ಚಿತ್ರದುರ್ಗದಲ್ಲಿ ತಡ ರಾತ್ರಿ ಮಳೆ, ಮನೆಗೆ ನುಗ್ಗಿದ ನೀರು
ಚಿತ್ರದುರ್ಗ, ಜುಲೈ 18: ರಾಜ್ಯದ ಹಲವೆಡೆ ವರುಣನ ಆರ್ಭಟ ಮುಂದುವರೆದಿದ್ದು ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಲ್ಲೂ ಸಹ ವರುಣ ಅವಾಂತರ ಸೃಷ್ಟಿಸಿದೆ. ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಮಳೆಯಾಗುತ್ತಿದ್ದು, ನಿನ್ನೆ ರಾತ್ರಿ ಸುರಿದ ಮಳೆಗೆ ನೀರು ಮನೆಗಳಿಗೆ ನುಗ್ಗಿವೆ. ಇದರಿಂದ ಜನ ಜೀವನ ಅಸ್ತವ್ಯಸ್ತ ಗೊಂಡಿದೆ. ಬೆಳೆಗಳಿಗೆ ನೀರು ನುಗ್ಗಿದ ಪರಿಣಾಮವಾಗಿ ಅಪಾರ ಪ್ರಮಾಣದ ಬೆಳೆ ಹಾನಿ ಉಂಟಾಗಿದೆ.
ಚಿತ್ರದುರ್ಗ ನಗರದ ಗುಮಾಸ್ತ ಕಾಲೋನಿಯಲ್ಲಿ ಮಳೆ ನೀರು ನಿಂತು ರಸ್ತೆಗಳೆಲ್ಲವೂ ಜಲಾವೃತಗೊಂಡಿವೆ. ಸರಿಯಾದ ರಸ್ತೆ ಚರಂಡಿ ನಿರ್ಮಾಣ ಮಾಡಿಲ್ಲದಿದ್ದಕ್ಕೆ ನೀರು ಮನೆಯೊಳಗೆ ನುಗ್ಗಿದೆ. ಮನೆಯವರು ಮನೆಗೆ ನುಗ್ಗಿದ ನೀರನ್ನು ಹೊರ ಹಾಕಲು ಹರಸಾಹಸ ಪಡಬೇಕಾಯಿತು.
ಇನ್ನು ಸುರಿದ ಮಳೆಗೆ ಚಿತ್ರದುರ್ಗ ನಗರದ ಹೊರವಲಯದಲ್ಲಿರುವ ಐತಿಹಾಸಿಕ ಮಲ್ಲಾಪುರ ಕೆರೆ ತುಂಬಿ ಹರಿಯುತ್ತಿದೆ. ಇದಲ್ಲದೆ ಮೊಳಕಾಲ್ಮೂರು, ಹೊಳಲ್ಕೆರೆ, ಹೊಸದುರ್ಗ, ಸೇರಿದಂತೆ ಚಳ್ಳಕೆರೆ ತಾಲ್ಲೂಕಿನಲ್ಲೂ ಸಹ ಮಳೆಯಾಗಿದೆ.
ಹಿರಿಯೂರಿನಲ್ಲೂ ಮಳೆ: ತಾಲೂಕಿನ ಸುತ್ತ ಮುತ್ತ ಭಾಗದಲ್ಲಿ ತಡರಾತ್ರಿ 2 ಗಂಟೆಯಿಂದ ಮಳೆಯಾಗುತ್ತಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ರೈತರ ಕೃಷಿ ಚಟುವಟಿಕೆಗಳಿಗೆ ಸ್ವಲ್ಪ ಮಟ್ಟಿಗೆ ಅಡೆತಡೆ ಉಂಟಾಗಿದೆ ಎನ್ನಬಹುದು. ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಉತ್ತಮ ಮಳೆಯಾಗಿದೆ. ಮಳೆ ಸುರಿದ ಹಿನ್ನೆಲೆಯಲ್ಲಿ ತಾಲೂಕಿನ ನಂದಿಹಳ್ಳಿ ಗೊಲ್ಲರಹಟ್ಟಿಯ ರಸ್ತೆ ಕೆಸರು ಗದ್ದೆಯಂತಾಗಿದೆ.
Recommended Video
ಕೋಲಾಟದಹಟ್ಟಿ, ಮಸ್ಕಲ್ ಚಿತ್ರದೇವರಹಟ್ಟಿ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಇನ್ನು ನಗರದ ವಾಣಿ ಕಾಲೇಜು ಹಿಂಭಾಗದ ದೇವಗಿರಿ ನಗರದ ರಸ್ತೆಗಳು ಮಳೆ ಬಂದು ಕೆಸರು ತುಂಬಿದ್ದು, ಮಕ್ಕಳು ಜಾರಿ ಬೀಳುವ ಸ್ಥಿತಿಯಾಗಿದೆ. ಗಾಡಿಗಳು ಓಡಾಡಲು ಬರದಂತೆ ಆಗಿವೆ. ನಗರಸಭೆಯವರು ಮತ್ತು ಶಾಸಕರು ಇದರ ಕಡೆ ಗಮನ ಹರಿಸಬೇಕು ಎಂದು ದೇವಗಿರಿ ನಗರದ ನಿವಾಸಿಗಳು ಒತ್ತಾಯಿಸಿದ್ದಾರೆ.