ವಿಶ್ವಕರ್ಮ ಸಂಪ್ರದಾಯದಂತೆ ಚಿಗುಟು ಮಲ್ಲೇಶ್ವರ ಮಠ ಸ್ವಾಮೀಜಿ ಅಂತ್ಯಕ್ರಿಯೆ
ಚಿತ್ರದುರ್ಗ, ಜೂ17: ಹಿರಿಯೂರು ನಗರದ ಚಿಗುಟು ಮಲ್ಲೇಶ್ವರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀಜ್ಞಾನ ಭಾಸ್ಕರ ಸ್ವಾಮೀಜಿ (75) ಅವರ ನಿಧನದ ಹಿನ್ನೆಲೆಯಲ್ಲಿ ಶಿವ ಸುಜ್ಞಾನ ಸ್ವಾಮೀಜಿಯ ನೇತೃತ್ವದಲ್ಲಿ ವಿಶ್ವಕರ್ಮ ಸಮುದಾಯ ವಿಧಿ ವಿಧಾನಗಳೊಂದಿಗೆ ಅಂತ್ಯಕ್ರಿಯೆ ಮಠದ ಆವರಣದಲ್ಲಿ ಶುಕ್ರವಾರ ನಡೆಯಿತು.
ಚಿಗುಟು ಮಲ್ಲೇಶ್ವರ ಶ್ರೀಗಳು ಸ್ನಾನದ ಗೃಹದಲ್ಲಿ ನೀರು ಕಾಯಿಸುವ ಹೀಟರ್ ವಿದ್ಯುತ್ ಸ್ಪರ್ಶಿಸಿ ನಿಧನರಾಗಿದ್ದರು. 30 ವರ್ಷಗಳ ಹಿಂದೆ ಜ್ಞಾನ ಭಾಸ್ಕರ ಸ್ವಾಮೀಜಿ ಸಂಸಾರ ತ್ಯಜಿಸಿ, ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಶಿವ ಸುಜ್ಞಾನ ಸ್ವಾಮೀಜಿಯಿಂದ ಸನ್ಯಾಸತ್ವ ಸ್ವೀಕರಿಸಿದ್ದರು. ವಿಶ್ವಕರ್ಮ ಸಮಾಜದ ಒಕ್ಕೂಟದಲ್ಲಿರುವ 63 ಸ್ವಾಮೀಜಿಗಳಲ್ಲಿ ಚಿಗುಟು ಮಲ್ಲೇಶ್ವರ ಶ್ರೀಗಳು ಒಬ್ಬರಾಗಿದ್ದರು.
ನಿಧನಕ್ಕೆ ಯಾವ ಕಾರಣಗಳು ಇಲ್ಲ
ಮುಂದಿನ ದಿನಗಳಲ್ಲಿ ಸಮುದಾಯದ ಮುಖಂಡರ ಜೊತೆ ಚರ್ಚಿಸಿ ಚಿಗುಟು ಮಲ್ಲೇಶ್ವರ ಮಹಾಸಂಸ್ಥಾನ ಮಠದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಸುಜ್ಞಾನ ಮಠದ ಶಿವ ಸುಜ್ಞಾನ ಸ್ವಾಮೀಜಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯಾವ ಚಿಗುಟು ಮಲ್ಲೇಶ್ವರ ಸ್ವಾಮಿ ದೇವಾಲಯ ಹಿರಿಯೂರು ಈ ಕ್ಷೇತ್ರದಲ್ಲಿ ಹಿಂದಿನಿಂದ ಪರಂಪರಾಗತವಾಗಿ ಜ್ಞಾನ ಭಾಸ್ಕರ ಶ್ರೀಗಳು ಪರಂಧಾಮ ಹೊಂದಿದ್ದಾರೆ. ಇವರ ಹಿಂದಿನವರು ಕೂಡ ಸ್ವಾಮಿಗಳಾಗಿ ದೇವಸ್ಥಾನದ ನಿರ್ವಹಣೆಯನ್ನು ಮಾಡಿಕೊಂಡು ಬಂದಂತವರು. ಇವತ್ತು ಆಕಸ್ಮಿಕವಾಗಿ ತಮ್ಮ ದೇಹವನ್ನು ಬಿಡುವ ಸಂದರ್ಭ ಬಂದಿದೆ. ಸಹಜವಾಗಿ ಒಬ್ಬಂಟಿಯಾಗಿದ್ದರು. ಸ್ನಾನ ಮಾಡುವಾಗ ನೀರಿನಲ್ಲಿ ಹಾಕುವ ಹೀಟರ್ ವಿದ್ಯುತ್ ಸ್ಪರ್ಶಿಸಿ ಆಕಸ್ಮಿಕ ನಿಧನರಾಗಿದ್ದಾರೆ. ಇದಕ್ಕೆ ಬೇರೆ ಯಾವ ಕಾರಣಗಳು ಇಲ್ಲ ಎಂದು ಹೇಳಿದರು. ಸಮಾಜದ ಬಂಧುಗಳು, ಅಕ್ಕಪಕ್ಕದ ಸಾರ್ವಜನಿಕರು ನಿರ್ಣಯಿಸಿ ಮಠದ ಆವರಣದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.
ಸಂಸಾರ ತ್ಯಜಿಸಿ ಸನ್ಯಾಸತ್ವ ಸ್ವೀಕರಿಸಿದ ಸ್ವಾಮೀಜಿ
ಬೆಳಿಗ್ಗೆ ಸ್ನಾನದ ಗೃಹದಲ್ಲಿ ಅವರ ಮೃತದೇಹ ಕಂಡು ಬಂದಿದ್ದು, ಸ್ನಾನಕ್ಕೆ ನೀರು ಕಾಯಿಸುವ ವೇಳೆ ವಿದ್ಯುತ್ ಸ್ಪರ್ಶದಿಂದ ಸಾವು ಸಂಭವಿಸಿರುವುದು ಎಂದು ಭಕ್ತರು ಶಂಕೆ ವ್ಯಕ್ತಪಡಿಸಿದ್ದಾರೆ. ಹಿರಿಯೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ವಿಶ್ವಕರ್ಮ ಸಮಾಜದ ಒಕ್ಕೂಟದಲ್ಲಿರುವ 63 ಸ್ವಾಮೀಜಿಗಳಲ್ಲಿ ಇವರು ಒಬ್ಬರಾಗಿದ್ದಾರೆ. 30 ವರ್ಷಗಳ ಹಿಂದೆಯೇ ಜ್ಞಾನಭಾಸ್ಕರ ಸ್ವಾಮೀಜಿ ಸಂಸಾರ ತ್ಯಜಿಸಿ ಸನ್ಯಾಸತ್ವ ಸ್ವೀಕರಿಸಿದರು. ಶಾಸಕಿ ಕೆ ಪೂರ್ಣಿಮಾ ಸೇರಿದಂತೆ ಹಿರಿಯೂರಿನ ಅನೇಕ ಜನಪ್ರತಿನಿಧಿಗಳು, ಭಕ್ತರು ವಿಶ್ವಕರ್ಮ ಸಮುದಾಯ ಭಕ್ತವೃಂದ ಸೇರಿದಂತೆ ಮತ್ತಿತರರು ಶ್ರೀಗಳ ನಿಧಾನಕ್ಕೆ ಸಂತಾಪ ಸೂಚಿಸಿದ್ದಾರೆ. ಮಠದ ಆವರಣದಲ್ಲಿ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಶ್ರೀಗಳ ಅಂತ್ಯಕ್ರಿಯೆ ಮಠದ ಆವರಣದಲ್ಲಿ ವಿಶ್ವಕರ್ಮ ಸಮುದಾಯ ವಿಧಿ ವಿಧಾನಗಳೊಂದಿಗೆ ನೇರವೇರಲಿದೆ ಎಂದು ಮೂಲಗಳು ತಿಳಿಸಿವೆ.
ಭಕ್ತರ ದರ್ಶನಕ್ಕೆ ಅವಕಾಶ
ಮಠದ ಅಭಿವೃದ್ಧಿಗೆ ತುಂಬಾ ಶ್ರಮ ಪಟ್ಟಿದ್ದರು. ಇತ್ತೀಚೆಗೆ ಒಂದು ಮಠದ ಸಮಿತಿಯನ್ನು ರಚಿಸಿದ್ದರು. ಇತ್ತೀಚಿನ ದಿನಗಳಲ್ಲಿ ಅದನ್ನು ಮಾಡುವ ಪ್ರಯತ್ನ ಪೂರ್ಣ ಆಗಲಿಲ್ಲ. ಮುಂದಿನ ದಿನಗಳಲ್ಲಿ ಸಮಾಜದ ಬಂಧುಗಳು ಮುಂದೆ ನಿಂತು ಪೂರ್ಣಗೊಳಿಸಲಾಗುವುದು. ಶ್ರೀಗಳ ಆಸೆ ಇತ್ತು ಸಂಕಲ್ಪಗಳನ್ನು ಈಡೇರಿಸಲಾಗುತ್ತದೆ ಎಂದು ಹೇಳಿದರು. ಶ್ರೀಗಳ ಮಂಟಪ ನಿರ್ಮಾಣ ಮಾಡಿ ಭಕ್ತರ ದರ್ಶನಕ್ಕೆ ಅವಕಾಶ ಮಾಡಿ ಕೊಡಲಾಗುತ್ತದೆ. ಈಗಾಗಲೇ ಸ್ಥಳೀಯ ಶಾಸಕಿ ಕೆ ಪೂರ್ಣಿಮಾ ಶ್ರೀನಿವಾಸ್ ಅವರ ಜೊತೆ ಮಾತನಾಡಿದ್ದೇನೆ ಅವರು ಸ್ಪಂದಿಸಿದ್ದಾರೆ ಎಂದರು.
ಮುಂದಿನ ದಿನಗಳಲ್ಲಿ ಸಮುದಾಯದ ಬಂಧುಗಳೊಂದಿಗೆ ಸಭೆ ನಡೆಸಿ ತೀರ್ಮಾನ ತಗೊಂಡು ಈ ಮಠಕ್ಕೆ ಉತ್ತರಾಧಿಕಾರಿಯಾಗಿ ನೇಮಕ ಮಾಡಲಾಗುವುದು ಎಂದು ತಿಳಿಸಿದರು.
ರಾಜಕೀಯ ಗಣ್ಯರಿಂದ ಸಂತಾಪ
ಶಂಕರಾತ್ಮಾನಂದ ಸರಸ್ವತಿ ಸ್ವಾಮೀಜಿ, ಶಾಸಕಿ ಕೆ ಪೂರ್ಣಿಮಾ ಶ್ರೀನಿವಾಸ್, ಮಾಜಿ ಎಂಎಲ್ಸಿ ರಘು ಆಚಾರ್, ವಿಶ್ವಕರ್ಮ ಸಮುದಾಯದ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಬಾಬು ಪತ್ತಾರ್, ಅಖಿಲ ಭಾರತ ವಿಶ್ವಕರ್ಮ ಸಭಾದ ರಾಜ್ಯಾಧ್ಯಕ್ಷ ಪ್ರಸನ್ನ ಕುಮಾರ್ ಸೇರಿದಂತೆ ಮತ್ತಿತರರು ಶ್ರೀಗಳ ದರ್ಶನ ಪಡೆದರು. ಇನ್ನು ನಗರಸಭೆ ಸದಸ್ಯ ಬಾಲಕೃಷ್ಣ, ಕದ್ರು ಗಣೇಶ್, ತಾಲ್ಲೂಕು ವಿಶ್ವಕರ್ಮ ಸಮಾಜ ಅಧ್ಯಕ್ಷ ಸಿ. ನಾರಾಯಣ ಚಾರ್ , ಚಿತ್ರದುರ್ಗ, ಶಿವಮೊಗ್ಗ ಸೇರಿದಂತೆ ಮತ್ತಿತರರ ಭಾಗಗಳಿಂದ ಭಕ್ತರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.