ವಾರದ ಹಿಂದೆ ನಾಪತ್ತೆಯಾಗಿದ್ದ ಬಾಲಕಿ ಶವ ಸಿಕ್ಕಿದ್ದು ತೋಟದ ಬಾವಿಯಲ್ಲಿ
ಚಿತ್ರದುರ್ಗ, ಡಿಸೆಂಬರ್ 21: ವಾರದ ಹಿಂದೆ ನಾಪತ್ತೆಯಾಗಿದ್ದ ಬಾಲಕಿಯ ಮೃತದೇಹ ಬಾವಿಯಲ್ಲಿ ಪತ್ತೆಯಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಆದಿವಾಲ ಭೋವಿ ಕಾಲೋನಿಯಲ್ಲಿ ನಡೆದಿದೆ.
ಮೃತ ಬಾಲಕಿ ಹತ್ತನೇ ತರಗತಿ ವಿದ್ಯಾರ್ಥಿನಿ ಪಲ್ಲವಿ (15) ಎಂದು ಗುರುತಿಸಲಾಗಿದೆ. ಕಳೆದ ಒಂದು ವಾರದಿಂದ ಪಲ್ಲವಿ ನಾಪತ್ತೆಯಾಗಿದ್ದಳು. ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ಕಾಣೆಯಾಗಿದ್ದಾರೆಂದು ಪ್ರಕರಣ ದಾಖಲಿಸಲಾಗಿತ್ತು.
ತಿಥಿಗೆಂದು ಬಂದಿದ್ದ ಯೋಧನ ದುರ್ಮರಣ; 20 ಗಂಟೆ ನಂತರ ಸಿಕ್ಕಿತು ಮೃತದೇಹ
ಆದರೆ ಇಂದು ಗ್ರಾಮದ ಹೊರವಲಯದ ತೋಟದ ಬಾವಿಯೊಂದರಲ್ಲಿ ಶವ ಪತ್ತೆಯಾಗಿದೆ. ಬಾಲಕಿಯ ಸಾವಿನ ಕುರಿತು ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. "ಮಲ್ಲೇಶ್ ಎಂಬ ಯುವಕ ಮಗಳ ಸಾವಿಗೆ ಕಾರಣವಾಗಿದ್ದಾನೆ. ಈತ ನಮ್ಮ ಮನೆಗೆ ಬಂದು ನನ್ನ ಮಗಳನ್ನು ಮದುವೆಯಾಗಲು ಕೇಳಿದ್ದನು. ಇದಕ್ಕೆ ಮನೆಯಲ್ಲಿ ಯಾರೂ ಒಪ್ಪಿಗೆ ನೀಡಿರಲಿಲ್ಲ. ಹೀಗಾಗಿ ಮಗಳನ್ನು ಕೊಲೆ ಮಾಡಲಾಗಿದೆ" ಎಂದು ಮೃತಳ ತಾಯಿ ಆರೋಪಿಸಿದ್ದಾರೆ.
ಸ್ಥಳಕ್ಕೆ ಹಿರಿಯೂರು ಪೊಲೀಸರು ಭೇಟಿ ನೀಡಿದ್ದಾರೆ. ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.