ಗೂಳಿಹಟ್ಟಿ ಶೇಖರ್ ತಾಯಿ ಮತಾಂತರ; ಪೊಲೀಸ್ ತನಿಖಾ ವರದಿ
ಚಿತ್ರದುರ್ಗ, ಮಾರ್ಚ್ 07; ಹೊಸದುರ್ಗ ಕ್ಷೇತ್ರದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ತಾಯಿ ಪುಟ್ಟಮ್ಮ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಭಾರೀ ಚರ್ಚೆಗೆ ಕಾರಣವಾಗಿರುವ ಈ ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸಿದ್ದಾರೆ.
ಪುಟ್ಟಮ್ಮ ಬಲವಂತದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂಬುದಕ್ಕೆ ಪೂರಕ ಸಾಕ್ಷ್ಯಗಳು ಸಿಕ್ಕಿಲ್ಲ, ಯಾವುದೇ ದಾಖಲೆಗಳಿಲ್ಲ ಎಂದು ಪೊಲೀಸರ ತನಿಖಾ ವರದಿ ಹೇಳಿದೆ. ಪುಟ್ಟಮ್ಮ ಅವರು ಕ್ರಿಶ್ಚಿಯನ್ ಧರ್ಮದ ಆಚರಣೆಗಳನ್ನು ಮಾಡುತ್ತಿರುವುದು ಖಚಿತವಾಗಿದೆ.
ಶಾಸಕ ಗೂಳಿಹಟ್ಟಿ ಶೇಖರ್ ತಾಯಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ
ಬಲವಂತದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂಬ ಆರೋಪ ಮೂರು ತಿಂಗಳ ಹಿಂದೆ ಕೇಳಿ ಬಂದಿತ್ತು. ಆದ್ದರಿಂದ, ಪೊಲೀಸರು ಸ್ವಯಂ ಪ್ರೇರಿತವಾಗಿ ತನಿಖೆಯನ್ನು ಕೈಗೊಂಡಿದ್ದರು. ಬಲವಂತದ ಮತಾಂತರ ಸಾಬೀತಾದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.
ಅಣ್ಣನಿಂದ ಅತ್ಯಾಚಾರ, ತಮ್ಮನಿಂದ ಮತಾಂತರ
ಪುಟ್ಟಮ್ಮ ಹೊಸದುರ್ಗ ಪಟ್ಟಣದ ಹಿರಿಯೂರು ರಸ್ತೆಯಲ್ಲಿರುವ ಚರ್ಚ್ಗೆ ಪ್ರತಿ ಭಾನುವಾರ ಪ್ರಾರ್ಥನೆಗೆ ತೆರಳುತ್ತಾರೆ. ಚರ್ಚ್ನ ಸಿಬ್ಬಂದಿಗಳು ಸಹ ಇದನ್ನು ಒಪ್ಪಿಕೊಂಡಿದ್ದಾರೆ. ಸ್ವಯಂ ಪ್ರೇರಿತವಾಗಿ ಚರ್ಚ್ಗೆ ಹೋಗುತ್ತಿದ್ದೇನೆ ಎಂದು ಪುಟ್ಟಮ್ಮ ಪೊಲೀಸರಿಗೆ ಹೇಳಿಕೆಯನ್ನು ಸಹ ನೀಡಿದ್ದಾರೆ.
ಕಾನೂನು ಬಾಹಿರ ಮತಾಂತರ ನಿಷೇಧ ಸುಗ್ರೀವಾಜ್ಞೆ: ಉ.ಪ್ರದೇಶ ರಾಜ್ಯಪಾಲರ ಅಂಕಿತ
ಚಿತ್ರದುರ್ಗ ಎಸ್ಪಿ ಹೇಳಿಕೆ
ಚಿತ್ರದುರ್ಗದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ ಈ ಕುರಿತು ಮಾಹಿತಿ ಮಾತನಾಡಿದ್ದಾರೆ. "ಮತಾಂತರ ಆರೋಪದ ಕುರಿತು ಸ್ವಯಂ ಪ್ರೇರಿತವಾಗಿ ತನಿಖೆ ನಡೆಸಲಾಯಿತು. ಪುಟ್ಟಮ್ಮ ಅವರ ಹೇಳಿಕೆಯನ್ನು ಸಹ ಪಡೆಯಲಾಗಿದೆ. ಸ್ವಯಂ ಪ್ರೇರಿತವಾಗಿ ಚರ್ಚ್ಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದಾರೆ. ಬಲವಂತದ ಮತಾಂತರ ಕಂಡು ಬಂದರೆ ಕ್ರಮ ಕೈಗೊಳ್ಳಲಾಗುತ್ತದೆ" ಎಂದು ಹೇಳಿದ್ದಾರೆ.
ಸರ್ಕಾರಕ್ಕೆ ವರದಿ ಸಲ್ಲಿಕೆ
ಪೊಲೀಸ್ ಅಧಿಕಾರಿಗಳ ತಂಡ ಹೊಸದುರ್ಗದ ಎಲ್ಲಾ ಚರ್ಚ್ಗಳ ಧಾರ್ಮಿಕ ಮುಖಂಡರು, ಕ್ರೈಸ್ತ ಧರ್ಮ ಪಾಲನೆ ಮಾಡುತ್ತಿರುವ ಹಲವರ ಹೇಳಿಕೆಗಳನ್ನು ಪಡೆದು ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಜಿಲ್ಲೆಯಲ್ಲಿ ಬಲವಂತದ ಮತಾಂತರ ನಡೆದಿಲ್ಲ ಎಂದು ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.
ಚರ್ಚ್ನಲ್ಲಿ ನೆಮ್ಮದಿ ಸಿಕ್ಕಿದೆ
ಶಾಸಕರ ತಾಯಿ ಪುಟ್ಟಮ್ಮ ಪತಿ ದಿವಾಕರಪ್ಪ ಮತ್ತು ಪುತ್ರ ತಿಪ್ಪೇಸ್ವಾಮಿ ಸಾವಿನ ಬಳಿಕ ಹಿಂದೂ ಧರ್ಮದ ದೇವರ ಮೇಲೆ ಬೇಸರ ವ್ಯಕ್ತಪಡಿಸುತ್ತಿದ್ದರು. ಚರ್ಚ್ಗೆ ಹೋಗಲು ಪ್ರಾರಂಭಿಸಿದ್ದರು ಎಂಬ ಮಾಹಿತಿ ಸಿಕ್ಕಿತ್ತು. "ಮಗನ ಸಾವಿನ ಬಳಿಕ ದೇವರ ಮೇಲಿನ ನಂಬಿಕೆ ಹೋಗಿದೆ. ದೇವರ ಪೂಜೆ ಮಾಡುವುದು ಬಿಟ್ಟಿದ್ದೇನೆ. ಚರ್ಚ್ಗೆ ಬರಲು ಪ್ರಾರಂಭಿಸಿದ ಮೇಲೆ ನೆಮ್ಮದಿ ಸಿಕ್ಕಿದೆ" ಎಂದು ಪುಟ್ಟಮ್ಮ ಹೇಳಿಕೆ ನೀಡಿದ್ದಾರೆ.
ಪುಟ್ಟಮ್ಮ ಮತಾಂತರಗೊಂಡಿಲ್ಲ
"ಚರ್ಚ್ಗೆ ಬಂದು ಪ್ರಾರ್ಥನೆಯಲ್ಲಿ ಪಾಲ್ಗೊಂಡ ಕಾರಣಕ್ಕೆ ಮತಾಂತರವಾಗುವುದಿಲ್ಲ. ಶಾಸಕರ ತಾಯಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿಲ್ಲ" ಎಂದು ಹೊಸದುರ್ಗದ ಹಿರಿಯೂರು ರಸ್ತೆಯಲ್ಲಿರುವ ಚರ್ಚ್ನ ಫಾದರ್ ಜಾರ್ಜ್ ಸ್ಟೀವನ್ ಡಿಸೋಜ ತಿಳಿಸಿದ್ದಾರೆ.
ಶಾಸಕರು ಹೇಳುವುದೇನು?
ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಈ ಕುರಿತು ಹೇಳಿಕೆ ನೀಡಿದ್ದು, "ನನ್ನ ತಾಯಿ ಅನಧಿಕೃತವಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಬಡತನ, ಮಾನಸಿಕ ತೊಳಲಾಟದಲ್ಲಿ ಇರುವವರನ್ನು ಮೋಡಿ ಮಾಡಿ ಚರ್ಚ್ಗೆ ಕರೆಸುವ ವ್ಯವಸ್ಥಿತ ಜಾಲ ಜಿಲ್ಲೆಯಲ್ಲಿ ಸಕ್ರಿಯವಾಗಿದೆ" ಎಂದು ಆರೋಪಿಸಿದ್ದಾರೆ.