ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಭರ್ಜರಿ ಮಳೆ
ಚಿತ್ರದುರ್ಗ, ಜುಲೈ 23: ಕೋಟೆನಾಡು ಚಿತ್ರದುರ್ಗದಲ್ಲಿ ಮಹಾಮಾರಿ ಕೊರೊನಾ ವೈರಸ್ ಪ್ರಕರಣಗಳ ನಡುವೆಯೂ ಕಳೆದ ಎರಡು ದಿನಗಳಿಂದ ಚಿತ್ರದುರ್ಗ ಜಿಲ್ಲೆಯಾದ್ಯಂತ ಭರ್ಜರಿ ಮಳೆ ಸುರಿದಿದೆ.
ಬುಧವಾರ ರಾತ್ರಿ ಸುರಿದ ಭಾರಿ ಮಳೆಗೆ ಜಿಲ್ಲೆಯ ಹಲವೆಡೆ ಕೆರೆ, ಕಟ್ಟೆ, ಹಳ್ಳ-ಕೊಳ್ಳಗಳು, ಚೆಕ್ ಡ್ಯಾಂ ಗಳು ತುಂಬಿವೆ. ಇನ್ನು ಚಿತ್ರದುರ್ಗ ತಾಲೂಕಿನ ಮಲ್ಲಾಪುರ ಕೆರೆ ನಿರಂತರ ಮಳೆಗೆ ತುಂಬಿ ಕೋಡಿಬಿದ್ದು, ಕೆರೆಯ ನೀರು ರಸ್ತೆ ಮೇಲೆ ಹರಿಯುತ್ತಿರುವ ದೃಶ್ಯ ಕಂಡುಬಂದಿದೆ.
ಪಿಪಿಇ ಕಿಟ್ ಧರಿಸಿ ಆಸ್ಪತ್ರೆಗೆ ಭೇಟಿ ನೀಡಿದ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್
ಇನ್ನು ಹೊಳಲ್ಕೆರೆ ತಾಲ್ಲೂಕಿನ ಸಿಂಗಾಪುರ ಗ್ರಾಮದಲ್ಲಿ ಸುರಿದ ಮಳೆಗೆ ಮಲ್ಲಿಕಾರ್ಜುನಪ್ಪ ಎಂಬುವರಿಗೆ ಸೇರಿದ ಮನೆ ಜಖಂ ಆಗಿದ್ದು, ಮೇಲ್ಛಾವಣಿ ಕುಸಿದು ಮನೆಯಲ್ಲಾ ಜಲಾವೃತವಾಗಿದೆ ಎಂದು ವರದಿಯಾಗಿದೆ.
ಚಳ್ಳಕೆರೆಯ ನಾಯಕನಹಟ್ಟಿ ಸುತ್ತ ಮುತ್ತ ಹಾಗೂ ತೋರೆಬೀರೆನಹಳ್ಳಿ ಸೇರಿದಂತೆ ಹಲವೆಡೆ ಮಳೆರಾಯನ ಆರ್ಭಟ ಜೋರಾಗಿದ್ದು, ಹಳ್ಳಕೊಳ್ಳ, ಗುಂಡಿ ತುಂಬಿ ಹರಿಯುತ್ತಿವೆ.
ಚಳ್ಳಕೆರೆಯಲ್ಲಿ ರಾತ್ರಿ ಸುರಿದ ಭಾರಿ ಮಳೆಗೆ ಮನೆಗಳು ಜಲಾವೃತ
ಇತ್ತ ಹಿರಿಯೂರು ತಾಲ್ಲೂಕಿನ ಮಸ್ಕಲ್, ಬ್ಯಾಡರಹಳ್ಳಿ, ಹೂವಿನಹೊಳೆ, ಐಮಂಗಲ ಹೋಬಳಿಯ ಕೆಲವು ಭಾಗದಲ್ಲಿ ಮಳೆಯಾಗಿದ್ದು, ಹಳ್ಳಗಳು ಭರ್ತಿಯಾಗಿ ತುಂಬಿ ಹರಿಯುತ್ತಿವೆ. ನಿನ್ನೆ ರಾತ್ರಿ ಸುರಿದ ಮಳೆಗೆ ಹೊಲಗಳಲ್ಲಿನ ಮಣ್ಣು ಕೊರಕಲು ಉಂಟಾಗಿದೆ. ಹೊಲದಲ್ಲಿ ಶೇಂಗಾ ಬೀಜದ ಮೊಳಕೆ ಮತ್ತು ಚಿಗುರು ಮಳೆಗೆ ಸಿಲುಕಿದ್ದು, ರೈತರ ಜಮೀನುಗಳು ಮಳೆ ನೀರಿನಿಂದ ಜಲಾವೃತವಾಗಿ ಕೆರೆಯಂತಾಗಿರುವ ದೃಶ್ಯ ಕಂಡುಬಂದಿದೆ.