ಚಳ್ಳಕೆರೆ: ಮಳೆಗಾಗಿ ಭಜನೆ ಮೊರೆ ಹೋದ ಗೋಪನಹಳ್ಳಿ ಗ್ರಾಮಸ್ಥರು
ಚಿತ್ರದುರ್ಗ, ಸೆಪ್ಟೆಂಬರ್ 21: ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ ಎರಡು ಮೂರು ತಿಂಗಳಿನಿಂದ ಸರಿಯಾದ ಮಳೆ ಬಾರದ ಹಿನ್ನೆಲೆಯಲ್ಲಿ ರೈತರು ಹಾಕಿದ ಬೆಳೆಗಳೆಲ್ಲವೂ ಕಮರಿ ಹೋಗುತ್ತಿವೆ. ಶೇಂಗಾ ಬೆಳೆ, ಈರುಳ್ಳಿ ಬೆಳೆ, ತೊಗರಿ ಮತ್ತಿತರ ಬೆಳೆಗಳು ಹಾಗೂ ದನ- ಕರು, ಕುರಿಗಳಿಗೆ ಕುಡಿಯುವ ನೀರಿಗಾಗಿ ಪರದಾಟ ಹೇಳತೀರದಾಗಿದೆ.
"ಇತ್ತ ಗಣೇಶ ಚತುರ್ಥಿ ಮುಗಿದು, ಜೋಕುಮಾರ ಹುಟ್ಟಿದರೂ ಮಳೆ ಬರುತ್ತಿಲ್ಲ," ಎಂಬುದು ಹಿರಿಯರ ಮಾತು. ಇದೀಗ ಮಳೆಗಾಗಿ ಪ್ರಾರ್ಥಿಸಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮಸ್ಥರು ಭಜನೆ ಮೊರೆ ಹೋಗಿದ್ದಾರೆ. ಗ್ರಾಮದಲ್ಲಿ ಹಿರಿಯ ಭಜನಾ ಮಂಡಳಿಯ ತಂಡವೊಂದು ಐದು ದಿನಗಳ ಕಾಲ ಗ್ರಾಮದಲ್ಲಿರುವ ಎಲ್ಲಾ ದೇವರುಗಳ ಮುಂದೆ ರಾತ್ರಿ 8 -10 ಗಂಟೆಯವರೆಗೆ ಭಜನೆ ಕಾರ್ಯಕ್ರಮ ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ ಮಳೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಹಾಕಿದ ಬೆಳೆಗಳು ಒಣಗುತ್ತಿವೆ. ರೈತರು ಮಳೆಗಾಗಿ ಆಕಾಶವನ್ನು ಎದುರು ನೋಡುತ್ತಿದ್ದು, ಮಳೆ ಬರುತ್ತದೆ ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ದೇವರಿಗೆ ಚಿಲ್ಲರೆ ಹಣ ಹರಕೆ
ದೇವರಿಗೆ ಹೂವು ಎಸೆಯುವುದು ನೋಡಿದ್ದೇವೆ, ಕೇಳಿದ್ದೇವೆ. ಚಿಲ್ಲರೆ ಹಣವನ್ನು ಹುಂಡಿಗೆ ಅಥವಾ ಆರತಿ ತಟ್ಟೆಗೆ ಹಾಕುವುದನ್ನೂ ನಾವೆಲ್ಲ ನೋಡಿದ್ದೇವೆ. ಆದರೆ ಈ ದೇವರ ಮೇಲೆ ಹೂವಿನ ಬದಲಿಗೆ ಚಿಲ್ಲರೆ ಹಣವನ್ನು ಎಸೆದು ಭಕ್ತಿಯನ್ನು ಮೆರೆಯುವ ವಿಶೇಷ ಜಾತ್ರೆಯೊಂದು ನಡೆಯುತ್ತದೆ.
ಇಂತಹ ಜಾತ್ರೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಕಂಚಿಪುರದ ಗ್ರಾಮದಲ್ಲಿ ಎರಡು ದಿನಗಳ ಕಾಲ ನಡೆಯುತ್ತದೆ. ರಾತ್ರಿ ಉತ್ತರೆ ಬೆಟ್ಟದಲ್ಲಿ ಹಿಂದೆ ವರದರಾಜನ ಭಕ್ತರಾದ ಸಿದ್ದರು ನೆಲೆಸಿದ್ದರು ಎಂಬ ನಂಬಿಕೆ ಭಕ್ತರಲ್ಲಿದೆ. ಈ ಸಿದ್ದರ ಕುರುಹುಗಳಿಗೆ ಬುತ್ತಿ ಬಾನದ ಎಡೆ ಹಾಕಿ ಪೂಜೆ ಸಲ್ಲಿಸುವ ಮೂಲಕ ಅಲ್ಲಿ ಮೊದಲನೇ ಅಂಬಿನೋತ್ಸವ ನಡೆಸಿದರು. ಇದೇ ರೀತಿ ಉತ್ತರೆ ಬೆಟ್ಟದ ಬೇರೆ ಬೇರೆ ಸ್ಥಳದಲ್ಲಿ 9 ಬಾರಿ ಅಂಬಿನೋತ್ಸವ ಆಚರಿಸಲಾಗುತ್ತದೆ.
ಚಿಲ್ಲರೆ ದುಡ್ಡು ಕಂಚೀವರದರಾಜ ಸ್ವಾಮಿಗೆ ಬಲು ಇಷ್ಟ
ಭಕ್ತರಿಂದ ಚಿಲ್ಲರೆ ದುಡ್ಡು ತೂರಿಸಿಕೊಳ್ಳುವುದೆಂದರೆ ಕಂಚೀವರದರಾಜ ಸ್ವಾಮಿಗೆ ಬಲು ಇಷ್ಟ. ಹಾಗಾಗಿ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಯ ಪ್ರಾರ್ಥಿಸಿ ಸುಮಾರು ನೂರರಿಂದ ಲಕ್ಷಗಟ್ಟಲೆ ಚಿಲ್ಲರೆ ಹಣವನ್ನು ಸ್ವಾಮಿಯ ಮೂರ್ತಿ ಮೇಲೆ ಹೂಮಳೆಯಂತೆ ತೂರಿ ಹರಕೆ ಸಮರ್ಪಿಸುತ್ತಾರೆ. ದುಡ್ಡು ತೂರಿದಷ್ಟು ದೇವರ ಮಹಿಮೆ ಹೆಚ್ಚುತ್ತದೆ. ದೇವರ ಮೇಲೆ ಎಸೆದ ಹಣವನ್ನು ಆಯ್ದುಕೊಳ್ಳಲು ಭಕ್ತರು ನಾ ಮುಂದು ತಾ ಮುಂದು ಎಂದು ಟವಲ್ ಹಿಡಿದು ಮುಗಿಬೀಳುತ್ತಾರೆ. ಆ ಹಣವನ್ನು ಆಯ್ದುಕೊಂಡರೆ ಕಷ್ಟಗಳು ನಿವಾರಣೆಯಾಗಿ ಒಳಿತಾಗಲಿದೆ ಎಂಬ ನಂಬಿಕೆ ಭಕ್ತರಲ್ಲಿದೆ.
ವರದರಾಜ ದೇವರ ಜಾತ್ರೆಗೆ ಹೊರರಾಜ್ಯದ ಭಕ್ತರು
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಕಂಚೀಪುರದ ವರದರಾಜ ದೇವರ ಜಾತ್ರೆಗೆ ಹೊರ ರಾಜ್ಯಗಳಿಂದಲೂ ಭಕ್ತರು ಬರುತ್ತಾರೆ. ಹೀಗೆ ಬಂದ ಭಕ್ತರು ತಾವು ಅಂದುಕೊಂಡ ಬೇಡಿಕೆಗಳು ಈಡೇರಿದ್ದು, ಇಂತಿಷ್ಟು ಹಣವನ್ನು ತೂರುತ್ತೇವೆ ಎಂದು ಅಂದುಕೊಂಡಿರುತ್ತಾರೆ. ಹಾಗೆಯೇ ಜಾತ್ರೆಗೆ ಬಂದಿದ್ದ ಹಲವಾರು ಭಕ್ತರೆಲ್ಲರೂ ತಮ್ಮ ಬೇಡಿಕೆ ಈಡೇರಿದ್ದು, ಚಿಲ್ಲರೆ ಕಾಸು ಎಸೆದು ಹರಕೆಯನ್ನು ತೀರಿಸುತ್ತಾರೆ ಎನ್ನಬಹುದು. ಪ್ರತಿ ವರ್ಷ ಅದ್ಧೂರಿಯಾಗಿ ನಡೆಯಬೇಕಿದ್ದ ಜಾತ್ರೆ ಕೊರೊನಾ ಹಿನ್ನೆಲೆಯಲ್ಲಿ ದೇವರ ಜಾತ್ರೆಯನ್ನು ಸರಳವಾಗಿ ಆಚರಿಸಲಾಯಿತು.
Recommended Video
ರೈತನ ಮೇಲೆ ಹಲ್ಲೆ ಆರೋಪ
ಅನ್ನದಾತನ ಮೇಲೆ ಆಹಾರ ನಿರೀಕ್ಷಕನೊಬ್ಬ ಹಲ್ಲೆ ಮಾಡಿರುವ ಆರೋಪವೊಂದು ಚಿತ್ರದುರ್ಗ ಜಿಲ್ಲೆಯಲ್ಲಿ ಕೇಳಿ ಬಂದಿದೆ. ಚಿತ್ರದುರ್ಗ ನಗರದ ಫುಡ್ ಇನ್ಸ್ಪೆಕ್ಟರ್ ಮೈಲಾರಪ್ಪ ರೈತನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ರೈತ ಚಿತ್ರದುರ್ಗ ಜಿಲ್ಲಾಧಿಕಾರಿ ಕವಿತಾ. ಎಸ್. ಮನ್ನಿಕೇರಿ ಮುಂದೆ ಅಳಲು ತೋಡಿಕೊಂಡಿದ್ದಾನೆ.
ಚಿತ್ರದುರ್ಗ ಜಿಲ್ಲೆಯ ಜನ್ನೇನಹಳ್ಳಿ ಗ್ರಾಮದ ಮೋಹನ್ ರೆಡ್ಡಿ ಹಲ್ಲೆಗೊಳಗಾದ ರೈತನಾಗಿದ್ದು. APMC ಮಾರುಕಟ್ಟೆಗೆ ರಾಗಿ ತರುವಾಗ ಮಾರ್ಗ ಮಧ್ಯೆ ಕಳ್ಳ ಎಂದು ಹಿಡಿದು ರೈತನನ್ನು ಥಳಿಸಿದ್ದಾರೆ ಎಂದು ರೈತ ಆರೋಪಿಸಿದ್ದಾನೆ. ಆಹಾರ ನಿರೀಕ್ಷಕ ಮೈಲಾರಪ್ಪ ಹಲ್ಲೆ ಮಾಡಿ ಎರಡು ಚೀಲ ರಾಗಿ ಮನೆಗೆ ಕೊಂಡೊಯ್ದಿದ್ದಾರೆ ಎಂದು ಫುಡ್ ಇನ್ಸ್ಪೆಕ್ಟರ್ ಮೈಲಾರಪ್ಪನ ವಿರುದ್ಧ ರೈತರು ಗಂಭೀರ ಆರೋಪ ಮಾಡಿದ್ದಾರೆ.
ಇನ್ನು ಮಟಮಟ ಮಧ್ಯಾಹ್ನವೇ ಆಹಾರ ನಿರೀಕ್ಷಕ ಮದ್ಯ ಸೇವನೆ ಮಾಡಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ದಾನೆ. ಮೈಲಾರಪ್ಪನನ್ನು ಕಂಡು ಡಿಸಿ ಮನ್ನಿಕೇರಿ ಗರಂ ಆಗಿದ್ದು, ಕೂಡಲೇ ಮದ್ಯಪಾನ ಮಾಡಿದ್ದಾರಾ ಎಂದು ಟೆಸ್ಟ್ ಮಾಡುವಂತೆ ಪೊಲೀಸರಿಗೆ ಸೂಚಿಸಿದರು.