ಪಶು ಸಂಗೋಪನಾ ಸಚಿವರ ಜಾತಿ ಪ್ರಮಾಣ ಪತ್ರ ಬೋಗಸ್: ಆಂಜನೇಯ ಆರೋಪ
ಚಿತ್ರದುರ್ಗ, ಸೆಪ್ಟೆಂಬರ್ 23: ಪಶು ಸಂಗೋಪನೆ ಸಚಿವ ಪ್ರಭು ಚೌಹಾಣ್ ಅವರದ್ದು ನಕಲಿ ಜಾತಿ ಪ್ರಮಾಣಪತ್ರ ಎಂದು ಮಾಜಿ ಸಚಿವ ಎಚ್. ಆಂಜನೇಯ ಆರೋಪ ಮಾಡಿದ್ದಾರೆ.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಪ್ರಭು ಚೌಹಾಣ್ ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿ ವಂಚಿಸಿದ್ದಾರೆ. ಚುನಾವಣೆಯಲ್ಲಿ ಬೀದರ್ ಜಿಲ್ಲೆ ಔರಾದ್ ಎಸ್ಸಿ ಮೀಸಲು ಕ್ಷೇತ್ರದಲ್ಲಿ ಸ್ಪರ್ಧಿಸಿ, ಎಸ್ಸಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಲಂಬಾಣಿ ಜನಾಂಗಕ್ಕೆ ಎಸ್ಟಿ ಮೀಸಲಾತಿ ಇದೆ. ಮಹಾರಾಷ್ಟ್ರದಲ್ಲಿ ವಿದ್ಯಾಭ್ಯಾಸ ಮಾಡಿರುವ ಪ್ರಭು ಚೌಹಾಣ್ ನವರು ಕರ್ನಾಟಕದಲ್ಲಿ ಅಕ್ರಮವಾಗಿ ಎಸ್ಸಿ ಜಾತಿ ಪ್ರಮಾಣ ಪತ್ರ ಪಡೆದಿದ್ದು, ಎಸ್ಸಿ ಜನಾಂಗಕ್ಕೆ ಮೀಸಲಾದ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚಿತ್ರದುರ್ಗದಲ್ಲಿ ಜಿಲ್ಲಾಡಳಿತದ ವಿರುದ್ಧ ಗರಂ ಆದ ಮಾಜಿ ಸಚಿವ ಆಂಜನೇಯ
Recommended Video
ಇದಲ್ಲದೆ ಪ್ರಭು ಚೌಹಾಣ್ ಕರ್ನಾಟಕದಲ್ಲಿ ಎಸ್ಸಿ ಪ್ರಮಾಣ ಪತ್ರ, ರೇಷನ್ ಕಾರ್ಡ್ ಪಡೆದಿದ್ದಾರೆ. ಮತ್ತೊಂದು ಕಡೆ ಮಹಾರಾಷ್ಟ್ರದ ಖರೆಗಾಂವ್ ನಲ್ಲೂ ಅವರ ರೇಷನ್ ಕಾರ್ಡ್ ಚಾಲ್ತಿಯಲ್ಲಿದೆ. ಎಸ್ಸಿ ಜನಾಂಗಕ್ಕೆ ಪ್ರಭು ಚೌಹಾಣ್ ವಂಚನೆ ಮಾಡಿರುವ ಆರೋಪದ ತನಿಖೆಯಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಪಡೆದಿರುವುದು ಸಾಬೀತಾಗಿದೆ. ಈ ಹಿನ್ನೆಲೆ ಪ್ರಭು ಚೌಹಾಣ್ ಶಾಸಕ ಸ್ಥಾನ ಮತ್ತು ಸಚಿವ ಸ್ಥಾನದಿಂದ ವಜಾ ಮಾಡಬೇಕು ಎಂದು ಮಾಜಿ ಸಚಿವ ಎಚ್ ಆಂಜನೇಯ ಒತ್ತಾಯ ಮಾಡಿದ್ದಾರೆ.