ಸಿಎಂ ಗುಣಮುಖರಾಗಲು ಗುರು ತಿಪ್ಪೇರುದ್ರಸ್ವಾಮಿಯಲ್ಲಿ ಶ್ರೀರಾಮುಲು ಹರಕೆ
ಚಿತ್ರದುರ್ಗ, ಆಗಸ್ಟ್ 03: ಕೊರೊನಾ ಸೋಂಕಿನಿಂದ ಸಿಎಂ ಶೀಘ್ರ ಗುಣಮುಖರಾಗಿ ಹೊರ ಬರಲು ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿಯಲ್ಲಿ ದೇವರಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಹರಕೆ ಹೊತ್ತು ಪ್ರಾರ್ಥನೆ ಮಾಡಿಕೊಂಡಿದ್ದಾರೆ.
Recommended Video
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯಲ್ಲಿ ಮಾತಾಡಿದ ಸಚಿವ ಶ್ರೀರಾಮುಲು, "ಸಿಎಂ 24 ಗಂಟೆ ನಿರಂತರವಾಗಿ ಕೊರೊನಾ ನಿಯಂತ್ರಿಸುವ ಕೆಲಸ ಮಾಡಿದ್ದಾರೆ. ಬೆಂಗಳೂರು ಸೇರಿ ರಾಜ್ಯದ ಬೇರೆ ಬೇರೆ ಕಡೆ ಕೋವಿಡ್ ಜಾಗೃತಿ ಮೂಡಿಸಿದ್ದರು. ಆದಷ್ಟು ಬೇಗ ಅವರು ಗುಣಮುಖರಾಗಿ ಬರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ರಾಜ್ಯದಲ್ಲಿ ಕೊರೊನಾ ಪರೀಕ್ಷೆಯನ್ನು ಹೆಚ್ಚು ಮಾಡಬೇಕಿದೆ. ಬೆಂಗಳೂರು ಭಾಗದ ಎಂಟು ವಲಯದಲ್ಲಿ ರಾಪಿಡ್ ಟೆಸ್ಟ್ ಮಾಡಲಾಗಿದೆ. ಎಲ್ಲಾ ಜಿಲ್ಲೆಗಳಲ್ಲಿ ಟಾಸ್ಕ್ ಫೋರ್ಸ್ ಮಾಡಿ ಕೊರೊನಾ ನಿಯಂತ್ರಣದ ಪ್ರಯತ್ನ ಮಾಡುತ್ತೇವೆ" ಎಂದು ಹೇಳಿದರು.
ಯಡಿಯೂರಪ್ಪ ಆರಾಧ್ಯ ದೈವ ಹುಚ್ಚರಾಯಸ್ವಾಮಿಗೆ ಸಂಸದರಿಂದ ಪ್ರಾರ್ಥನೆ
ಖಾಸಗಿ ಆಸ್ಪತ್ರೆ ಬಗ್ಗೆ ಬಹಳ ದೂರುಗಳಿವೆ. ಹಾಗಾಗಿ ಬೆಂಗಳೂರಿನಲ್ಲಿ 19 ಆಸ್ಪತ್ರೆಗಳ ಲೈಸನ್ಸ್ ರದ್ದು ಮಾಡಿದ್ದೇವೆ. ಸೋಂಕಿತರಿಂದ ಚಿಕಿತ್ಸೆಗೆ 24 ಲಕ್ಷ ಹಣ ಪಡೆದಿದ್ದ ಖಾಸಗಿ ಆಸ್ಪತ್ರೆಯಿಂದ ಹಣ ವಾಪಸ್ ಕೊಡಿಸಿದ್ದೇವೆ ಎಂದರು.
ಸರ್ಕಾರದ ಪೂರ್ಣ ಅವಧಿಯವರೆಗೆ ಸಿಎಂ ಬದಲಾವಣೆ ವಿಚಾರ ಇಲ್ಲ. ಉಳಿದ ಅವಧಿಗೆ ಯಡಿಯೂರಪ್ಪ ಅವರೇ ಸಿಎಂ ಆಗಿರುತ್ತಾರೆ. ಬೇಕಿಲ್ಲದವರು ಈ ರೀತಿ ಚರ್ಚೆ ಮಾಡುತ್ತಿದ್ದಾರೆ. ಬಿಜೆಪಿಯಲ್ಲಿ ಯಾವುದೇ ರಹಸ್ಯ ಸಭೆಗಳು ನಡೆದಿಲ್ಲ, ಎಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ತಿಳಿಸಿದರು.