ಹೆಸರಿಗೆ ಕನ್ನಡಕ ರಿಪೇರಿ ಕೆಲಸ, ಆದ್ರೆ ಮಾಡುತ್ತಿದ್ದುದೇ ಬೇರೆ
ಚಿತ್ರದುರ್ಗ, ಆಗಸ್ಟ್ 16: ಮೇಲ್ನೋಟಕ್ಕೆ ಕನ್ನಡಕ ರಿಪೇರಿ ಮಾಡಿಕೊಂಡು, ಒಳಗೊಳಗೇ ಕಳ್ಳತನ ನಡೆಸುತ್ತಿದ್ದ ಗುಂಪನ್ನು ಹಿರಿಯೂರು ಪೊಲೀಸರು ಬಂಧಿಸಿದ್ದಾರೆ. ಚಿತ್ರದುರ್ಗದ ಹಿರಿಯೂರು ಪೊಲೀಸರು ಈ ಕಳ್ಳರನ್ನು ಹಿಡಿಯಲು ನಡೆಸಿದ್ದ ಭರ್ಜರಿ ಕಾರ್ಯಾಚರಣೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜನಸಂದಣಿ ಪ್ರದೇಶವೇ ಇವರ ಟಾರ್ಗೆಟ್; ಗೊತ್ತೇ ಆಗದೇ ಕತ್ತಿಗೆ ಕೈ ಹಾಕುತ್ತಾರೆ ಖದೀಮರು
ಅಷ್ಟಕ್ಕೂ ಇವರೆಲ್ಲರೂ ಇರಾನಿ ಗ್ಯಾಂಗ್ ಕಳ್ಳರು. ಹಿರಿಯೂರಿನಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಇವರು ಭಾಗಿಯಾಗಿದ್ದರು. ಕಳೆದ ಮೇ. 25 ರಂದು ಹಿರಿಯೂರಿನ ಸುಜಾತ ಎನ್ನುವ ಮಹಿಳೆ ಶ್ರೀ ತೇರುಮಲ್ಲೆಶ್ವರ ದೇವಸ್ಥಾನದಲ್ಲಿ ಪೂಜೆ ಮುಗಿಸಿಕೊಂಡು ಮನೆಗೆ ಹೋಗುವಾಗ ದಾರಿಯಲ್ಲಿ ಬಂದ 3 ಜನ ಅಪರಿಚಿತರು, ತಾವು ಪೊಲೀಸರು, ನಿನ್ನೆ ಇಲ್ಲಿ ಒಂದು ಅಜ್ಜಿಯ ಕೊಲೆಯಾಗಿದೆ. ನಿಮ್ಮ ಕೊರಳಲ್ಲಿರುವ ಬಂಗಾರದ ಒಡವೆಗಳನ್ನು ತೆಗೆದು ಒಳಗಿಟ್ಟುಕೊಳ್ಳಿ ಎಂದು ಹೇಳಿ ಅವರ ಕೊರಳಲ್ಲಿದ್ದ 5 ತೊಲದ ಮಾಂಗಲ್ಯ ಸರ, 3 ತೊಲದ ಬಂಗಾರದ ಬಳೆಗಳನ್ನು ಬಿಚ್ಚಿಸಿ, ಅವುಗಳನ್ನು ಪೇಪರ್ ನಲ್ಲಿಟ್ಟು ಕೊಟ್ಟಿದ್ದರು. ಸುಜಾತ ಮನೆಗೆ ಹೋಗಿ ಪೇಪರನ್ನು ಬಿಚ್ಚಿ ನೋಡಿದಾಗ ಅದರಲ್ಲಿ ಕಲ್ಲಿನ ಚೂರುಗಳು ಕಂಡಿದ್ದವು.
ತನಗೆ ಮೋಸ ಮಾಡಿ ಆಭರಣ ದೋಚಿದವರನ್ನು ಪತ್ತೆ ಮಾಡಿ ಎಂದು ಸುಜಾತ ಅವರು ದೂರು ನೀಡಿದ್ದು, ಹಿರಿಯೂರು ಪೊಲೀಸರು ಪ್ರಕರಣ ದಾಖಲಿಸಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸರು, ಈ ಕಳ್ಳರನ್ನು ಕೊನೆಗೂ ಆಂಧ್ರ ಪ್ರದೇಶದಲ್ಲಿ ಬಂಧಿಸಿದ್ದರು. ಕಳ್ಳರನ್ನು ಪೊಲೀಸರು ಹಿಡಿದಿರುವ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕರು ಪೊಲೀಸರ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮೊದಲು ಅಬ್ಬಾಸ್, ಮಹಮದ್ ಅಲಿ, ಚಿಂಚು ಭಾಯ್ ಎಂಬುವರನ್ನು ತಮಿಳುನಾಡಿನಲ್ಲಿ ಹಿಡಿಯಲಾಗಿದ್ದು, ಅವರ ಮಾಹಿತಿ ಮೇರೆಗೆ ಸೈಯದ್, ಸಜ್ಜದ್, ಶಿಯರಾಣಿ, ಶೇಕ್ ಮುಲ್ಲಾ ನೂರ್ ಭಾಷಾ ಅವರನ್ನು ಆಂಧ್ರದಲ್ಲಿ ಬಂಧಿಸಲಾಗಿದೆ. ಇವರೆಲ್ಲರೂ ಕನ್ನಡಕ ರಿಪೇರಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.