ಮಾತು ಉಳಿಸಿಕೊಳ್ಳದ ಯಡಿಯೂರಪ್ಪ, ಗೊಲ್ಲ ಸಮಾಜದ ಆಕ್ರೋಶ
ಚಿತ್ರದುರ್ಗ, ಆಗಸ್ಟ್ 20: ಕಳೆದ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ, ಹಿರಿಯೂರು ಕ್ಷೇತ್ರದಲ್ಲಿ ಬಿಜೆಪಿಯ ಪೂರ್ಣಿಮಾ ಗೆದ್ದರೆ ಸಚಿವ ಸ್ಥಾನ ನೀಡುವ ಭರವಸೆ ಕೊಟ್ಟಿದ್ದರು ಯಡಿಯೂರಪ್ಪ. ಆದರೆ ಈಗ ಆ ಮಾತನ್ನು ಅವರು ಉಳಿಸಿಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತವಾಗಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಕ್ಷೇತ್ರದಲ್ಲಿ ಕೆ.ಪೂರ್ಣಿಮಾ ಶ್ರೀನಿವಾಸ್ ತಳಮಟ್ಟದಿಂದ ಕಾರ್ಯಕರ್ತರನ್ನು ಸಂಘಟಿಸಿಕೊಂಡು, ಪಕ್ಷವನ್ನು ಕಟ್ಟಿ ಬೆಳೆಸುವ ಮೂಲಕ ಹಿರಿಯೂರಿನಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ಜೊತೆಗೆ ಕಳೆದ ಬಾರಿ ಹಿರಿಯೂರು ನಗರ ಸಭೆಯಲ್ಲಿ ಮೊದಲ ಬಾರಿಗೆ ಬಿಜೆಪಿ ನಗರಸಭಾ ಸದಸ್ಯರಿಲ್ಲದೆ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು.
Karnataka Cabinet Expansion Live Updates : ಯಡಿಯೂರಪ್ಪ ಸಂಪುಟ ಸೇರಿದ 17 ಶಾಸಕರು
ಆ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲಾ ಪ್ರಭಾರಿಯಾಗಿದ್ದ ಕೆ.ಪೂರ್ಣಿಮಾ ಯಡಿಯೂರಪ್ಪನವರನ್ನು ಭೇಟಿ ಮಾಡಿದ್ದರು. ಭೇಟಿಯ ಬಳಿಕ ಮಾತನಾಡಿದ್ದ ಬಿಎಸ್ವೈ, ಹಿರಿಯೂರಿನಲ್ಲಿ ಬಿಜೆಪಿ ಗೆದ್ದರೆ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದರು. ಅದರಂತೇ ಹಿರಿಯೂರಿನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತು.
ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದು, ಪೂರ್ಣಿಮಾಗೆ ಸಚಿವ ಸ್ಥಾನ ದೊರೆಯುವ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಈಗ ಬಿಎಸ್ ವೈ ಕೊಟ್ಟ ಮಾತು ತಪ್ಪಿದ್ದಾರೆ ಎಂದು ಪೂರ್ಣಿಮಾ ಅಭಿಮಾನಿಗಳು ನಿರಾಸೆಗೊಂಡಿದ್ದಾರೆ.
ಗೊಲ್ಲ ಸಮಾಜವನ್ನು ಬರೀ ಮತಕ್ಕೆ ಬಳಸಿಕೊಂಡಿದ್ದರಾ?: ರಾಜ್ಯದಲ್ಲಿ ಸುಮಾರು 40 ಲಕ್ಷ ಗೊಲ್ಲ ಸಮಾಜದ ಜನರಿದ್ದು, ರಾಜ್ಯದ ಏಕೈಕ ಗೊಲ್ಲ ಸಮುದಾಯದ ಶಾಸಕಿ ಕೆ. ಪೂರ್ಣಿಮಾಗೆ ಸಚಿವ ಸ್ಥಾನ ನೀಡುವಂತೆ ವರಿಷ್ಠರಿಗೆ ರಾಜ್ಯಾದ್ಯಂತ ಒತ್ತಾಯ ಮಾಡಲಾಗಿತ್ತು.
ಕೋಟೆನಾಡು ಚಿತ್ರದುರ್ಗಕ್ಕೆ ಒಲಿದ ಮಂತ್ರಿಗಿರಿ; ಶ್ರೀರಾಮುಲು ಪ್ರಮಾಣ ವಚನ ಸ್ವೀಕಾರ
ಚಿತ್ರದುರ್ಗ, ತುಮಕೂರು, ದಾವಣೆಗೆರೆ, ಬಳ್ಳಾರಿ, ಚಿಕ್ಕಬಳ್ಳಾಪುರ, ಬೆಂಗಳೂರು ಜಿಲ್ಲೆಗಳಲ್ಲಿ ಸಮುದಾಯದ ಅತಿ ಹೆಚ್ಚು ಜನರಿದ್ದು, ಈ ಸಮುದಾಯ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಸಹಕರಿಸಿತ್ತು.
ಜೊತೆಗೆ ಕಳೆದ ಲೋಕಸಭಾ ಚುನಾವಣೆಯಲ್ಲಿಯೂ ಗೊಲ್ಲ ಸಮುದಾಯ ಬಿಜೆಪಿ ಪರವಾಗಿ ಕೆಲಸ ಮಾಡಿತ್ತು. ಶೈಕ್ಷಣಿಕ, ರಾಜಕೀಯವಾಗಿ ಈ ಸಮುದಾಯ ಹಿಂದುಳಿದಿದ್ದು, ಸಮುದಾಯದ ಅಭಿವೃದ್ಧಿಗೆ ಸಚಿವ ಸ್ಥಾನ ನೀಡುವಂತೆ ಕೇಳಿಕೊಂಡಿದ್ದರು. ಆದರೆ ಗೊಲ್ಲ ಸಮಾಜವನ್ನು ಬರೀ ಮತಕ್ಕಾಗಿ ಬಳಸಿಕೊಂಡಿದ್ದಾರೆ ಎಂದು ಗೊಲ್ಲ ಸಮುದಾಯದ ಮುಖಂಡರು ಆರೋಪಿಸಿದ್ದಾರೆ.