ಹಿರಿಯೂರಿನ ತರಕಾರಿ ವ್ಯಾಪಾರಿ ಮಗಳು ಏರೋನಾಟಿಕಲ್ ಎಂಜಿನಿಯರಿಂಗ್ ನಲ್ಲಿ ರಾಜ್ಯಕ್ಕೇ ಪ್ರಥಮ
Recommended Video
ಚಿತ್ರದುರ್ಗ, ಫೆಬ್ರವರಿ 4: ಐದು ಜನರಿರುವ ಕುಟುಂಬ ಇವರದ್ದು. ಈ ಕುಟುಂಬಕ್ಕೆ ಆಸರೆಯಾಗಿರುವುದು ತರಕಾರಿ ವ್ಯಾಪಾರ. 40 ವರ್ಷಗಳಿಂದ ನಗರದ ಮಾರುಕಟ್ಟೆಯಲ್ಲಿ ತರಕಾರಿ ಮಾರುತ್ತಾ ಜೀವನ ಸಾಗಿಸುತ್ತಾ ಬಂದಿರುವ ಈ ದಂಪತಿ ಮುಖದಲ್ಲೀಗ ಸಂತಸ ಕಾಣುತ್ತಿದೆ. ಅದಕ್ಕೆ ಕಾರಣ ಇವರ ಮಗಳು ಲಲಿತಾ.
ಲಲಿತಾ ಅವರು ಯಲಹಂಕದ ಈಸ್ಟ್ ವೆಸ್ಟ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅಧ್ಯಯನ ಮಾಡಿ ಏರೋನಾಟಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ತಂದೆ ತಾಯಿಯಲ್ಲಿ ಹೆಮ್ಮೆ ಮೂಡಿಸಿದ್ದಾರೆ.
ತರಕಾರಿ ಮಾರಾಟಗಾರನ ಮಗಳು ಖಜಾನೆ ಅಧಿಕಾರಿಯಾದ ಸಾಹಸಗಾಥೆ
2020ರ ಫೆಬ್ರವರಿ 8ರಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುವ 19ನೇ ಘಟಿಕೋತ್ಸವದಲ್ಲಿ ಏರೋಸ್ಪೇಸ್ ಎಂಜಿನಿಯರಿಂಗ್ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿರುವ ಲಲಿತಾ ಆರ್ ಅವಳಿ ಚಿನ್ನದ ಪದಕ ಪಡೆಯಲಿದ್ದಾರೆ.
ಮೂವರು ಹೆಣ್ಣು ಮಕ್ಕಳಿಗೂ ಉತ್ತಮ ಶಿಕ್ಷಣ
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ಕೆ.ರಾಜೇಂದ್ರ ಮತ್ತು ಆರ್. ಚಿತ್ರಾ ದಂಪತಿಯ ಮಗಳು ಆರ್.ಲಲಿತಾ ಏರೋನಾಟಿಕ್ಸ್ ಎಂಜಿನಿಯರಿಂಗ್ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದವರು. ಈ ದಂಪತಿಗೆ ಮೂವರು ಹೆಣ್ಣು ಮಕ್ಕಳು. ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು ಎಂಬುದು ಈ ದಂಪತಿ ಬಯಕೆ. ಮೊದಲನೇ ಮಗಳು ಲಲಿತಾ ಏರೊನಾಟಿಕಲ್ ಎಂಜಿನಿಯರಿಂಗ್, ಎರಡನೇ ಮಗಳು ಭುವನ ಫ್ಯಾಷನ್ ಡಿಸೈನಿಂಗ್ ಓದುತ್ತಿದ್ದಾಳೆ. ಕೊನೆಯ ಮಗಳು ತುಳಸಿ ಹಿರಿಯೂರಿನಲ್ಲಿ ಸಿವಿಲ್ ಡಿಪ್ಲೊಮಾ ಓದುತ್ತಿದ್ದಾರೆ.
ಏರೊನಾಟಿಕಲ್ ಎಂಜಿನಿಯರಿಂಗ್ ನಲ್ಲಿ ಲಲಿತಾಗೆ ಮೊದಲ ಸ್ಥಾನ
ಲಲಿತಾ ಅವರು ಪ್ರಾಥಮಿಕ ಶಿಕ್ಷಣವನ್ನು ನಗರದ ವಾಗ್ದೇವಿ ಶಾಲೆಯಲ್ಲಿ ಮುಗಿಸಿ, ಚಿತ್ರದುರ್ಗದ ಎಸ್.ಆರ್.ಎಸ್ ಕಾಲೇಜಿನಲ್ಲಿ ಪಿಯುಸಿ ಓದಿದರು. ಬಳಿಕ ಬೆಂಗಳೂರಿನ ಯಲಹಂಕದ ಈಸ್ಟ್ ವೆಸ್ಟ್ ಏರೋನಾಟಿಕಲ್ ಎಂಜನಿಯರಿಂಗ್ ವಿಭಾಗದಲ್ಲಿ ಪ್ರವೇಶ ಪಡೆದು, ಸತತ ಮೂರು ವರ್ಷಗಳ ಕಾಲ ಪ್ರಥಮ ಸ್ಥಾನ ಪಡೆದರು. ಇದಕ್ಕೆ ಪ್ರತಿಫಲವಾಗಿ ಕೊನೆಯ ವರ್ಷ ಉಚಿತ ಹಾಸ್ಟೆಲ್ ವ್ಯವಸ್ಥೆ ಲಭಿಸಿತು. ಈಗ ವಿಟಿಯುಗೆ ಮೊದಲ ಸ್ಥಾನ ಗಳಿಸಿದ್ದಾರೆ.
ವಾಣಿಜ್ಯ ತೆರಿಗೆ ಆಯುಕ್ತನಾಗಿ ಆಯ್ಕೆಯಾಗಿ ತನ್ನ ತಾಯಿ ಋಣ ತೀರಿಸಿದ ಮಗ
ತಮ್ಮ ಕನಸನ್ನು ಮಕ್ಕಳ ಮೂಲಕ ನನಸಾಗಿಸುತ್ತಿರುವ ಪೋಷಕರು
"40 ವರ್ಷಗಳಿಂದ ತರಕಾರಿ ಮಾರಾಟ ಮಾಡಿಕೊಂಡು ಬಂದಿದ್ದೇವೆ. ಜೀವನಕ್ಕಾಗಿ ತರಕಾರಿ ಮಾರಾಟ ಮಾಡುತ್ತೇವೆ. ಕಷ್ಟಪಟ್ಟು ದುಡಿಯುತ್ತಿದ್ದೇವೆ. ನಮಗೆ ಓದಲು ಸಾಧ್ಯವಾಗಲಿಲ್ಲ. ಓದಿದ್ದು ಒಂದನೇ ತರಗತಿ ಅಷ್ಟೆ. ಬಡತನ ಓದಲು ಬಿಡಲಿಲ್ಲ. ಆದ್ದರಿಮದ ನಮಗೆ ಎಷ್ಟೇ ಕಷ್ಟ ಬಂದರೂ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಬೇಕೆಂದು ತೀರ್ಮಾನಿಸಿದ್ದೆವು. ನಮ್ಮ ಆಸೆ ಪೂರೈಸುತ್ತಿದ್ದಾರೆ ನಮ್ಮ ಮಕ್ಕಳು. ನಮ್ಮ ಕಷ್ಟಕ್ಕೆ ಈಗ ಫಲ ಸಿಕ್ಕಿದೆ" ಎಂದು ಸಂತಸ ವ್ಯಕ್ತಪಡಿಸುತ್ತಾರೆ ಪೋಷಕರು.
ಅಪ್ಪ ಅಮ್ಮನಿಗೆ ಇದು ಸಣ್ಣ ಉಡುಗೊರೆ ಎಂದ ಲಲಿತಾ
ವಿದ್ಯಾರ್ಥಿನಿ ಲಲಿತಾ ಮಾತನಾಡಿ, "ತಂದೆ ತಾಯಿಯ ಪ್ರೋತ್ಸಾಹದಿಂದ ನಾನು ಪ್ರಥಮ ಸ್ಥಾನ ಪಡೆಯಲು ಸಾಧ್ಯವಾಗಿದೆ. ಕಷ್ಟಪಟ್ಟು ಅಪ್ಪ ಅಮ್ಮ ನಮ್ಮನ್ನು ಓದಿಸುತ್ತಿದ್ದಾರೆ. ಹೀಗಾಗಿ ಪ್ರತಿನಿತ್ಯ ನಾನೂ ಕಷ್ಟಪಟ್ಟು ಓದುತ್ತಿದ್ದೆ. ಇದೀಗ ಪ್ರಥಮ ಸ್ಥಾನ ಬಂದಿರುವುದು ಖುಷಿ ನೀಡಿದೆ. ಅವರಿಗೆ ಇದೊಂದು ಸಣ್ಣ ಉಡುಗೊರೆ. ಸಾಧಿಸುವುದು ಇನ್ನೂ ತುಂಬಾ ಇದೆ" ಎನ್ನುತ್ತಾರೆ. "ಈಗಾಗಲೇ ಗೇಟ್ ಎರಡು ಪರೀಕ್ಷೆ ಮುಗಿದಿದ್ದು, ಎಂಎಸ್ ಮಾಡಬೇಕೆಂಬ ಆಸೆಯಿದೆ' ಎಂದೂ ಹೇಳಿಕೊಂಡಿದ್ದಾರೆ.