾಸಕರು ಕ್ಷೇತ್ರದಲ್ಲಿ ವಿವಿಧ ಹಳ್ಳಿಗಳಲ್ಲಿ ಕಾಮಗಾರಿ ಹಾಗೂ ಇತರೆ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದರು.
ಹಿರಿಯೂರು ನಗರದ ಬಸ್ ನಿಲ್ದಾಣ ಬಳಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ "ವಂಶವೃಕ್ಷದ' ಬಗ್ಗೆ ಬೋಧನೆ ಮಾಡಿ, ಒಂದಿಷ್ಟು ಶಾಲೆಯ ಅಭಿವೃದ್ಧಿ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದರು. ಶುಕ್ರವಾರ ಗುಡ್ ಫ್ರೈಡೆ ರಜಾ ದಿನವಾಗಿದ್ದರಿಂದ ತನ್ನ ಕಾರ್ಯಕರ್ತರೊಂದಿಗೆ ಹಿರಿಯೂರು ತಾಲ್ಲೂಕಿನ ವಾಣಿವಿಲಾಸಪುರ ಬಳಿ ಇರುವ ವಿವಿ ಸಾಗರ ಜಲಾಶಯದ ಹಿನ್ನೀರಿನ ಪ್ರದೇಶಕ್ಕೆ ತೆರಳಿ ಜಲಕ್ರೀಡೆಯಲ್ಲಿ ಭಾಗವಹಿಸಿ ಎಂಜಾಯ್ ಮಾಡಿ ಖುಷಿಪಟ್ಟಿದ್ದಾರೆ.
ಸಿನಿಮಾ ವೀಕ್ಷಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕಿ, ಯುವರತ್ನ ಚಿತ್ರ ಒಂದೊಳ್ಳೆ ಸಿನಿಮಾವಾಗಿದೆ. ಪುನೀತ್ ರಾಜಕುಮಾರ್ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ. ಎಲ್ಲರೂ ಚಿತ್ರವನ್ನು ನೋಡಬಹುದು. ರಾಜಕೀಯ ಒತ್ತಡ ಹಾಗೂ ಕಳೆದ ಒಂದು ವಾರದಿಂದ ಕ್ಷೇತ್ರ ಪರ್ಯಟನೆಯಲ್ಲಿ ತೊಡಗಿದ್ದೆ. ವೀಕ್ ಎಂಡ್ ಇದ್ದರಿಂದ ನಾನು ನಮ್ಮ ಕಾರ್ಯಕರ್ತರೊಂದಿಗೆ ತೆರಳಿ ಚಿತ್ರವನ್ನು ವೀಕ್ಷಿಸಿ ಖುಷಿಪಟ್ಟಿದ್ದೇನೆ ಎಂದರು.
ಶಾಸಕರು ಕ್ಷೇತ್ರದಲ್ಲಿ ಇಷ್ಟು ದಿನ ಆ್ಯಕ್ಟೀವ್ ಆಗಿಲ್ಲ ಎನ್ನುವ ಆರೋಪಗಳು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬಂದಿದ್ದವು. ವಿರೋಧಿಗಳು ಮಾಡುತ್ತಿರುವ ಆರೋಪ ಸುಳ್ಳು ಎಂದು ಸಾಬೀತು ಮಾಡುತ್ತಿದ್ದು, ಬರುವ ಮೂರ್ನಾಲ್ಕು ತಿಂಗಳಲ್ಲಿ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಯಲಿದೆ.
ಶಾಸಕಿ ಕೆ.ಪೂರ್ಣಿಮಾ ಅವರು ಕ್ಷೇತ್ರದಲ್ಲಿ ಆ್ಯಕ್ಟೀವ್ ಆಗಿದ್ದು, ಕ್ಷೇತ್ರದಲ್ಲಿ 19 ತಾ.ಪಂ ಮತ್ತು 7 ಜಿ.ಪಂ ಕ್ಷೇತ್ರಗಳು ಇರುವುದರಿಂದ ಕ್ಷೇತ್ರವನ್ನು ಹಿಡಿತದಲ್ಲಿಟ್ಟುಕೊಳ್ಳಲು ಮುಂದಾಗಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.