ಚಿತ್ರದುರ್ಗ; ಆಲಿಕಲ್ಲು ಮಳೆ ಆರ್ಭಟ, ಅಪಾರ ಬೆಳೆ ನಷ್ಟ
ಚಿತ್ರದುರ್ಗ, ಮೇ 9: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಭಾನುವಾರ ಸಂಜೆ ಸುರಿದ ಬಿರುಗಾಳಿ ಸಹಿತ ಆಲಿಕಲ್ಲು ಮಳೆ ಅಪಾರ ನಷ್ಟ ಉಂಟು ಮಾಡಿದೆ. ಕಷ್ಟಪಟ್ಟು ಬೆಳೆದಿದ್ದ ಬಾಳೆ, ತೆಂಗು ಸೇರಿದಂತೆ ವಿವಿಧ ಬೆಳೆ ನಷ್ಟವಾಗಿದ್ದು, ರೈತರು ಕಂಗಾಲಾಗಿದ್ದಾರೆ.
ತಾಲ್ಲೂಕಿನ ಕಸ್ತೂರಿರಂಗಪ್ಪನಹಳ್ಳಿ ಗ್ರಾಮದ ಚಿಕ್ಕಣ್ಣಗೆ ಸೇರಿದ ಸುಮಾರು 2 ಎಕರೆ ಬಾಳೆ ತೋಟ ನೆಲಕಚ್ಚಿದೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಧರ್ಮಪುರ ಹೋಬಳಿಯ ಹೊಸಕೆರೆ ಗ್ರಾಮದಲ್ಲಿ ಭಾರೀ ಬಿರುಗಾಳಿ ಬೀಸಿದ್ದು ಗ್ರಾಮದ ರೈತ ಜೆ. ಹೆಚ್. ಗೌಡಗೆ ಸೇರಿದ ತೆಂಗು ಹಾಗೂ ಅಡಿಕೆ ಮರಗಳು ಅರ್ಧಕ್ಕೆ ಮುರಿದು ನೆಲಕ್ಕುರುಳಿದೆ.
ಮೇ ತಿಂಗಳ ಮಳೆ; ಮಾವು ಕೊಯ್ಲು, ರೈತರು ಅನುಸರಿಸಬೇಕಾದ ಕ್ರಮ
ಪಟ್ರೇಹಳ್ಳಿ ಹಾಗೂ ಆದಿವಾಲ ಗ್ರಾಮದ ಸುತ್ತ ಮುತ್ತ ಭಾರೀ ಗಾಳಿ ಬೀಸಿದ ಹಿನ್ನೆಲೆಯಲ್ಲಿ ವಿದ್ಯುತ್ ಕಂಬಗಳು ರಸ್ತೆಗೆ ಬಿದ್ದಿವೆ. ಇದರಿಂದ ಗ್ರಾಮಕ್ಕೆ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆ ಉಂಟಾಗಿ, ಜನರು ಕತ್ತಲಲ್ಲಿ ಕಾಲ ಕಳೆಯುವಂತಾಯಿತು.
ಬೆಂಗಳೂರಿನಲ್ಲಿ ಮುಂದುವರೆಯಲಿದೆ ಮಳೆ ಅಬ್ಬರ, ಜನತೆ ತತ್ತರ
ಅಧಿಕಾರಿಗಳ ಭೇಟಿ
ಗಾಳಿ, ಮಳೆಗೆ ಹಾನಿಗೊಳಗಾದ ರೈತರ ಜಮೀನುಗಳಿಗೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಧರ್ಮಪುರ ಹೋಬಳಿಯ ಹೊಸಕೆರೆ ವ್ಯಾಪ್ತಿಯ ಕಂದಾಯ ಅಧಿಕಾರಿ ವರದರಾಜು ರೈತರ ಜಮೀನುಗಳಿಗೆ ಭೇಟಿ ಬೆಳೆ ಹಾನಿಯ ಬಗ್ಗೆ ಮಾಹಿತಿ ಪಡೆದರು. ಕೆ. ಆರ್. ಹಳ್ಳಿಯ ಅಧಿಕಾರಿ ಬಾಳೆ ತೋಟಕ್ಕೆ ಭೇಟಿ ನೀಡಿದ್ದಾರೆ. ಆದಿವಾಲ ಹಾಗೂ ಪಟ್ರೇಹಳ್ಳಿಯಲ್ಲಿ ರೈತರ ಜಮೀನುಗಳಿಗೆ ಅಧಿಕಾರಿ ಲಕ್ಷ್ಮೀಪತಿ ಕೂಡ ಭೇಟಿ ನೀಡಿದರು. ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಸಹ ತಾಲ್ಲೂಕಿನಲ್ಲಿನ ಮನೆ ಹಾಗೂ ಬೆಳೆ ಹಾನಿಯಾದ ಬಗ್ಗೆ ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅಧಿಕಾರಿಗಳ ಸ್ಪಂದನೆ
ಹಿರಿಯೂರು ತಾಲ್ಲೂಕಿನಲ್ಲಿ ಆಲಿಕಲ್ಲು ಸಹಿತ ಮಳೆ ಆರ್ಭಟಕ್ಕೆ ರೈತರ ಬೆಳೆಗಳು ನೆಲಕಚ್ಚಿದ ಮಾಹಿತಿಯನ್ನು ಒನ್ ಇಂಡಿಯಾ ಪ್ರತಿನಿಧಿ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿರುವ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಅಧಿಕಾರಿ ಲೋಕೇಶ್ ಹಾನಿಗೊಳಗಾದ ರೈತರ ಜಮೀನುಗಳಿಗೆ ಹೋಬಳಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ವರದಿ ಸಲ್ಲಿಸಲಿದ್ದಾರೆ ಎಂದರು.
ಸಿಡಿಲಿಗೆ ಯುವಕ ಬಲಿ
ಚಳ್ಳಕೆರೆ ತಾಲೂಕಿನ ದೇವರೆಡ್ಡಿಹಳ್ಳಿಯ ಗ್ರಾಮದಲ್ಲಿ ಕುರಿ ಕಾಯಲು ಹೋಗಿದ್ದ ಯುವಕ ಸಿಡಿಲಿಗೆ ಬಲಿಯಾಗಿದ್ದಾನೆ. 19 ವರ್ಷದ ಯಶ್ವಂತ್ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಮಳೆ ಬಂದಿದ್ದರಿಂದ ಆಶ್ರಯ ಪಡೆಯಲು ಮರದ ಕೆಳಗಡೆ ಹೋದಾಗ ಈ ಘಟನೆ ಸಂಭವಿಸಿದೆ. ಸ್ಥಳಕ್ಕೆ ಚಳ್ಳಕೆರೆ ತಹಸೀಲ್ದಾರ್ ಎನ್. ರಘುಮೂರ್ತಿ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ.
ಜಿಲ್ಲೆಯಲ್ಲಿ ಮಳೆ ಆರ್ಭಟ
ಚಿತ್ರದುರ್ಗದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಆಲಿಕಲ್ಲು ಸಹಿತ ಮಳೆಯಾಗಿದೆ. ಬಿಸಿಲ ಬೇಗೆಯಿಂದ ರೋಸಿಹೋಗಿದ್ದ ಜನರಿಗೆ ಮಳೆ ತಂಪೆರೆದಿದೆ. ಗುಡುಗು, ಮಿಂಚು ಸಹಿತ ಆಲಿಕಲ್ಲು ಮಳೆ ಯಿಂದ ಮನೆಯ ಮೇಲ್ಛಾವಣಿ ರಸ್ತೆಗಳಲ್ಲಿ ಆಲಿಕಲ್ಲು ಬಿದ್ದಿತು. ಜನರು ಆಲಿಕಲ್ಲು ನೋಡಿ ಸಂತಸ ಪಟ್ಟು ಫೋಟೋ ತೆಗೆದುಕೊಂಡರು. ವಾಟ್ಸಪ್ ಸ್ಟೇಟಸ್, ಫೇಸ್ಬುಕ್ಗಳಲ್ಲಿ ಆಲಿಕಲ್ಲು ಮಳೆಯ ಫೋಟೋ, ವಿಡಿಯೋ ಹರಿದಾಡುತ್ತಿದೆ.
Recommended Video