ಚಿತ್ರದುರ್ಗ; ಶಾಲಾ ಕೊಠಡಿ ದತ್ತು ಪಡೆದು ಮಾದರಿಯಾದ ಶಿಕ್ಷಕ
ಚಿತ್ರದುರ್ಗ, ಏಪ್ರಿಲ್ 8; ಸರ್ಕಾರಿ ಶಾಲೆಗಳು ಎಂದರೆ ಅವ್ಯವಸ್ಥೆಯ ಆಗರ ಎನ್ನುವವರೇ ಹೆಚ್ಚು. ಹಲವಾರು ಜನಪ್ರತಿನಿಧಿಗಳು ಶಾಲೆಗಳನ್ನು ದತ್ತು ತೆಗೆದುಕೊಂಡಿದ್ದಾರೆ. ಆದರೆ ಅದನ್ನು ಅಭಿವೃದ್ಧಿ ಮಾಡಿಸುವುದನ್ನು ಮರೆತಿದ್ದಾರೆ. ಸರ್ಕಾರ, ಜನಪ್ರತಿನಿಧಿ ಮಾಡದ ಕೆಲಸವನ್ನು ಹಳ್ಳಿಗಾಡಿನ ಶಿಕ್ಷಕರೊಬ್ಬರು ಮಾಡಿದ್ದಾರೆ.
Recommended Video
ಮಕ್ಕಳಿಗೆ ತಾವು ಪಾಠ ಹೇಳಿಕೊಡುವ ಕೊಠಡಿಯನ್ನು ದತ್ತು ಪಡೆದು ರಾಜ್ಯ ಮತ್ತು ಜಿಲ್ಲೆಯ ಇತರ ಶಿಕ್ಷಕರಿಗೆ ಮಾದರಿಯಾಗಿದ್ದಾರೆ. ವೈಯಕ್ತಿಕವಾಗಿ ಸುಮಾರು 2 ಲಕ್ಷ ಖರ್ಚು ಮಾಡಿ, ಕೊಠಡಿಗೆ ಹೊಸ ವಿನ್ಯಾಸ ನೀಡುವ ಮೂಲಕ ಹೈಟೆಕ್ ಕೊಠಡಿಯಾಗಿ ಪರಿವರ್ತನೆ ಮಾಡಿದ್ದಾರೆ.
ಬಾಷ್ ಕಂಪನಿಯ ಕೊಡುಗೆಯಿಂದ ಹೊಸ ವಿನ್ಯಾಸ ಪಡೆದ ಚಿತ್ರದುರ್ಗದ ಜೆಜಿ ಹಳ್ಳಿಯ ಸರ್ಕಾರಿ ಶಾಲೆ
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಅಂಬಲಿಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಇಂಗ್ಲಿಷ್ ಶಿಕ್ಷಕ ನಾಗಭೂಷಣ್ ಇಂತಹ ಕಾರ್ಯ ಮಾಡಿದವರು. ಶಿಕ್ಷಕರ ಕಳಾಜಿಯಿಂದ ಶಾಲೆಯ ಕೊಠಡಿ ಖಾಸಗಿ ಶಾಲೆಯ ಕೊಠಡಿಗೆ ಪೈಪೋಟಿ ನೀಡುವಂತಿದೆ.
''ಮಧ್ಯದಲ್ಲೇ ಶಾಲೆ ತೊರೆಯುವ ಮಕ್ಕಳಿಗೆ ಕೌಶಲ್ಯ ತರಬೇತಿ ಅತ್ಯಗತ್ಯ''
ಶಾಲಾ ಕೊಠಡಿಗೆ ಹೊಸ ರೂಪ ಕೊಡುವ ಮೂಲಕ ಮಕ್ಕಳ ಕಲಿಕೆಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಕೊಠಡಿ ಗೋಡೆ ಮೇಲೆ ಕನ್ನಡ ವರ್ಣಮಾಲೆಯ ಅಕ್ಷರಗಳು, ಇಂಗ್ಲಿಷ್ ಅಕ್ಷರಗಳ ಚಾರ್ಟ್ಗಳು, ಪ್ರಾಣಿ ಪಕ್ಷಿಗಳ ಚಾರ್ಟ್, ಎಲ್ಇಡಿ ಟಿವಿ, ಕಂಪ್ಯೂಟರ್, ಫ್ಯಾನ್ ಗಳು, ನೀತಿ ಕಥೆಗಳಿಗೆ ಚಿತ್ರಗಳ ಮೂಲಕ ಹೊಸ ರೂಪ ನೀಡಲಾಗಿದೆ.
ಸರ್ಕಾರಿ ಶಾಲೆ ವಿದ್ಯಾರ್ಥಿನಿಯರಿಗೆ ಕರಾಟೆ ಕಲಿಸಲಿಕ್ಕೆ ಬರಲಿದ್ದಾರೆ KSRP ಪೊಲೀಸ್
ವಿದ್ಯಾರ್ಥಿಗಳು ಗಂಟೆಗಳ ಕಾಲ ಕುಳಿತು ಪಾಠ ಕೇಳಿದರೂ ದಣಿವಾಗದ ರೀತಿಯಲ್ಲಿ ಡೆಸ್ಕ್, ಗೋಡೆಯ ಮೇಲೆ ರೈಲಿನ ಚಿತ್ರಣ, ಫ್ಯಾನ್, ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಪುಸ್ತಕ, ಬ್ಯಾಗ್ ಇಡಲು ಪ್ರತ್ಯೇಕ ಡೆಸ್ಕ್ ನಲ್ಲಿ ಸ್ಥಳವಿದೆ. ಶಿಕ್ಷಕ ಪಾಠ ಮಾಡುವಾಗ ಮಕ್ಕಳ ಕೈಯಲ್ಲಿ ಬುಕ್ ಇಲ್ಲದಿದ್ದರೂ ಎಲ್ ಇಡಿ ಪರೆದೆಯ ಮೇಲೆ ಅದೇ ಪಾಠ ತೋರಿಸಲಾಗುತ್ತದೆ. ಹೀಗೆ ವಿವಿಧ ವ್ಯವಸ್ಥೆಯನ್ನು ಶಾಲಾ ಕೊಠಡಿಯ ಒಳಗಡೆ ನೋಡಬಹುದು.
ಥಟ್ಟನೆ ಉತ್ತರ ಕೊಡುತ್ತಾರೆ ಮಕ್ಕಳು
ಪ್ರಶ್ನೆಗಳನ್ನು ಕೇಳಿದರೆ ವಿದ್ಯಾರ್ಥಿಗಳು ಪಟಪಟನೆ ಇಂಗ್ಲಿಷ್ನಲ್ಲಿ ಉತ್ತರ ನೀಡುತ್ತಾರೆ. ಪ್ರಶ್ನೆ ಕೇಳುವ ಶಿಕ್ಷಕನೇ ಒಂದು ಕ್ಷಣ ಬೆರಗಾಗುವಂತೆ ವಿದ್ಯಾರ್ಥಿಗಳು ಉತ್ತರಿಸುತ್ತಾರೆ. ಖಾಸಗಿ ಶಾಲೆ ಮತ್ತು ಸರ್ಕಾರಿ ಶಾಲೆಗಳಿಗೆ ತುಂಬಾ ವ್ಯತ್ಯಾಸವಿದೆ. ನಮ್ಮ ಶಾಲೆಯಲ್ಲಿ ಮೊದಲು ಈರೀತಿ ಇರಲಿಲ್ಲ, ಇಲ್ಲಿ ಸರಿಯಾದ ವ್ಯವಸ್ಥೆ ಇರಲಿಲ್ಲ. ನಮ್ಮ ನಾಗಭೂಷಣ್ ಸರ್ ಅವರ ಸಹಾಯ ಮತ್ತು ಪರಿಶ್ರಮದಿಂದ ಶಾಲಾ ಕೊಠಡಿಯನ್ನು ಈ ರೀತಿಯಾಗಿ ಪರಿವರ್ತಿಸಿದ್ದಾರೆ ಎನ್ನುತ್ತಾರೆ ವಿದ್ಯಾರ್ಥಿಗಳು.
ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರು
"ನಾಗಭೂಷಣ್ ಸರ್ ಉತ್ತಮ ಬೋಧಕರಾಗಿದ್ದಾರೆ. ಸದಾ ನಗುಮುಖದಿಂದ ಮಾತಾಡಿಸುವ ಸ್ವಭಾವ ಅವರದ್ದು. ಚೆನ್ನಾಗಿ ಪಾಠ ಮಾಡುತ್ತಾರೆ. ಗ್ರೂಪ್ ಮೂಲಕ ದಿನನಿತ್ಯದ ಚಟುವಟಿಕೆಗಳನ್ನು ಕಲಿಸುತ್ತಾರೆ. ಲಾಕ್ ಡೌನ್ ಸಂದರ್ಭದಲ್ಲಿ ಕರೆ ಮಾಡಿ ವಿಚಾರಿಸುತ್ತಿದ್ದರು. ಅವರು ಕೇವಲ ನಮಗೆ ಪಾಠ ಮಾಡುವ ಟೀಚರ್ ಅಲ್ಲ, ನಮ್ಮ ಮನೆಯ ಸಂಬಂಧಿಕರಾಗಿದ್ದಾರೆ. ನಮ್ಮ ಕುಟುಂಬದವರು ಅವರನ್ನು ಕುಟುಂಬ ಸದಸ್ಯರಂತೆ ನೋಡುತ್ತಾರೆ. ಸ್ನೇಹಿತರಾಗಿ ನಾವು ಅವರನ್ನು ಕಾಣುತ್ತೇವೆ" ಎನ್ನುತ್ತಾರೆ" ವಿದ್ಯಾರ್ಥಿನಿ ನಿತ್ಯಶ್ರೀ.
ಸ್ವಂತ ಖರ್ಚಿನಲ್ಲಿ ಮಾಡುವ ಪ್ರಯತ್ನ
"ನನ್ನದೊಂದು ಧ್ಯೇಯವಿದೆ. ಕಲಿಸದೆ ಹೇಳಿಸುವ ಸಂಬಳ ನನ್ನದಲ್ಲ. ನನ್ನ ಶಾಲೆಯ ಮಕ್ಕಳಿಗೆ ಏನಾದರೂ ಕಲಿಸಬೇಕು ಎನ್ನುವ ದೃಷ್ಟಿಯಿಂದ ವಿದ್ಯಾರ್ಥಿಗಳು ನನ್ನ ಮೇಲೆ ಇಟ್ಟಿರುವ ಪ್ರೀತಿಗೆ ವಿದ್ಯಾರ್ಥಿಗಳ ಜೀವನದಲ್ಲಿ ನೆನಪು ಶಾಶ್ವತವಾಗಿ ಉಳಿಯಬೇಕು ಎನ್ನುವ ಹಿನ್ನೆಲೆಯಲ್ಲಿ ಎಲ್ಲವನ್ನೂ ಸ್ವಂತ ಖರ್ಚಿನಲ್ಲಿ ಮಾಡುವ ಪ್ರಯತ್ನ ಮಾಡುತ್ತಿದ್ದೇನೆ" ಎನ್ನುತ್ತಾರೆ ಶಿಕ್ಷಕ ನಾಗಭೂಷಣ್.
ಕಲಿಕೆಗೆ ಸಹಕಾರಿಯಾಗುತ್ತದೆ
"ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶ, ಸೃಜನಶೀಲವಾಗಿ, ಕ್ರಿಯತ್ಮಾಕವಾಗಿ ಒಂದು ತರಗತಿ ಮಾಡಬೇಕು ಎಂದು ಕೊರೊನಾ ಸಮಯವನ್ನು ಈ ಕೆಲಸದಲ್ಲಿ ಕೆಳೆಯಲಾಗಿದೆ. ವಾಟ್ಸಪ್ ಗ್ರೂಪ್ ಮೂಲಕ, ದಿನನಿತ್ಯದ ಚಟುವಟಿಕೆಗಳನ್ನು ಶೇರ್ ಮಾಡುತ್ತಿದ್ದೇನೆ. ಪ್ರತಿಯೊಂದು ವಿಷಯದಲ್ಲೂ ಚಟುವಟಿಕೆಯಿಂದ ಕಲಿಯಬೇಕು. ಸಕ್ರಿಯ ಆಗಿರಬೇಕು ಎನ್ನುವ ನಿಟ್ಟಿನಲ್ಲಿ ಶಾಲಾ ಕೊಠಡಿಯನ್ನು ದತ್ತು ಪಡೆಯಲಾಗಿದೆ. ಮಕ್ಕಳು ತುಂಬಾ ಖುಷಿಯಿಂದ ಈ ನನ್ನ ಶಾಲೆಗೆ ಬರಬೇಕು, ಹೊರಗಡೆ ಮಕ್ಕಳು ಹೇಗೆ ಆಟದಲ್ಲಿ ತೊಡಗುತ್ತಾರೋ ತರಗತಿಯಲ್ಲೂ ಒಳಗಡೆ ಬರೋಕೆ ಅಷ್ಟೇ ಖುಷಿಯಾಗಿರಬೇಕು" ಎನ್ನುತ್ತಾರೆ ಶಿಕ್ಷಕ ನಾಗಭೂಷಣ್.
ಗ್ರಾಮಸ್ಥರ ಸಂತಸ
ನಾಗಭೂಷಣ್ ಅವರ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಂತಹ ಶಿಕ್ಷಕ ನಮಗೆ ಸಿಕ್ಕಿರುವುದು ತುಂಬಾ ಅದೃಷ್ಟ. ಇವತ್ತಿನ ದಿನಗಳಲ್ಲಿ ಯಾರು ಸಹ ಸರ್ಕಾರಿ ಶಾಲೆಯ ಬಗ್ಗೆ ಗಮನ ಹರಿಸುವುದಿಲ್ಲ ಇಂತಹ ಸಂದರ್ಭದಲ್ಲಿ ಇವರು ಸ್ವಂತ ಹಣವನ್ನು ಖರ್ಚು ಮಾಡಿ ಶಾಲಾ ಕೊಠಡಿಯನ್ನು ಅಭಿವೃದ್ಧಿ ಮಾಡಿರುವುದು ನಮ್ಮ ಊರಿನ ಹೆಮ್ಮೆಯ ಸಂಗತಿ ಜೊತೆಗೆ ನಮ್ಮ ಮಕ್ಕಳಿಗೆ ಈ ಶಿಕ್ಷಕ ಎಂದರೇ ಪಂಚಪ್ರಾಣ. ಬೋಧಿಸುವ ಪಾಠ, ನಡವಳಿಕೆ, ಸಹನೆ, ಸೃಜನಶೀಲತೆ ಇಲ್ಲವೂ ಈ ಶಿಕ್ಷಕನಲ್ಲಿವೆ ಎಂದು ಗ್ರಾಮ ಪಂಚಾಯಿತಿ ಸದಸ್ಯರು, ಎಸ್ಡಿಎಂಸಿ ಸದಸ್ಯರು ಹರ್ಷ ವ್ಯಕ್ತಪಡಿಸಿದರು.