ಚಿತ್ರದುರ್ಗಕ್ಕೆ ನೂತನ ಎಸ್ಪಿ; ಓಬವ್ವನ ಮಣ್ಣಲ್ಲಿ ಮಹಿಳಾ ಅಧಿಕಾರಿಗಳ ಆಡಳಿತ
ಚಿತ್ರದುರ್ಗ, ಫೆಬ್ರುವರಿ 1: ಓಬವ್ವನ ನಾಡು ಚಿತ್ರದುರ್ಗದ ಆಡಳಿತ ಇದೀಗ ಮಹಿಳೆಯರ ಕೈಯಲ್ಲಿದೆ. ಚಿತ್ರದುರ್ಗ ಜಿಲ್ಲಾ ಪೊಲೀಸ್ ನೂತನ ವರಿಷ್ಠಾಧಿಕಾರಿಯಾಗಿ ಜಿ.ರಾಧಿಕಾ ಅವರ ನೇಮಕಕ್ಕೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಎಸ್ ಪಿ ರಾಧಿಕಾ ಅವರ ನೇಮಕದ ಆದೇಶ ಹೊರಡಿಸುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದುರ್ಗ ಜಿಲ್ಲೆಯ ಆಡಳಿತ ಮಹಿಳೆಯರ ಕೈಯಲ್ಲಿದೆ ಎಂಬ ಚರ್ಚೆಗಳೂ ಹರಿದಾಡುತ್ತಿವೆ. ಚಿತ್ರದುರ್ಗ ಜಿಲ್ಲಾಧಿಕಾರಿಯಾಗಿ ವಿನೋತ್ ಪ್ರಿಯಾ, ಜಿಲ್ಲಾ ಪಂಚಾಯಿತಿ ಸಿಇಓ ಸತ್ಯಭಾಮಾ ಹಾಗೂ ಜಿಲ್ಲಾ ಪಂಚಾಯಿತ ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್ ಪ್ರಮುಖ ಹುದ್ದೆಗಳಲ್ಲಿ ಆಡಳಿತ ನಡೆಸುತ್ತಿದ್ದರು. ಇದೀಗ ರಾಧಿಕಾ ಅವರು ಎಸ್ ಪಿ ಆಗಿ ವರ್ಗಾವಣೆ ಆಗಿದ್ದಾರೆ. ಈ ಹಿಂದೆ ಡಾ.ಕೆ.ಅರುಣ್ ಕಾರ್ಯನಿರ್ವಹಿಸುತಿದ್ದರು.
ಚಿತ್ರದುರ್ಗದಲ್ಲಿ ವನಿತೆಯರ ಆಡಳಿತ
ಈ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ಅರುಣ್ ಅವರನ್ನು ಬೆಂಗಳೂರಿಗೆ ವರ್ಗಾಯಿಸಲಾಗಿದೆ. ಜಿ ರಾಧಿಕಾ ಅವರ ಪ್ರವೇಶದಿಂದಾಗಿ ಚಿತ್ರದುರ್ಗ ವನಿತೆಯರ ಸಾಮ್ರಾಜ್ಯವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಜಿಲ್ಲಾಡಳಿತದ ಪ್ರಮುಖ ಸ್ಥಾನಗಳಲ್ಲಿ ಮಹಿಳಾ ಅಧಿಕಾರಿಗಳೇ ಇದ್ದಾರೆ. ಈಗಾಗಲೇ ಜಿಲ್ಲಾ ಡಿಸಿ ಮತ್ತು ಸಿಇಒ ದಕ್ಷ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ನೂತನವಾಗಿ ರಾಧಿಕಾ ಅವರು ಎಸ್ಪಿಯಾಗಿ ಪ್ರವೇಶಿಸಿದ್ದಾರೆ.
ನೂತನ ಡಿಜಿ & ಐಜಿಪಿಯಾಗಿ ಪ್ರವೀಣ್ ಸೂದ್ ಅಧಿಕಾರ ಸ್ವೀಕಾರ
ಜಿಲ್ಲೆಯಲ್ಲಿ ಹೆಸರು ಪಡೆದಿರುವ ವಿನೋತ್ ಪ್ರಿಯಾ
ಕಳೆದ ಎರಡು ವರ್ಷಗಳಿಂದ ಚಿತ್ರದುರ್ಗ ಜಿಲ್ಲಾಧಿಕಾರಿಯಾಗಿ ವಿನೋತ್ ಪ್ರಿಯಾ ಅಧಿಕಾರ ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ ಐವರು ಪುರುಷ ಶಾಸಕರಿದ್ದು, ಇದರಲ್ಲಿ ಒಬ್ಬರು ಸಚಿವರಿದ್ದಾರೆ. ಚಿತ್ರದುರ್ಗದಲ್ಲಿ ಡಿಸಿಯವರು ದಕ್ಷ ಆಡಳಿತ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿನೋತ್ ಪ್ರಿಯಾ ಅವರಿಂದ ಜಿಲ್ಲೆಯಲ್ಲಿ ಕೆಲವು ಗ್ರಾಮ ವಾಸ್ತವ್ಯ ಕಾರ್ಯಕ್ರಮಗಳು, ಜಿಲ್ಲೆಯಲ್ಲಿ ನಡೆಯುವ ಅಕ್ರಮ ಮರಳು ಗಣಿಗಾರಿಕೆಗೆ ಕಡಿವಾಣ, ರೈತರ ಸಮಸ್ಯೆಗಳಿಗೆ ಸ್ಪಂದಿಸುವುದು ಮತ್ತಿತರ ಪ್ರಮುಖ ಕಾರ್ಯಗಳಾಗಿವೆ. ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಪ್ರಮುಖ ನಿರ್ಧಾರ ಕೈಗೊಳ್ಳುವ ವಿಚಾರದಲ್ಲಿ ಡಿಸಿ ವಿನೋತ್ ಪ್ರಿಯಾ ಪ್ರಮುಖ ಪಾತ್ರ ವಹಿಸಿದ್ದಾರೆ.
ಸಿಇಒ ಸತ್ಯಭಾಮಾ ಪ್ರಾಮಾಣಿಕ ಕೆಲಸ
ಚಿತ್ರದುರ್ಗ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಣದಿಕಾರಿ ಸತ್ಯಭಾಮಾ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತಿದ್ದಾರೆ. ಕಳೆದ ವರ್ಷ ಚಿತ್ರದುರ್ಗ ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿತ್ತು. ಕುಡಿಯುವ ನೀರಿನ ಸಮಸ್ಯೆ ಸಾಕಷ್ಟು ಉಲ್ಬಣಗೊಂಡಿತ್ತು. ಇಂಥ ಸಮಸ್ಯೆಗಳನ್ನು ದಿಟ್ಟವಾಗಿ ಎದುರಿಸುವಲ್ಲಿ ಸತ್ಯಭಾಮಾ ಯಶಸ್ವಿಯಾಗಿದ್ದರು. ಬರಗಾಲದಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡುವಲ್ಲಿ ಅಕ್ರಮ ನಡೆಯುತಿತ್ತು. ಸತ್ಯಭಾಮಾ ಅವರು ಬಂದ ಮೇಲೆ ಇದಕ್ಕೆಲ್ಲ ಕಡಿವಾಣ ಹಾಕಿದ್ದಾರೆ ಎನ್ನಲಾಗಿದೆ. ಜಿಲ್ಲೆಯಲ್ಲಿ ದಕ್ಷ ಮಹಿಳಾ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆಂಬ ಮಾತುಗಳೂ ಜಿಲ್ಲೆಯಲ್ಲಿ ಕೇಳಿ ಬರುತ್ತಿವೆ.
30 ಪೊಲೀಸ್ ಅಧಿಕಾರಿಗಳ ವರ್ಗಾವಣೆ ಮಾಡಿದ ಹೊಸ ಐಜಿ, ಕೆಲವರಿಗೆ ಬಡ್ತಿ
ನೂತನ ಎಸ್ಪಿ ನೇಮಕಕ್ಕೆ ಗೂಳಿಹಟ್ಟಿ ಶೇಖರ್ ಅಸಮಾಧಾನ
ಕಾನೂನು ಸುವ್ಯವಸ್ಥೆ ವಿಚಾರದಲ್ಲಿ ಯಾರೊಂದಿಗೂ ರಾಜಿಯಾಗದೇ ಈವರೆಗೆ ಹಲವು ಬದಲಾವಣೆಗಳನ್ನು ತಂದಿದ್ದ ಅಧಿಕಾರಿ ಎನಿಸಿಕೊಂಡಿದ್ದ ಡಾ. ಅರುಣ್ ಅವರ ಸ್ಥಾನಕ್ಕೆ ಬಂದಿರುವ ರಾಧಿಕಾ ಅವರ ಮೇಲೆ ನಿರೀಕ್ಷೆಗಳೂ ಹೆಚ್ಚಿವೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕುರಿತು ಬದಲಾವಣೆ ತರಬೇಕೆಂಬ ನಿಟ್ಟಿನಲ್ಲಿ ಚಿತ್ರದುರ್ಗ ಜಿಲ್ಲೆಗೆ ವರ್ಗಾವಣೆ ಆಗಿ ಬಂದಿರುವ ನೂತನ ಮಹಿಳಾ ಎಸ್ ಪಿ ರಾಧಿಕಾ ಅವರ ಮೇಲೆಯೂ ಜಿಲ್ಲೆಯ ಜನರು ಭಾರೀ ನಿರೀಕ್ಷೆ ಹೊಂದಿದ್ದಾರೆ. ಈ ನಡುವೆ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ರಾಧಿಕಾ ಅವರ ನೇಮಕಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ನಮ್ಮ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯ ಎಸ್ಪಿಯನ್ನು ನೇಮಿಸುವಂತೆ ಸಿಎಂಗೆ ಮನವಿ ಮಾಡಿದ್ದೆವು. ಬಲವಂತವಾಗಿ ನಮ್ಮಿಂದ ಎಸ್ ಪಿ ರಾಧಿಕಾ ನೇಮಕಕ್ಕೆ ಪತ್ರ ತೆಗೆದುಕೊಂಡು, ಹಿರಿಯೂರಿನ ಕಾಂಗ್ರೆಸ್ ನಾಯಕರೊಬ್ಬರ ಸಂಬಂಧಿಯನ್ನು ಎಸ್ಪಿಯಾಗಿ ನೇಮಿಸಿದ್ದಾರೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.