ಚಿತ್ರದುರ್ಗದಲ್ಲಿ ಸಚಿವ ಸ್ಥಾನಕ್ಕೆ ಅರ್ಧ ಡಜನ್ ಹೆಸರುಗಳು...
ಚಿತ್ರದುರ್ಗ, ಜುಲೈ 25: ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತವಾದ ಬೆನ್ನಲ್ಲೇ ಅಧಿಕಾರದ ಚುಕ್ಕಾಣಿ ಹಿಡಿಯಲಿರುವ ಬಿಜೆಪಿ ಪಕ್ಷದಲ್ಲಿ ರಾಜಕೀಯ ಚಟುವಟಿಕೆಗಳು ರಂಗೇರುತ್ತಿವೆ. ಇತ್ತ ಚಿತ್ರದುರ್ಗದಲ್ಲಿ ಐವರು ಬಿಜೆಪಿ ಶಾಸಕರಿದ್ದು, ಸಚಿವ ಸ್ಥಾನಕ್ಕೆ ಪೈಪೋಟಿ ಶುರುವಾಗಿದೆ. ಕಳೆದ 2018 ರ ವಿಧಾನಸಭಾ ಚುನಾವಣೆಯಲ್ಲಿ ಚಿತ್ರದುರ್ಗದ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಐದು ಕಡೆ ಬಿಜೆಪಿ ಕಮಲ ಬಾವುಟ ಹಾರಿಸಿ ಕಾಂಗ್ರೆಸ್ ಧೂಳಿಪಟವಾಗುವಂತೆ ಮಾಡಿತ್ತು.
ಚಿತ್ರದುರ್ಗ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಹಿರಿಯೂರು ಶಾಸಕಿ ಕೆ.ಪೂರ್ಣಿಮಾ, ಮೊಳಕಾಲ್ಮೂರು ಶಾಸಕ ಶ್ರೀರಾಮುಲು, ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್, ಹೊಳಲ್ಕೆರೆ ಶಾಸಕ ಚಂದ್ರಪ್ಪ ಸೇರಿದಂತೆ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಹೆಸರುಗಳು ಕೂಡ ಸಚಿವ ಸ್ಥಾನದ ಪಟ್ಟಿಯಲ್ಲಿದೆ ಎನ್ನಲಾಗಿದೆ.
ಯಡಿಯೂರಪ್ಪ ನೇತೃತ್ವದ ಮಂತ್ರಿಮಂಡಲ ರಚನೆ ರಹಸ್ಯ ಬಯಲು
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಮೊಳಕಾಲ್ಮೂರಿನಲ್ಲಿ ಗೆಲುವು ಸಾಧಿಸಿದ ಶ್ರೀರಾಮುಲುಗೆ ಉಪ ಮುಖ್ಯಮಂತ್ರಿ ಪಟ್ಟ ದೊರಕಲಿದೆ ಎನ್ನುವ ಮಾತುಗಳು ಕೇಳಿ ಬಂದಿದ್ದು, ಹಿರಿಯ ರಾಜಕಾರಣಿ, ಆರು ಬಾರಿ ಶಾಸಕರಾಗಿ ಆಯ್ಕೆ ಆಗಿರುವ ಜಿ.ಎಚ್. ತಿಪ್ಪಾರೆಡ್ಡಿಗೆ ಸಚಿವ ಸ್ಥಾನ ನೀಡಬಹುದು ಎಂದು ಹೇಳಲಾಗುತ್ತಿದೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಬಾವಿ ಸಚಿವರು, ಸಚಿವರು ಎಂದು ಹೆಸರುಗಳು ಹರಿದಾಡುತ್ತಿದೆ.
ಬಿಜೆಪಿ ಸರ್ಕಾರ ಇದ್ದಾಗ ಪಕ್ಷೇತರರಾಗಿ ಗೂಳಿಹಟ್ಟಿ ಶೇಖರ್ ಬೆಂಬಲ ಸೂಚಿಸಿ ಮಂತ್ರಿಯಾಗಿದ್ದರು. ಅವರು ಕೂಡ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.
ಮಹಿಳೆಯರಲ್ಲಿ ಲೇಡಿ ಟೈಗರ್ ಎಂದು ಗುರುತಿಸಿಕೊಂಡಿರುವ ಶಾಸಕಿ ಕೆ. ಪೂರ್ಣಿಮಾ ಕೂಡ ಮಹಿಳಾ ಕೋಟಾದಲ್ಲಿ ಸಚಿವ ಸ್ಥಾನ ಪಡೆಯುವ ನೀರೀಕ್ಷೆಯಿದೆ. ಇನ್ನು ಯಡಿಯೂರಪ್ಪನ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಹೊಳಲ್ಕೆರೆ ಎಂ. ಚಂದ್ರಪ್ಪ ಕೂಡ ಮಂತ್ರಿ ಪಟ್ಟ ದೊರಕಲಿದೆ ಎನ್ನುವ ಆಸೆ ಹೊಂದಿದ್ದಾರೆ. ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ ಎನ್ನುವ ಮಾತುಗಳು ಚರ್ಚೆಯಲ್ಲಿವೆ.
ನೂತನ ಬಿಜೆಪಿ ಸರ್ಕಾರದಲ್ಲಿ ದಕ್ಷಿಣ ಕನ್ನಡದ ಯಾರಿಗೆ ಒಲಿಯುತ್ತೆ ಸಚಿವ ಸ್ಥಾನ?
ಒಟ್ಟಾರೆ ಕೋಟೆ ನಾಡು ಚಿತ್ರದುರ್ಗದಲ್ಲಿ ಸಚಿವ ಸ್ಥಾನಕ್ಕೆ ಅರ್ಧ ಡಜನ್ ಹೆಸರಗಳು ಕೇಳಿ ಬಂದಿದ್ದು, ಯಾರಿಗೆ ಯಾವ ಖಾತೆ ಕೊಡುತ್ತಾರೆ, ಮಹಿಳಾ ಕೋಟಾದಡಿಯಲ್ಲಿ ಶಾಸಕಿ ಕೆ. ಪೂರ್ಣಿಮಾಗೆ ಮಂತ್ರಿ ಪದವಿ ದಕ್ಕುತ್ತಾ ಎಂಬುದನ್ನ ಕಾದು ನೋಡಬೇಕಿದೆ.