ಚಿತ್ರದುರ್ಗ; 20 ಅಡಿ ಎತ್ತರದ ಗಣೇಶ ಮೂರ್ತಿ ಪ್ರತಿಷ್ಠಾಪನೆ
ಚಿತ್ರದುರ್ಗ, ಸೆಪ್ಟೆಂಬರ್ 10; ದೇಶಾದ್ಯಂತ ಇಂದು ಗಣೇಶ ಚತುರ್ಥಿ ಆಚರಣೆ ಸಂಭ್ರಮದಿಂದ ನಡೆಯುತ್ತಿದೆ. ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ವಿಶೇಷ ಸ್ಥಾನವಿದೆ. ಮಾನವನ ದಿನನಿತ್ಯದ ಬದುಕಿನಲ್ಲಿ ಜಂಜಾಟಗಳನ್ನು ಕೈಬಿಟ್ಟು ಜೀವನವನ್ನು ಹೊಸ ಆಯಾಮದಿಂದ ನೋಡಲು ಮಾನವೀಯ ಮೌಲ್ಯಗಳು, ಸಂಬಂಧಗಳು ಗಟ್ಟಿತನಗೊಳ್ಳಲು ಇಂತಹ ಹಬ್ಬಗಳು ಪ್ರೇರಣೆ ಆಗಿರುತ್ತವೆ.
ಗಣೇಶ ಉತ್ಸವ ಬಂತೆಂದರೆ ನಾಡಿನಾದ್ಯಂತ ತಿಂಗಳುಗಟ್ಟಲೆ ಗಣಪತಿ ಉತ್ಸವಕ್ಕೆ ವೇದಿಕೆಗಳು ಸಜ್ಜುಗೊಳ್ಳುತ್ತವೆ. ಉತ್ಸವ ಕೇವಲ ಆಚರಣೆಗೆ ಮಾತ್ರ ಸೀಮಿತವಾಗಿರುವುದಿಲ್ಲ ಇದು ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಎಲ್ಲರಲ್ಲೂ ಒಂದುಗೂಡಿಸುತ್ತದೆ.
ಸಾರ್ವಜನಿಕ ಗಣೇಶೋತ್ಸವ ಆಚರಣೆ; ಮಾರ್ಗಸೂಚಿ
ಗಣೇಶ ಚತುರ್ಥಿಯನ್ನು ಅತ್ಯಂತ ಸಂಭ್ರಮ-ಸಡಗರದಿಂದ ಮಾತ್ರವಲ್ಲದೆ ಭಕ್ತಿ ಭಾವಪೂರ್ಣವಾಗಿ ಆರಾಧಿಸುವ ಪದ್ಧತಿಯನ್ನು ಭಾರತದಲ್ಲಿ ಅನಾದಿಕಾಲದಿಂದಲೂ ಕಾಣಬಹುದು. ಜನರು ಮನೆಗಳಲ್ಲೂ ಕೂಡ ಹಬ್ಬವನ್ನು ಆಚರಿಸುತ್ತಾರೆ. ಗಣಪತಿ ಉತ್ಸವ ಈಗ ಸಾಮಾಜಿಕ ಉತ್ಸವವಾಗಿದೆ ಎಂದರೆ ತಪ್ಪಾಗಲಾರದು.
ಜಿಲ್ಲೆಗಳಲ್ಲಿ ಗಣೇಶೋತ್ಸವ ಆಚರಣೆ; ಮಾರ್ಗಸೂಚಿ
ಕೋವಿಡ್ ಮಹಾಮಾರಿ ಮೂರನೇ ಅಲೆ ಹಿನ್ನೆಲೆಯಲ್ಲಿ ಹಬ್ಬ ಆಚರಿಸಲು ಸರ್ಕಾರದಿಂದ ಕಠಿಣ ನಿಯಮಗಳನ್ನು ಜಾರಿ ಮಾಡಲಾಗಿತ್ತು. ಈ ನಿಯಮಗಳಿಗೆ ಹಿಂದೂಪರ ಸಂಘಟನೆಗಳು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದವು. ಅಂತಿಮವಾಗಿ ಸಂಘಟನೆಗಳ ಒತ್ತಡಕ್ಕೆ ಮಣಿದ ಸರ್ಕಾರ ಷರತ್ತುಗಳನ್ನು ಹಾಕಿ ಸಾರ್ವಜನಿಕ ಗಣೇಶೋತ್ಸವ ಆಚರಿಸಲು ಒಪ್ಪಿಗೆ ನೀಡಿದೆ.
ಚಿತ್ರದುರ್ಗದಲ್ಲಿ ಸರ್ಕಾರದ ಆದೇಶದಕ್ಕೆ ಸೆಡ್ಡು ಹೊಡೆದು ನಗರ ಹಾಗೂ ಗ್ರಾಮೀಣ ಪ್ರದೇಶದ ವಿವಿಧ ಭಾಗಗಳಲ್ಲಿ ಗಣೇಶೋತ್ಸವ ಬಹಳ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದೆ.
ಚಿತ್ರದುರ್ಗ ನಗರದ ಸೈನ್ಸ್ ಕಾಲೇಜ್ ಮುಂಭಾಗದ ಜೈನ ಸಮುದಾಯದ ಆವರಣದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ವತಿಯಿಂದ 20 ಅಡಿ ಎತ್ತರದ ಗಣೇಶ ಮೂರ್ತಿ ಪ್ರತಿಷ್ಠಾಪಿತ ಗೊಂಡಿದೆ. 21 ದಿನಗಳ ಕಾಲ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬವನ್ನು ಕಳೆದ 9 ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಇದೀಗ ರಾಜ್ಯದಲ್ಲಿ ಚಿತ್ರದುರ್ಗ ಗಣೇಶೋತ್ಸವ ಪ್ರಖ್ಯಾತಿ ಪಡೆದುಕೊಂಡಿದೆ.
ಗಣೇಶ ಹಬ್ಬದ ವಿಶೇಷ: ನಂಬಿ ಬಂದವರಿಗೆ ವರವನ್ನು ಕರುಣಿಸುವ ಹೊಳಲ್ಕೆರೆ ಪ್ರಸನ್ನ ಗಣಪ
ಉಳಿದಂತೆ ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು, ಹೊಸದುರ್ಗ ಸೇರಿದಂತೆ ತಾಲೂಕಿನಲ್ಲೂ ಸಹ ಗಣೇಶ ಚತುರ್ಥಿ ಆಚರಣೆ ಮಾಡಲಾಗಿದೆ. ಹೊಳಲ್ಕೆರೆ ಪಟ್ಟಣದ ಪ್ರಸನ್ನ ಗಣಪತಿ ದೇವಾಲಯದಲ್ಲಿ ವಿಘ್ನ ವಿನಾಶಕನಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.
ನಗರದ ಅನೇಕ ಭಕ್ತರು ಬೆಳಗಿನಿಂದಲೇ ವಿನಾಯಕನ ದರ್ಶನ ಪಡೆದರು. ಇನ್ನು ಹಿರಿಯೂರು ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 4ರ ಗಣೇಶ ದೇವಾಲಯದಲ್ಲಿ ಸಹ ಗಣೇಶನಿಗೆ ಪೂಜೆ ಮಾಡಲಾಯಿತು. ಮನೆಗಳಲ್ಲಿ ಸಹ ವಿನಾಯಕನ ಮೂರ್ತಿ ಪ್ರತಿಷ್ಠಾಪನೆ ಮಾಡಿ ಭಕ್ತಿ ಭಾವದಿಂದ ಪೂಜೆ ನೆರವೇರಿಸಿ ಇಷ್ಟಾರ್ಥಗಳನ್ನು ಈಡೇರಿಸುವಂತೆ ಬೇಡಿಕೊಳ್ಳಲಾಗಿದೆ.
ಗಣ್ಯರ ಭೇಟಿ : ಚಿತ್ರದುರ್ಗ ನಗರದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ಪ್ರತಿಷ್ಠಾನಗೊಂಡಿರುವ ಗಣೇಶ ಮೂರ್ತಿಗೆ ಶಾಸಕ ಜಿ. ಎಚ್. ತಿಪ್ಪಾರೆಡ್ಡಿ, ಹೊಸದುರ್ಗ ಕುಂಚಿಟಿಗ ಶ್ರೀಗಳು ಸೇರಿದಂತೆ ಮತ್ತಿತರರು ಗಣ್ಯರು, ಸ್ವಾಮಿಜಿಗಳು ಹಾಗೂ ಮುಖಂಡರು ಭೇಟಿ ನೀಡಿ ಪೂಜೆ ಸಲ್ಲಿಸಿದರು.
ನಿಯಮ ಮರೆತ ಸಮಿತಿಗಳು; ಸಾರ್ವಜನಿಕ ಗಣೇಶೋತ್ಸವ ಸಂದರ್ಭದಲ್ಲಿ ಹಿಂದೂ ಪರ ಸಂಘಟನೆಗಳು ಸರ್ಕಾರಕ್ಕೆ ಸೆಡ್ಡು ಹೊಡೆದು ಆಚರಣೆಯಲ್ಲಿ ಪಾಲ್ಗೊಂಡಿವೆ. ಸರ್ಕಾರದ ನಿಯಮದಂತೆ 4 ಅಡಿ ಎತ್ತರದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಎಂದು ಮಾರ್ಗಸೂಚಿ ಹೊರಡಿಸಲಾಗಿದೆ.
ಸರ್ಕಾರದ ಆದೇಶಕ್ಕೆ ಹಿಂದೂಪರ ಸಂಘಟನೆಗಳು ಹಾಗೂ ಸಮಿತಿಗಳು ಬೆಲೆ ಕೊಟ್ಟಿಲ್ಲ. 4 ಅಡಿಗಿಂತ ಹೆಚ್ಚು ಎತ್ತರದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಚಿತ್ರದುರ್ಗ ನಗರದಲ್ಲಿ ಹಿಂದೂ ಮಹಾಗಣಪತಿ 20 ಅಡಿ ಎತ್ತರವಿದೆ.
ಮತ್ತೊಂದು ಕಡೆ ಜೋಗಿಮಟ್ಟಿ 4ನೇ ಕ್ರಾಸ್ ಬಳಿ ಏಕತಾ ಹಿಂದೂ ಮಹಾಗಣಪತಿ ಮೂರ್ತಿ 9 ಅಡಿ ಎತ್ತರವಿದೆ. ಜಿಲ್ಲೆಯಾದ್ಯಂತ ಸರ್ಕಾರದ ಆದೇಶದ ನಿಯಮಗಳನ್ನು ಮೀರಿ ಗಣೇಶೋತ್ಸವ ಆಚರಣೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
Recommended Video
ಸಾರ್ವಜನಿಕ ಗಣೇಶೋತ್ಸವ ಆಚರಣೆ ವೇಳೆ ನಿಯಮ ಉಲ್ಲಂಘನೆಯಾದರೆ ಸರ್ಕಾರದ ಮಾರ್ಗ ಸೂಚಿ ಪ್ರಕಾರ ಯಾವ ರೀತಿ ಕ್ರಮವನ್ನು ಜಿಲ್ಲಾಡಳಿತ ತೆಗೆದುಕೊಳ್ಳುತ್ತದೆ? ಎಂದು ಕಾದು ನೋಡಬೇಕಿದೆ.