ವಿವಿ ಸಾಗರದಲ್ಲಿ ನೀರಿದ್ದರೂ ರೈತರಿಗೆ ಯಾಕೆ ಬಿಡುತ್ತಿಲ್ಲ?
ಚಿತ್ರದುರ್ಗ, ಫೆಬ್ರವರಿ 25: ವಾಣಿ ವಿಲಾಸ ಜಲಾಶಯದಿಂದ ತೋಟಗಳಿಗೆ ನೀರು ಹರಿಸುವಂತೆ ರೈತರು ಹಿರಿಯೂರು ತಾಲೂಕು ಕಚೇರಿ ಎದುರು ಧರಣಿ ಕುಳಿತಿದ್ದಾರೆ.
ನಗರದ ರಂಜಿತಾ ಹೋಟೆಲ್ ನಿಂದ ಗಾಂಧಿ ಸರ್ಕಲ್ ಮೂಲಕ ಮೆರವಣಿಗೆ ಬಂದ ರೈತರು ತಾಲೂಕು ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿ ಬರುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ತಾಲೂಕಿನಲ್ಲಿ ಸಾವಿರಾರು ಎಕರೆಯಲ್ಲಿ ತೆಂಗು, ಅಡಿಕೆ, ಬಾಳೆ ತೋಟಗಳು ಒಣಗಿದ್ದು ಬೋರ್ ವೆಲ್ ಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಇರುವ ತೋಟಗಳನ್ನು ಉಳಿಸಿಕೊಳ್ಳಲು ನಾಲೆಗಳಿಗೆ ನೀರು ಹರಿಸುವಂತೆ ರೈತರು ಬೀದಿಗಿಳಿದಿದ್ದಾರೆ.
ಹಿರಿಯೂರಿನಲ್ಲಿನ ಬೀದರ್-ಶ್ರೀರಂಗಪಟ್ಟಣ ರಸ್ತೆ ದುರಸ್ತಿ ಯಾವಾಗ?
ಹಿಂದೆ ನೀರು ಬಿಡಿ ಎಂದರೆ ಜಲಾಶಯದಲ್ಲಿ ನೀರಿಲ್ಲ ಎನ್ನುತ್ತಿದ್ದರು. ಈಗ ದಶಕಗಳ ನಂತರ ವಿವಿ ಸಾಗರದಲ್ಲಿ 102 ಅಡಿ ನೀರು ತುಂಬಿದೆ. ಜಲಾಶಯದಲ್ಲಿ ನೀರಿದ್ದರೂ ಯಾಕೆ ನೀರು ಬಿಡುತ್ತಿಲ್ಲ ಎಂದು ರೈತರು ಪ್ರಶ್ನಿಸಿದ್ದಾರೆ.
"ಅಧಿಕಾರಿಗಳು ಸುಳ್ಳು ಹೇಳಿಕೊಂಡು ಬಂದಿದ್ದಾರೆ. ಫೆಬ್ರವರಿ 25ಕ್ಕೆ ಎಡ ಮತ್ತು ಬಲ ಎರಡೂ ನಾಲೆಗಳಿಗೆ ನೀರು ಹರಿಸುತ್ತೇವೆಂದು ರೈತರೊಂದಿಗೆ ಸಭೆ ನಡೆಸಿದ್ದರು. ಈಗ ನೋಡಿದರೆ ಸಬೂಬು ಹೇಳುತ್ತಿದ್ದಾರೆ" ಎಂದ ಪ್ರತಿಭಟನಾಕಾರರು, "ಇಷ್ಟು ಬಾರಿ ಮನವಿ ಸಲ್ಲಿಸಿದರೂ ಸ್ಪಂದಿಸದ, ಅಹವಾಲು ಆಲಿಸದ ಅಧಿಕಾರಿಗಳು ಇದ್ದರೆಷ್ಟು, ಬಿಟ್ಟರೆಷ್ಟು" ಎಂದು ಕಿಡಿಕಾರಿದರು.
ಡಿಸೆಂಬರ್ ತಿಂಗಳಲ್ಲಿ ಹರಿಸಬೇಕಾದ ನೀರು ಜನವರಿ, ಫೆಬ್ರವರಿ ಕಳೆದರೂ ಬಂದಿಲ್ಲ. ಸುಮ್ಮನೆ ಕುಳಿತುಕೊಳ್ಳುವ ಅಧಿಕಾರಿಗಳನ್ನು ಅಮಾನತುಗೊಳಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ರೈತರ ಬಗ್ಗೆ ಅಸಡ್ಡೆ ಧೋರಣೆ ಅನುಸರಿಸುತ್ತಿರುವ ಚಿತ್ರದುರ್ಗದ ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಬೇಕು ಎಂದು ರೈತ ಹೋರಾಟಗಾರ ಕಸವನಹಳ್ಳಿ ರಮೇಶ್ ಆಗ್ರಹಿಸಿದರು.
ಒಂದು ವೇಳೆ ಕಾನೂನು ಪ್ರಕಾರವಾಗಿ ನೀರು ಹರಿಸದಿದ್ದರೆ ನಾವೇ ಸ್ವಯಂಪ್ರೇರಿತರಾಗಿ ಕೆರೆಯಿಂದ ನೀರು ಹರಿಸಿಕೊಳ್ಳುತ್ತೇವೆ ಎಂದು ರಮೇಶ್ ತಿಳಿಸಿದರು.