ರಂಗೇರಿದ ಗ್ರಾ.ಪಂ ಚುನಾವಣೆ: ಸಾಮಾಜಿಕ ಜಾಲತಾಣಗಳಲ್ಲಿ ಅಬ್ಬರದ ಪ್ರಚಾರ
ಚಿತ್ರದುರ್ಗ, ಡಿಸೆಂಬರ್ 10: ದಿನ ಕಳೆದಂತೆ ಹಳ್ಳಿ ಚುನಾವಣೆಯ ಕಾವು ರಂಗೇರುತ್ತಿದ್ದು, ಇದೇ ತಿಂಗಳ 27 ರಂದು ಚಿತ್ರದುರ್ಗ ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ ನಡೆಯಲಿರುವ ಗ್ರಾಮ ಪಂಚಾಯತಿ ಚುನಾವಣೆ ಪ್ರಚಾರ ಭರ್ಜರಿಯಾಗಿ ತಯಾರಿ ನಡೆಯುತ್ತಿದೆ.
ಚುನಾವಣಾ ಪ್ರಚಾರಕ್ಕೆ ಸಾಮಾಜಿಕ ಜಾಲತಾಣಗಳು ಕೂಡ ಒಂದು ವೇದಿಕೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣಾ ಪ್ರಚಾರ ಸದ್ದು ಮಾಡುತ್ತಿವೆ.
ಗ್ರಾಮ ಪಂಚಾಯತಿ ಚುನಾವಣೆ: ಚಿತ್ರದುರ್ಗ ಜಿಲ್ಲೆಯಲ್ಲಿ 2 ಹಂತದ ಮತದಾನ
ಡಿ.11 ರಿಂದ ಜಿಲ್ಲೆಯಲ್ಲಿ ನಾಮಪತ್ರ ಸಲ್ಲಿಸಲಿದ್ದು, ವಾಟ್ಸಪ್, ಫೇಸ್ಬುಕ್, ಮೇಸೆಂಜರ್ ಇತರೆ ಆನ್ಲೈನ್ ಮೂಲಕ ಮತದಾರರ ಓಲೈಕೆ ಮಾಡಲಾಗುತ್ತಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು ತಾಲ್ಲೂಕು ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬರುವ ಗ್ರಾ.ಪಂ ಗಳ ಅಭ್ಯರ್ಥಿಗಳು ಸಾಮಾಜಿಕ ಜಾಲತಾಣಗಳನ್ನು ಬಳಸಿ ಪ್ರಚಾರದಲ್ಲಿ ಮಗ್ನರಾಗಿದ್ದಾರೆ. ಮತದಾರರ ಓಲೈಕೆ ಮಾಡಿಕೊಂಡು, ಮತದಾರರ ಪ್ರೀತಿ, ವಿಶ್ವಾಸ, ನಂಬಿಕೆ ಗಳಿಸಿಕೊಂಡು, ಎದುರಾಳಿಯನ್ನು ಸೋಲಿಸಲು ಅಭ್ಯರ್ಥಿಗಳು ಸಾಮಾಜಿಕ ಜಾಲತಾಣಗಳ ಮೊರೆ ಹೋಗುತ್ತಿದ್ದಾರೆ.
ಅಭ್ಯರ್ಥಿಗಳ ಪರ ಬೆಂಬಲಿಗರ ಪ್ರಚಾರ
ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಅಭ್ಯರ್ಥಿಗಳ ಪ್ರಚಾರವನ್ನು ಬೆಂಬಲಿಗರು ಉಸ್ತುವಾರಿ ವಹಿಸಿಕೊಂಡಿದ್ದಾರೆ. ಆತ್ಮೀಯ ಗೆಳೆಯರ, ಸಮಾಜ ಸೇವಕ, ಬಡವರ ಬಂಧು, ಸಾಮಾನ್ಯ ಜನರಿಗೆ ಸ್ಪಂದಿಸುವ ವ್ಯಕ್ತಿ ಹೀಗೆ ಹತ್ತು ಹಲವಾರು ಪದ ಪುಂಜಗಳ ಮೂಲಕ ನಿಮ್ಮ ಸೇವೆ, ಅಭಿವೃದ್ಧಿ ಮಾಡಲು ಮತದಾರರ ಮನವೊಲಿಕೆ ಪ್ರಯತ್ನ ಮಾಡಿದ್ದಾರೆ. ಉಳಿದಂತೆ ಇತರೆ ಬೆಂಬಲಿಗರು ಶುಭವಾಗಲಿ, ಜಯವಾಗಲಿ, ಸಪೋರ್ಟ್ ಮಾಡಿ ಹೀಗೆ ಲೈಕ್, ಕಾಮೆಂಟ್ ಶೇರ್ ಮಾಡುವ ಮೂಲಕ ಎದುರಾಳಿಗಳಿಗೆ ಭಯ ಹುಟ್ಟಿಸುತ್ತಿದ್ದಾರೆ.
ಒನ್ಇಂಡಿಯಾ ಕನ್ನಡ ನ್ಯೂಸ್ ಜೊತೆ ಮಾತು
ಒನ್ಇಂಡಿಯಾ ಕನ್ನಡ ನ್ಯೂಸ್ ಜೊತೆ ಮಾತನಾಡಿದ ಗ್ರಾ.ಪಂ ಚುನಾವಣಾ ಅಭ್ಯರ್ಥಿ ಕೆ.ಎಸ್.ಪುನೀತ್ ಕುಮಾರ್, ನಾನು ಹಿರಿಯೂರು ತಾಲ್ಲೂಕಿನ ಬಬ್ಬೂರು ಗ್ರಾ.ಪಂ ವಾರ್ಡ್ ನಂಬರ್-2ರ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸುತಿದ್ದು, ಶುಕ್ರವಾರ ನಾನು ನಾಮಪತ್ರ ಸಲ್ಲಿಸುತ್ತಿದ್ದು, ಮತ್ತೊಮ್ಮೆ ತನ್ನ ಬೆಂಬಲಿಗರೊಂದಿಗೆ ಅಧಿಕೃತವಾಗಿ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದರು.
ಒಂದು ವರ್ಷದಿಂದ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ
ನನ್ನ ವಾರ್ಡ್ ನಲ್ಲಿ 860 ಮತಗಳಿದ್ದು, 4 ರಿಂದ 5 ಎದುರಾಳಿಯಾಗುವ ಸಾಧ್ಯತೆ ಇದೆ. ಎಷ್ಟೇ ಜನ ನನ್ನ ಎದುರು ಸ್ಪರ್ಧಿಸಿದರೂ, ನಾನು 300-350 ಮತಗಳ ಅಂತರದಿಂದ ಗೆಲುವು ಪಡೆಯುತ್ತೇನೆ. ನನಗೆ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ಬೆಂಬಲ, ಯುವಕರ ಬೆಂಬಲ, ಗ್ರಾಮಸ್ಥರ ಬೆಂಬಲ ಇರುವುದರಿಂದ ಕಳೆದ ಒಂದು ವರ್ಷದಿಂದ ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣೆಗೆ ಸ್ಪರ್ಧಿಸುತಿದ್ದೆನೆಂದು ತಯಾರಿ ಮಾಡಿಕೊಂಡು ನಾನೇ ಅಭ್ಯರ್ಥಿ ಎಂದು ಘೋಷಿಸಿಸಿಕೊಂಡಿದ್ದೆ ಎಂದರು.
Recommended Video
ಸೌಲಭ್ಯಗಳನ್ನು ಒದಗಿಸುವುದು ನನ್ನ ಗುರಿ
ಈಗಾಗಲೇ ನಾಲ್ಕೈದು ಬಾರಿ ಮನೆಮನೆಗೆ ತೆರಳಿ ಮತದಾರರ ಮುಂದೆ ನಾನು ಅಭ್ಯರ್ಥಿ ಎಂದು ತಿಳಿಸಿದ್ದೆನೆ. ನನ್ನ ಮುಖ್ಯ ಉದ್ದೇಶ ಗೆಲುವು ಸಾಧಿಸಿ ಗ್ರಾಮ ಅಭಿವೃದ್ಧಿ ಹಾಗೂ ಪಂಚಾಯಿತಿಯಿಂದ ಜನರಿಗೆ ಸಿಗುವ ಸೌಲಭ್ಯಗಳನ್ನು ಒದಗಿಸುವುದು ನನ್ನ ಗುರಿ. ಜನರ ಸೇವೆ ಮಾಡಲು ಹಾಗೂ ವೇಗವಾಗಿ ತಿಳಿಸಲು ಸಾಮಾಜಿಕ ಜಾಲತಾಣ ಬಳಸಿಕೊಂಡಿದ್ದೇನೆ ನನ್ನ ಗೆಲುವು ಶತ ಸಿದ್ಧ ಎಂದಿದ್ದಾರೆ ಅಭ್ಯರ್ಥಿ ಪುನೀತ್ ಕುಮಾರ್.