ಬಕ್ರೀದ್ ಹಬ್ಬಕ್ಕೆ ಚಿತ್ರದುರ್ಗದಲ್ಲಿ ಬಿಗಿ ಭದ್ರತೆ: ಎಸ್ಪಿ ಜಿ.ರಾಧಿಕಾ
ಚಿತ್ರದುರ್ಗ, ಜುಲೈ 30: ಬಕ್ರೀದ್ ಹಬ್ಬಕ್ಕೆ ನಗರದಲ್ಲಿ ಸೂಕ್ತ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಚಿತ್ರದುರ್ಗ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ತಿಳಿಸಿದರು.
Recommended Video
ಚಿತ್ರದುರ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಸ್ಪಿ ಜಿ.ರಾಧಿಕಾ, ಬಕ್ರೀದ್ ಹಬ್ಬದ ಭದ್ರತೆಗಾಗಿ 800 ಜನ ಪೊಲೀಸ್ ಅಧಿಕಾರಿ ಹಾಗು ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ ಎಂದರು.
ಬಕ್ರೀದ್ ಸಾಮೂಹಿಕ ಪ್ರಾರ್ಥನೆಗೆ ಸರ್ಕಾರದ ಮಾರ್ಗಸೂಚಿ!
ಚಿತ್ರದುರ್ಗ ಜಿಲ್ಲಾ, ತಾಲ್ಲೂಕು ಮಟ್ಟದಲ್ಲೂ ಶಾಂತಿ ಸಭೆಗಳನ್ನು ಮಾಡಲಾಗಿದ್ದು, ಜುಲೈ 31ರ ಮಧ್ಯಾಹ್ನದಿಂದಲೇ ಬಂದೋಬಸ್ತ್ ಜಾರಿಗೆ ಬರುತ್ತದೆ ಎಂದು ತಿಳಿಸಿದರು.
ಹಬ್ಬದ ಸಂದರ್ಭದಲ್ಲಿ ಸ್ಯಾನಿಟೈಜರ್, ಮಾಸ್ಕ್ ಬಳಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚನೆ ನೀಡಲಾಗಿದೆ. ಒಂದು ಬಾರಿಗೆ 50 ಜನರಿಗೆ ಮಾತ್ರ ಪ್ರಾರ್ಥನೆಗೆ ಅವಕಾಶ ನೀಡಲಾಗುತ್ತದೆ, ಮಸೀದಿಗಳಲ್ಲಿ ಮಾತ್ರ ಪ್ರಾರ್ಥನೆಗೆ ಅವಕಾಶ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಚಿತ್ರದುರ್ಗ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ವರ್ಗಾವಣೆ
ಕಂಟೈನ್ಮೆಂಟ್ ವಲಯಗಳಿಂದ ಯಾರೂ ಪ್ರಾರ್ಥನೆಗೆ ಬರಲು ಅವಕಾಶ ನೀಡುವುದಿಲ್ಲ, ಈದ್ಗಾ ಸೇರಿದಂತೆ ಹೊರಾಂಗಣಗಳಲ್ಲಿ ಪ್ರಾರ್ಥನೆಗೆ ನಿಷೇಧ ಹೇರಲಾಗಿದೆ ಎಂದು ಹೇಳಿದರು. 196 ಮಸೀದಿಗಳಿಗೆ ಪೊಲೀಸ್ ಭದ್ರತೆ ಒದಗಿಸಿದ್ದು, ಎಲ್ಲಾ 92 ಈದ್ಗಾ ಮೈದಾನಗಳಲ್ಲಿ ಪ್ರಾರ್ಥನೆಗೆ ನಿಷೇಧ ಹೇರಿದೆ. ಕಂಟೈನ್ಮೆಂಟ್ ವಲಯಗಳನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ಎಸ್ಪಿ ಜಿ.ರಾಧಿಕಾ ಮಾಹಿತಿ ನೀಡಿದರು.