ನಾಳೆ ಚಿತ್ರದುರ್ಗದಲ್ಲಿ ಹಿಂದೂ ಮಹಾಗಣಪತಿ ವಿಸರ್ಜನೆ; ರಸ್ತೆ ಮಾರ್ಗಸೂಚಿ ಬದಲಾವಣೆ
ಚಿತ್ರದುರ್ಗ, ಸೆಪ್ಟೆಂಬರ್ 11: ಕೋಟೆನಾಡು ಚಿತ್ರದುರ್ಗ ನಗರದ ಸ್ಟೇಡಿಯಂ ರಸ್ತೆಯ ಎಂ.ಎಂ ಪ್ರೌಢಶಾಲೆ ಆವರಣದ ವೇದಿಕೆಯಲ್ಲಿ ಪ್ರತಿಷ್ಠಾಪಿಸಿರುವ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ವತಿಯಿಂದ ಪ್ರತಿಷ್ಠಾಪಿಸಲ್ಪಟ್ಟಿರುವ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆಯು ನಾಳೆ ವಿಸರ್ಜನೆ ಕಾರ್ಯಕ್ರಮ ನಡೆಯಲಿದೆ.
ಹಿಂದೂ ಮಹಾಗಣಪತಿ ವಿಸರ್ಜನೆಯಿಂದ ರಸ್ತೆ ಸಾರಿಗೆ ಸಂಚಾರ ಮಾರ್ಗವನ್ನು ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಆದೇಶಿಸಿದ್ದಾರೆ. ಮಹಾಗಣಪತಿ ಮೆರವಣಿಗೆ ಹಾದು ಹೋಗುವ ನಗರದ ಪ್ರಮುಖ ಬಿ.ಡಿ ರಸ್ತೆಯ ಮೂಲಕ ಸಾಗಿ ಹೊಳಲ್ಕೆರೆ ರಸ್ತೆ ಕಡೆಗೆ ಹೋಗಲಿದೆ.
ಚಿತ್ರದುರ್ಗದಲ್ಲಿ ಆರ್ಭಟಿಸಿದ ಹುಬ್ಬೆ ಮಳೆ; ಹಳ್ಳಕೊಳ್ಳಗಳೆಲ್ಲಾ ಭರ್ತಿ
ಗಣೇಶನ ಮೆರವಣೆಗೆಯಲ್ಲಿ ಅತಿ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆಯಿದ್ದು, ಮೆರವಣಿಗೆ ಸಮಯದಲ್ಲಿ ನಗರದಲ್ಲಿನ ರಸ್ತೆಗಳಲ್ಲಿ ಸಂಚರಿಸುತ್ತಿರುವ ವಾಹನಗಳು ನಗರದ ಮುಖ್ಯರಸ್ತೆ ಹಾಗೂ ಇತರೆ ರಸ್ತೆಗಳಲ್ಲಿ ಸಂಚರಿಸಲು ಸಾಧ್ಯವಾಗದ ಕಾರಣ ನಾಳೆ ನಗರದಲ್ಲಿ ಸಂಚರಿಸುವ ವಾಹನಗಳು ಬದಲಿ ಮಾರ್ಗದಲ್ಲಿ ಸಂಚರಿಸಲು ಆದೇಶ ಹೊರಡಿಸಲಾಗಿದೆ.
ಬೆಂಗಳೂರು ಮತ್ತು ಚಳ್ಳಕೆರೆ ಮಾರ್ಗವಾಗಿ ಬರುವ ವಾಹನಗಳು ಎನ್.ಹೆಚ್-4 ಬೈಪಾಸ್ ರಸ್ತೆ ಮುಖಾಂತರ ಬಂದು ಮೆದೆಹಳ್ಳಿ ರಸ್ತೆ ಮತ್ತು ಎಪಿಎಂಸಿ ಮಾರುಕಟ್ಟೆ ಮೂಲಕ ಬಸ್ ನಿಲ್ದಾಣಕ್ಕೆ ಬಂದು ಪುನಃ ವಾಪಸ್ ಅದೇ ಮಾರ್ಗದಲ್ಲಿ ಸಂಚರಿಸುವುದು.
ದಾವಣಗೆರೆ ಮಾರ್ಗದಿಂದ ಬರುವ ವಾಹನಗಳು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಬಂದು ಪುನಃ ಅದೇ ಮಾರ್ಗದಲ್ಲಿ ಸಂಚರಿಸುವುದು. ಶಿವಮೊಗ್ಗ, ಹೊಳಲ್ಕೆರೆ, ಭೀಮಸಮುದ್ರದ ಮಾರ್ಗದಿಂದ ಬರುವ ವಾಹನಗಳು ಎನ್.ಎಚ್-13 ಬೈಪಾಸ್ ನಲ್ಲಿ ಮುರುಘಾ ಮಠದವರೆಗೆ ಹೋಗಿ ನಂತರ ಎನ್.ಎಚ್-4 ಬೈಪಾಸ್ ರಸ್ತೆ ಮುಖಾಂತರ ಕೆ.ಎಸ್.ಆರ್.ಟಿ.ಸಿ ಮತ್ತು ಖಾಸಗಿ ನಿಲ್ದಾಣಕ್ಕೆ ಬಂದು ಪುನಃ ವಾಪಸು ಅದೇ ಮಾರ್ಗದಲ್ಲಿ ಸಂಚರಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಆದೇಶಿಸಿದ್ದಾರೆ.
ಸೆಪ್ಟೆಂಬರ್ 12 ರಂದು ಹಿಂದೂ ಮಹಾಗಣಪತಿ ವಿಗ್ರಹ ವಿಸರ್ಜನಾ ಮೆರವಣಿಗೆ ಪ್ರಯುಕ್ತ ಸಾರ್ವಜನಿಕ ಶಾಂತಿ ಪಾಲನೆ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಮುಂಜಾಗ್ರತಾ ಸಲುವಾಗಿ ಸೆಪ್ಟೆಂಬರ್ 11 ರಂದು ಮಧ್ಯಾಹ್ನ 2 ಗಂಟೆಯಿಂದ ಸೆಪ್ಟೆಂಬರ್ 13ರ ಬೆಳಿಗ್ಗೆ 6 ಗಂಟೆಯವರೆಗೆ ಚಿತ್ರದುರ್ಗ ತಾಲ್ಲೂಕಿನಾದ್ಯಂತ ಬರುವ ಎಲ್ಲಾ ಬಗೆಯ ಮದ್ಯ ಮಾರಾಟದ ಅಂಗಡಿಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
Recommended Video
ಹಿಂದೂ ಮಹಾಗಣಪತಿ ವಿಸರ್ಜನೆ ಮೆರವಣೆಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವ ಸಂಭವ ಇರುವುದರಿಂದ, ಜಿಲ್ಲೆಯಾದ್ಯಂತ ಕೋವಿಡ್-19 ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಾರ್ಗಸೂಚಿಗಳಂತೆ ಸಾರ್ವಜನಿಕ ಶಾಂತಿ ಪಾಲನೆ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಚಿತ್ರದುರ್ಗ ತಾಲ್ಲೂಕಿನಾದ್ಯಂತ ಮದ್ಯ ಮಾರಾಟ ನಿಷೇಧಿಸಿ ಆದೇಶಿಸಲಾಗಿದೆ.